ಕರ್ನಾಟಕ

karnataka

By

Published : Jan 31, 2023, 5:08 PM IST

ETV Bharat / state

ರೈತ ವಿದ್ಯಾನಿಧಿ ಯೋಜನೆಯಡಿ 21.8 ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನ: ಕೃಷಿ ಕಾರ್ಮಿಕರ ಮಕ್ಕಳಿಗೂ ವಿದ್ಯಾನಿಧಿ ಭಾಗ್ಯ

ಕೃಷಿ ಕಾರ್ಮಿಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಣೆ - 360 ಕೋಟಿ ಅನುದಾನ ಮೀಸಲಿಟ್ಟ ರಾಜ್ಯ ಸರ್ಕಾರ - www.ssp.karnataka.gov.in ವೆಬ್ ಸೈಟ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ.

Vidyanidhi for children of agricultural workers
ಕೃಷಿ ಕಾರ್ಮಿಕರ ಮಕ್ಕಳಿಗೂ ವಿದ್ಯಾನಿಧಿ ಭಾಗ್ಯ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕನಸಿನ ಯೋಜನೆಯಾದ ರೈತ ವಿದ್ಯಾನಿಧಿ ಯೋಜನೆಯಡಿ ಕಳೆದ ಎರಡು ವರ್ಷಗಳಲ್ಲಿ 21.8 ಲಕ್ಷ ರೈತರ ಮಕ್ಕಳು ವಿದ್ಯಾರ್ಥಿ ವೇತನ ಪಡೆದುಕೊಂಡಿದ್ದು, ಈ ಬಾರಿ ಭೂ ಒಡೆತನ ಹೊಂದಿರದ ಕೃಷಿ ಕಾರ್ಮಿಕರಿಗೂ ಯೋಜನೆ ವಿಸ್ತರಣೆ ಮಾಡಿರುವುದರಿಂದ ಸಿಎಂ ರೈತ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 5-6 ಲಕ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ಬಸವರಾಜ ಬೊಮ್ಮಾಯಿ ಪ್ರಕಟಿಸಿದ ಮೊದಲ ಯೋಜನೆ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ, ಎಸ್ಎಸ್ಎಲ್​ಸಿ ಮುಗಿಸಿ ವ್ಯಾಸಂಗ ಮುಂದುವರೆಸುವ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮಹತ್ವದ ರೈತ ವಿದ್ಯಾನಿಧಿ ಯೋಜನೆಯಡಿ 2021-22ನೇ ಶೈಕ್ಷಣಿಕ ವರ್ಷದಲ್ಲಿ 10,39,165 ವಿದ್ಯಾರ್ಥಿಗಳಿಗೆ ಹಾಗು 2022-23ನೇ ಶೈಕ್ಷಣಿಕ ವರ್ಷದ 11,43,880 ವಿದ್ಯಾರ್ಥಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಹಣ ವರ್ಗಾಯಿಸಲು ಮಂಜೂರಾತಿ ನೀಡಲಾಗಿದೆ.

ವಿದ್ಯಾರ್ಥಿ ವೇತನಕ್ಕೆ ಸ್ವೀಕೃತಗೊಂಡ ಅರ್ಜಿಗಳಲ್ಲಿ ಈವರೆಗೂ 3,306 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಆಧಾರ್​ನಲ್ಲಿರುವ ಹೆಸರು ಹಾಗು ಅರ್ಜಿಯಲ್ಲಿ ನಮೂದಿಸಿರುವ ಹೆಸರು ಹೊಂದಾಣಿಕೆಯಾಗದೇ ಇರುವುದರಿಂದ, ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆ ಹೊಂದಿಲ್ಲದಿರುವುದರಿಂದ, ಎಫ್ಐಡಿಯಲ್ಲಿ ಭೂಮಿ ವಿವರ ದಾಖಲು ಮಾಡದೇ ಇರುವುದರಿಂದ, ವಿದ್ಯಾರ್ಥಿಯ ಕುಟುಂಬದ ಯಾವ ಸದಸ್ಯರೂ ಭೂಮಿ ಹೊಂದಿರುವ ರೈತರಾಗಿಲ್ಲದಿರುವುದರಿಂದ ಈ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

ರೈತ ವಿದ್ಯಾನಿಧಿ ಯೋಜನೆಗೆ 2022-23ನೇ ಸಾಲಿಗೆ 1,010 ಕೋಟಿ ಅನುದಾನ ನಿಗದಿಪಡಿಸಿದ್ದು, ರೈತ ಕುಟುಂಬದ ಎಲ್ಲಾ ಮಕ್ಕಳು ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಿದ್ದಾರೆ. ಇ ಆಢಳಿತ ಇಲಾಖೆ ನಿರ್ವಹಿಸುತ್ತಿರುವ ಕುಟುಂಬ ತಂತ್ರಾಂಶದ ದತ್ತಾಂಶದಲ್ಲಿ ದಾಖಲಾಗಿರುವ ಸದಸ್ಯರು, ವಿದ್ಯಾರ್ಥಿಯು ಇತರ ಯಾವುದೇ ವಿದ್ಯಾರ್ಥಿ ವೇತನ ಪಡೆಯುತ್ತಿದ್ದರೂ ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ ಪಡೆಯಲು ಅರ್ಹರು.

ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ ವಿತರಿಸುವ ಉದ್ದೇಶಕ್ಕೆ ರಾಜ್ಯದ ವಿವಿಧ ಇಲಾಖೆಗಳು ನಿರ್ವಹಿಸುತ್ತಿರುವ ಶೈಕ್ಷಣಿಕ ಹಾಗು ಇತರ ದತ್ತಾಂಶದ ಆಧಾರದ ಮೇಲೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ವಿದ್ಯಾರ್ಥಿ ವೇತನ ವಿತರಿಸುವುದು. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದಲ್ಲಿ ಅಂತಹ ಪ್ರಕರಣಗಳನ್ನು ಸಹ ಪರಿಗಣಿಸಿ ಅರ್ಹರಿಗೆ ವಿದ್ಯಾರ್ಥಿ ವೇತನವನ್ನು ನೇರ ನಗದು ವರ್ಗಾವಣೆ ಮೂಲಕ ವರ್ಗಾಯಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆಯಂತೆ ಕೃಷಿ ಇಲಾಖೆ ಕ್ರಮ ಕೈಗೊಂಡಿದೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿ ವೇತನದ ವಿವರ:ಪ್ರೌಢಶಾಲಾ ಶಿಕ್ಷಣ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಆದರೆ ವಿದ್ಯಾರ್ಥಿನಿಯರಿಗೆ 2 ಸಾವಿರ ನಿಗದಿಪಡಿಸಲಾಗಿದೆ. ಪಿಯುಸಿ, ಐಟಿಐ, ಡಿಪ್ಲೊಮಾ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ 2,500 ರೂ. ವಿದ್ಯಾರ್ಥಿನಿಯರಿಗೆ 3,000 ರೂ. ವಿದ್ಯಾರ್ಥಿ ವೇತನ, ಬಿಎ, ಬಿಎಸ್​ಸಿ, ಬಿಕಾಂ ಇನ್ನಿತರ ಪದವಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ 5,000, ವಿದ್ಯಾರ್ಥಿನಿಯರಿಗೆ 5,500 ರೂ. ವಿದ್ಯಾರ್ಥಿ ವೇತನ. ಎಲ್ಎಲ್​ಬಿ, ಪ್ಯಾರಾಮೆಡಿಕಲ್, ಬಿ.ಫಾರ್ಮ್, ನರ್ಸಿಂಗ್ ಇನ್ನಿತರ ವೃತ್ತಿಪರ ಕೋರ್ಸ್​ಗಳ ವಿದ್ಯಾರ್ಥಿಗಳಿಗೆ 7,500 ರೂ. ವಿದ್ಯಾರ್ಥಿನಿಯರಿಗೆ 8,000 ರೂ. ವಿದ್ಯಾರ್ಥಿ ವೇತನ ಮತ್ತು ಎಂಬಿಬಿಎಸ್, ಬಿಇ, ಬಿಟೆಕ್ ಸೇರಿ ಎಲ್ಲಾ ಸ್ನಾತಕೋತ್ತರ ಕೋರ್ಸ್​ಗಳ ವಿದ್ಯಾರ್ಥಿಗಳಿಗೆ 10 ಸಾವಿರ, ವಿದ್ಯಾರ್ಥಿನಿಯರಿಗೆ 11 ಸಾವಿರ ರೂ. ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಯೋಜನೆ ವಿಸ್ತರಣೆ:2022-23ನೇ ಶೈಕ್ಷಣಿಕ ಸಾಲಿನಿಂದ ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಕಾರ್ಯಕ್ರಮವನ್ನು ಕೃಷಿ ಕಾರ್ಮಿಕರ ಮಕ್ಕಳಿಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ಯೋಜನೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿರುವುದರಿಂದ ಕೃಷಿ ಕಾರ್ಮಿಕರ ಮಕ್ಕಳಿಗೂ ವಿದ್ಯಾರ್ಥಿ ವೇತನ ಲಭ್ಯವಾಗಲಿದೆ. ರಾಜ್ಯದಲ್ಲಿ 18 ಲಕ್ಷ ಕೃಷಿ ಕಾರ್ಮಿಕ ಕುಟುಂಬಗಳಿದ್ದು, 6 ಲಕ್ಷ ವಿದ್ಯಾರ್ಥಿ, ವಿದ್ಯಾರ್ಥಿನಿಯರಿದ್ದಾರೆ. ಈ ಎಲ್ಲರಿಗೂ ವಿದ್ಯಾರ್ಥಿ ವೇತನ ಲಭ್ಯವಾಗಲಿದೆ. ಇದಕ್ಕೆ ಬೇಕಾದ ಹೆಚ್ಚುವರಿ ಅನುದಾನ 360 ಕೋಟಿಯನ್ನು ಬಿಡುಗಡೆ ಮಾಡಲು ಪೂರಕ ಅಂದಾಜಿನಲ್ಲಿ ಒಪ್ಪಿಗೆ ಪಡೆದುಕೊಳ್ಳಲಾಗಿದೆ. ಹಾಗಾಗಿ www.ssp.karnataka.gov.in ವೆಬ್ ಸೈಟ್ ಮೂಲಕ ರೈತರ ಮಕ್ಕಳ ಜೊತೆ ಕೃಷಿ ಕಾರ್ಮಿಕರ ಮಕ್ಕಳೂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ:ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಬಿ ಎಸ್​ ಯಡಿಯೂರಪ್ಪ ವಿಶ್ವಾಸ

ABOUT THE AUTHOR

...view details