ಬೆಂಗಳೂರು: ರಾಜ್ಯಾದ್ಯಂತ ವಿಧಾನಸಭೆ ಚುನಾವಣೆಗೆ ಸಾರ್ವತ್ರಿಕ ಮತದಾನ ನಡೆಯುತ್ತಿದೆ. ಕನ್ನಡ ಚಿತ್ರರಂಗದ ತಾರೆಗಳು ಕೂಡ ತಮ್ಮ ತಮ್ಮ ಸ್ವಗ್ರಾಮಗಳಿಗೆ ಬಂದು ಮತ ಚಲಾಯಿಸುತ್ತಿದ್ದಾರೆ. ಹಿರಿಯನಟ ಹಾಗು ರಾಜ್ಯಸಭೆ ಸದಸ್ಯ ಜಗ್ಗೇಶ್ ಕುಟುಂಬ ಸಮೇತರಾಗಿ ಬಂದು ಬೆಂಗಳೂರಿನ ಮಲ್ಲೇಶ್ವರಂನ ಎಂಇಎಸ್ ಕಾಲೇಜಿನಲ್ಲಿ ವೋಟ್ ಮಾಡಿದರು.
ಅಮೂಲ್ಯ ದಂಪತಿಯಿಂದ ವೋಟಿಂಗ್:ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ಆರ್.ಚಂದ್ರ ಮತ ಹಾಕಿದರು. ನಂತರ ಪ್ರತಿಕ್ರಿಯಿಸಿದ ಅಮೂಲ್ಯ, "ಎಲ್ಲರೂ ಅವರವರ ಮತಗಟ್ಟೆಗೆ ಬಂದು ಓಟ್ ಮಾಡಿ. ಮತದಾನ ನಮ್ಮ ಹಕ್ಕು. ಯಾವುದೇ ರಿತೀಯಿಂದಲೂ ಓಟ್ ಮಿಸ್ ಮಾಡಿಕೊಳ್ಳಬೇಡಿ. ಇದುವರೆಗೆ ನಾನು 5 ಬಾರಿ ವೋಟ್ ಮಾಡಿದ್ದೇನೆ" ಎಂದರು.
ಚಾರ್ಲಿ 777 ಹಾಗು ಲಕ್ಕಿ ಮ್ಯಾನ್ ಸಿನಿಮಾ ಖ್ಯಾತಿಯ ಸಂಗೀತ ಶೃಂಗೇರಿ ಎಂ.ಎಸ್.ಪಾಳ್ಯದ ಉರ್ದು ಸ್ಕೂಲ್ನಲ್ಲಿ ಹಕ್ಕು ಚಲಾಯಿಸಿದರು. ಓಟ್ ಮಾಡಿದ ಫೋಟೋ, ವಿಡಿಯೋ ಹಂಚಿಕೊಂಡು, "ನಾನಂತೂ ವೋಟ್ ಮಾಡಿದ್ದಾಯಿತು. ನೀವೂ ಹೋಗಿ ವೋಟ್ ಮಾಡಿ" ಎಂಬ ಸಂದೇಶ ನೀಡಿದರು.
ರಮೇಶ್ ಅರವಿಂದ್ ದಂಪತಿಯಿಂದ ಮತದಾನ:ಪತ್ನಿ ಅರ್ಚನಾ ಜೊತೆ ನಟ ರಮೇಶ್ ಅರವಿಂದ್ ಮತಗಟ್ಟೆಗೆ ಆಗಮಿಸಿ, ಬನಶಂಕರಿಯ BNM ಶಾಲೆಯ ಬೂತ್ ನಂ. 145 ರಲ್ಲಿ ಮತದಾನ ಮಾಡಿದರು. ದಂಪತಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ಉಮಾಶ್ರಿ ವೋಟಿಂಗ್:ಹಿರಿಯ ನಟಿ, ಮಾಜಿ ಶಾಸಕಿ ಉಮಾಶ್ರಿ ಮತ ಹಾಕಿದರು. ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರದ ರಬಕವಿಯ ಸರ್ಕಾರಿ ಉರ್ದು ಶಾಲೆಯಲ್ಲಿ ಹಕ್ಕು ಚಲಾಯಿಸಿದರು.
ಉಪೇಂದ್ರ ಮತದಾನ: ನಟ ಉಪೇಂದ್ರ ಕತ್ರಿಗುಪ್ಪೆಯ BTL ವಿದ್ಯಾವಾಣಿ ಶಾಲೆಯಲ್ಲಿ ಮತ ಚಲಾಯಿಸಿದರು. ಮತದಾನ ಮಾಡುವುದಕ್ಕೂ ಮೊದಲು ಮಾತನಾಡಿದ ಅವರು, ದೊಡ್ಡದಾಗಿ ಕರ್ನಾಟಕ ಭವಿಷ್ಯ, ದೇಶದ ಭವಿಷ್ಯ ಅಂತೆಲ್ಲ ಹೇಳುವ ಬದಲು ನಮ್ಮ ಭವಿಷ್ಯ, ನಮ್ಮ ಮಕ್ಕಳ ಭವಿಷ್ಯ, ಎಲ್ಲರ ಭವಿಷ್ಯ ಮುಖ್ಯ. ಪ್ರಜಾಪ್ರಭುತ್ವದ ಅತಿ ಮುಖ್ಯವಾದ ದಿನ. ಎಲ್ಲರೂ ಬಂದು ವೋಟ್ ಮಾಡಿ ಎಂದರು.
ಗಣೇಶ್ ದಂಪತಿಯಿಂದ ಓಟಿಂಗ್:ರಾಜರಾಜೇಶ್ವರಿ ನಗರದ ಮತಗಟ್ಟೆಗೆ ಆಗಮಿಸಿದ ನಟ ಗಣೇಶ್ ದಂಪತಿ ಮತ ಚಲಾಯಿಸಿದರು.
ನಟ ಚಂದನ್ ಶೆಟ್ಟಿಯಿಂದ ಮತದಾನ: ನಟ ಹಾಗು ಗಾಯಕ ಚಂದನ್ ಶೆಟ್ಟಿ ನಾಗರಬಾವಿಯಲ್ಲಿ ಓಟಿಂಗ್ ಮಾಡಿದರು.