ಬೆಂಗಳೂರು: ಇದೇ ಮೊದಲ ಬಾರಿಗೆ ಅಭ್ಯರ್ಥಿಗಳ ಆಯ್ಕೆಗೆ ರಾಜ್ಯ ಬಿಜೆಪಿಯಲ್ಲಿ ವೋಟಿಂಗ್ ವ್ಯವಸ್ಥೆಯ ಪ್ರಾಯೋಗಿಕ ಪರಿಚಯ ಮಾಡಲಾಗಿದ್ದು, ಚುನಾವಣಾ ಟಿಕೆಟ್ ಸಮಿತಿ ರಚಿಸಿ ಮತಗಳ ಆಧಾರದಲ್ಲಿ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ಗೆ ಕಳುಹಿಸಿ ಕೊಡುವ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ. ನಾಳೆ ವೋಟಿಂಗ್ ನಡೆಯಲಿದ್ದು, ಅಮಿತ್ ಶಾ ಸಮ್ಮುಖದಲ್ಲಿ ಚರ್ಚೆ ನಡೆಸಿ ಹೈಕಮಾಂಡ್ಗೆ ಪಟ್ಟಿ ಕಳುಹಿಸಿಕೊಡಲಾಗುತ್ತದೆ.
ರಾಜ್ಯ ಬಿಜೆಪಿ ಚುನಾವಣಾ ಟಿಕೆಟ್ಗೆ ಸಮಿತಿ ರಚಿಸಲಾಗಿದೆ. ಟಿಕೆಟ್ ಆಯ್ಕೆ ಪ್ರಕ್ರಿಯೆಗಾಗಿ ಶುಕ್ರವಾರ ರಾಜ್ಯಾದ್ಯಂತ ಅಭಿಪ್ರಾಯ ಸಂಗ್ರಹ ಮಾಡಲಿರುವ ಸಮಿತಿ, ಮತದಾನದ ಮೂಲಕ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಸಲಿದೆ. ಯಾರು ಕ್ಷೇತ್ರದ ಅಭ್ಯರ್ಥಿ ಆಗಬೇಕು ಎನ್ನುವ ನಿರ್ಣಯವನ್ನು ಅಭಿಪ್ರಾಯ ಸಂಗ್ರಹದ ಆಧಾರದಲ್ಲಿ ಮಾಡಲಾಗುತ್ತದೆ.
ಯಾರೆಲ್ಲಾ ಮತದಾನ ಪ್ರಕ್ರಿಯೆಯಲ್ಲಿ ಭಾಗಿ ಆಗ್ತಾರೆ?: ಪಕ್ಷದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಮಾಜಿ ಅಧ್ಯಕ್ಷ , ಜಿಲ್ಲಾ ಪಂಚಾಯಿತಿ ಸದಸ್ಯ ಮತ್ತು ಮಾಜಿ ಸದಸ್ಯ, ಕಾರ್ಪೋರೇಟ್ ಮತ್ತು ಮಾಜಿ ಕಾರ್ಪೋರೇಟ್ಸ್, ಪಟ್ಟಣ ಪಂಚಾಯತಿ ಅಧ್ಯಕ್ಷ ಮತ್ತು ಮಾಜಿ ಅಧ್ಯಕ್ಷ, ಶಾಸಕ ಮತ್ತು ಮಾಜಿ ಶಾಸಕ ಮತ್ತು ಸಂಸದ ಮತ್ತು ಮಾಜಿ ಸಂಸದ.
ಇಷ್ಟು ಮಂದಿಯ ಪಕ್ಷದ ಪ್ರಮುಖರು ತಮ್ಮ ಅಭಿಪ್ರಾಯ ತಿಳಿಸಬೇಕು. ಅಭ್ಯರ್ಥಿ ಯಾರಾಗಬೇಕು ಎಂದು ಹೆಸರು ಬರೆದು ಬಾಕ್ಸ್ಗೆ ಹಾಕಬೇಕು. ಪ್ರತಿ ಕ್ಷೇತ್ರದಲ್ಲಿ ಬಾಕ್ಸ್ ಇಡಲಾಗುತ್ತದೆ. ಆ ಬಾಕ್ಸ್ಗಳನ್ನು ನಾಳೆ ಸಂಜೆಯೇ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನಕ್ಕೆ ತರಲಾಗುತ್ತದೆ. ಸಮಿತಿ ಸದಸ್ಯರು ಆ ಬಾಕ್ಸ್ ಓಪನ್ ಮಾಡಬೇಕು. ಯಾರ ಹೆಸರಿಗೆ ಹೆಚ್ಚು ಮಾನ್ಯತೆ ಇದೆ, ಯಾರು ಅಭ್ಯರ್ಥಿ ಆಗಬೇಕು ಎಂದು ಬಯಸಿದ್ದಾರೆ ಎನ್ನುವ ಕುರಿತು ಬಾಕ್ಸ್ ತೆರೆದು ಲೆಕ್ಕಹಾಕಿ ಆ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕು.