ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು ವಕೀಲರ ಮೇಲೆ ಹಲ್ಲೆ ಆರೋಪ: ಹೈಕೋರ್ಟ್​ನಲ್ಲಿ ಸ್ವಯಂಪ್ರೇರಿತ ಪ್ರಕರಣ, ವಿಚಾರಣೆ

Chikkamagaluru lawyer assault Case: ಚಿಕ್ಕಮಗಳೂರು ವಕೀಲ ಪ್ರೀತಂ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಹೈಕೋರ್ಟ್​ನಲ್ಲಿ ಸ್ವಯಂಪ್ರೇರಿತ ಪ್ರಕರಣವನ್ನಾಗಿಸಿ ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.

By ETV Bharat Karnataka Team

Published : Dec 1, 2023, 10:06 PM IST

voluntary-case-in-high-court-on-chikkamagaluru-lawyer-assault-allegation
ಚಿಕ್ಕಮಗಳೂರು ವಕೀಲರ ಮೇಲೆ ಹಲ್ಲೆ ಆರೋಪ : ಹೈಕೋರ್ಟ್​ನಲ್ಲಿ ಸ್ವಯಂಪ್ರೇರಿತ ಪ್ರಕರಣ

ಬೆಂಗಳೂರು:ಚಿಕ್ಕಮಗಳೂರಿನ ವಕೀಲ ಪ್ರೀತಂ ಮೇಲಿನ ಹಲ್ಲೆ ಆರೋಪ ಸಂಬಂಧ ಒಬ್ಬರು ಎಎಸ್​ಐ, ಒಬ್ಬರು ಪಿಎಸ್​ಐ ಹಾಗೂ ಮೂವರು ಪೊಲೀಸ್​ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ರಾಜ್ಯ ಅಡ್ವೋಕೇಟ್​ ಜನರಲ್​ ಕೆ. ಶಶಿಕಿರಣ್​ ಶೆಟ್ಟಿ ಹೈಕೋರ್ಟ್​ಗೆ ಮಾಹಿತಿ ನೀಡಿದರು.

ವಕೀಲ ಪ್ರೀತಂ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಬೆಂಗಳೂರಿನ ವಕೀಲರ ಸಂಘ ನೀಡಿದ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತ ಪ್ರಕರಣವನ್ನಾಗಿಸಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಹಾಜರಾಗಿದ್ದ ಅಡ್ವೋಕೇಟ್​ ಜನರಲ್​, ಘಟನೆ ಸಂಬಂಧ ಆರು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ವಿವರಿಸಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.

ನ್ಯಾಯಾಲಯದ ಬೆಳಗಿನ ಕಲಾಪದಲ್ಲಿ ಪ್ರಕರಣವನ್ನು ಪ್ರಸ್ತಾಪಿಸಿದ ನ್ಯಾಯಪೀಠ, ಘಟನೆ ಸಂಬಂಧ ಅಗತ್ಯ ಮಾಹಿತಿಯೊಂದಿಗೆ ಬರುವಂತೆ ಅಡ್ವೊಕೇಟ್ ಜನರಲ್​ಗೆ ತಿಳಿಸಿದ್ದರು. ಮಧ್ಯಾಹ್ನದ ಕಲಾಪದಲ್ಲಿ ಎ.ಜಿ ಅಧಿಕಾರಿಗಳಿಂದ ಮಾಹಿತಿ ಪಡೆದು ವಿವರಣೆ ನೀಡಿದರು. ಭೋಜನಾ ಸಮಯದ ನಂತರ ಪೀಠವು ವಿಸ್ತೃತವಾಗಿ ಪ್ರಕರಣವನ್ನು ಆಲಿಸಿತು.

ಸಂತ್ರಸ್ತ ವಕೀಲ ಪ್ರೀತಂ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ಅದರಂತೆ ಐಪಿಸಿ ವಿವಿಧ ಸೆಕ್ಷನ್​ಗಳ ಅಡಿ ಚಿಕ್ಕಮಗಳೂರು ಟೌನ್ ಪೊಲೀಸ್​​ ಠಾಣೆಯಲ್ಲಿ ಡಿಸೆಂಬರ್ 1ರ ಮಧ್ಯರಾತ್ರಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಗಂಭೀರತೆ ಅರಿತು ಮತ್ತು ಕರ್ತವ್ಯಲೋಪದ ಮೇಲೆ ಆರು ಮಂದಿ ಪೊಲೀಸರನ್ನು ಡಿಸೆಂಬರ್ 1ರಂದು ಅಮಾನತು ಮಾಡಲಾಗಿದೆ. ಈ ಪೈಕಿ ಒಬ್ಬರು ಸಹಾಯಕ ಪೊಲೀಸ್ ಇನ್ಸ್​ಪೆಕ್ಟರ್, ಒಬ್ಬರು ಪಿಎಸ್ಐ ಮತ್ತು ನಾಲ್ವರು ಕಾನ್ಸ್​ಟೇಬಲ್​ಗಳಾಗಿದ್ದಾರೆ. ಪ್ರಕರಣದ ತನಿಖೆಯನ್ನು ಚಿಕ್ಕಮಗಳೂರು ಉಪವಿಭಾಗದ ಡಿವೈಎಸ್ಪಿ ಎಚ್ ಎಂ ಶೈಲೇಂದ್ರ ಅವರಿಗೆ ವಹಿಸಲಾಗಿದೆ. ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಮಲ್ಲೇಗೌಡ ಅವರಿಂದ ವರದಿಯನ್ನೂ ತರಿಸಿಕೊಳ್ಳಲಾಗಿದೆ ಎಂದು ಎಂದು ವಿವರಿಸಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿಶಾಲ್ ರಘು ಮತ್ತು ಕೆಎಸ್​ಬಿಸಿ ಕಾರ್ಯದರ್ಶಿ ಹಾಗೂ ಹಿರಿಯ ವಕೀಲ ಎಸ್ ಬಸವರಾಜ ಅವರು ವಕೀಲರ ಮೇಲಿನ ದೌರ್ಜನ್ಯ ನಿಷೇಧ ಮಸೂದೆಯು ಸಕ್ಷಮ ಪ್ರಾಧಿಕಾರದ ಮುಂದೆ ಪರಿಗಣನೆಗೆ ಬಾಕಿ ಇದೆ ಎಂದು ತಿಳಿಸಿದ್ದಾರೆ. ಹೀಗಾಗಿ, ಈ ಹಂತದಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಅಥವಾ ಯಾವುದೇ ನಿರ್ದೇಶನ ನೀಡುವುದು ನಮಗೆ ಸಾಧ್ಯವಿಲ್ಲ ಎಂದು ಪೀಠ ತಿಳಿಸಿತು.

ಚಿಕ್ಕಮಗಳೂರಿನ ಪ್ರತಿಭಟನಾ ಸ್ಥಳದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅವರಿಗೆ ಅಡ್ವೊಕೇಟ್ ಜನರಲ್ ಅವರು ವೈಯಕ್ತಿಕವಾಗಿ ಪ್ರಕರಣ ಪರಿಶೀಲಿಸುತ್ತಿದ್ದು, ಯಾವುದೇ ತೆರನಾದ ಗಂಭೀರ ಕ್ರಮಗಳನ್ನು ಕೈಗೊಳ್ಳದಂತೆ ವಕೀಲರಿಗೆ ತಿಳಿಸಲಾಗಿದೆ. ನ್ಯಾಯಾಲಯದ ಕೆಲಸದಿಂದ ದೂರ ಉಳಿಯದಂತೆ ವಕೀಲರಿಗೆ ತಿಳಿಸುವಂತೆಯೂ ಸೂಚಿಸಲಾಗಿದೆ. ಇದಕ್ಕೆ ರೆಡ್ಡಿ ಅವರು ಚಿಕ್ಕಮಗಳೂರಿನ ವಕೀಲರ ಸಂಘಕ್ಕೆ ನ್ಯಾಯಾಲಯದ ವಿಚಾರಗಳನ್ನು ತಿಳಿಸಿ, ಕರ್ತವ್ಯಕ್ಕೆ ಮರಳುವಂತೆ ಕೋರಲಾಗುವುದು ಎಂದಿದ್ದಾರೆ ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

ಇದನ್ನೂ ಓದಿ:ವಕೀಲನ ಮೇಲೆ ಹಲ್ಲೆ ಆರೋಪ: ಪಿಎಸ್​ಐ, ಎಎಸ್​ಐ ಸೇರಿ ಆರು ಸಿಬ್ಬಂದಿ ಅಮಾನತುಗೊಳಿಸಿದ ಎಸ್​​​ಪಿ

ABOUT THE AUTHOR

...view details