ಕರ್ನಾಟಕ

karnataka

ETV Bharat / state

ಗೌಪ್ಯತೆಯಲ್ಲಿ ನಡೀತು ಪರಿಷತ್ ನಾಮನಿರ್ದೇಶನ ಪ್ರಕ್ರಿಯೆ: ಕಡೆಗೂ ಆಪ್ತರ ಕೈಹಿಡಿದ ಸಿಎಂ - Vidhanaparishath

ಬಿಜೆಪಿ ನಾಯಕರು ಯಾವುದೇ ಸುಳಿವು ಸಿಗದ ರೀತಿಯಲ್ಲಿ ವಿಧಾನಪರಿಷತ್​​ಗೆ ನಾಮನಿರ್ದೇಶನ ಮಾಡಿದ್ದು ಹೆಚ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್, ಭಾರತಿ ಶೆಟ್ಟಿ, ಸಾಯಿಬಣ್ಣ ತಳವಾರ ಹಾಗು ಶಾಂತಾರಾಂ ಸಿದ್ದಿ ಸ್ಥಾನ ಪಡೆದಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

By

Published : Jul 22, 2020, 7:15 PM IST

ಬೆಂಗಳೂರು: ರಾಜ್ಯಸಭೆ ಹಾಗು ವಿಧಾನಪರಿಷತ್​​ ಅಭ್ಯರ್ಥಿಗಳ ಆಯ್ಕೆಗಾಗಿ ಹೈಕಮಾಂಡ್ ಮಟ್ಟದಲ್ಲಿ ಆಕಾಂಕ್ಷಿಗಳಿಂದ ನಡೆದ ಲಾಬಿಯಂತಹ ಚಟುವಟಿಕೆಯಿಂದ ಎಚ್ಚೆತ್ತುಕೊಂಡಿದ್ದ ಬಿಜೆಪಿ ನಾಯಕರು, ಇದೀಗ ಯಾವುದೇ ಸುಳಿವು ಸಿಗದ ರೀತಿಯಲ್ಲಿ ವಿಧಾನ ಪರಿಷತ್​​ಗೆ ನಾಮನಿರ್ದೇಶನ ಮಾಡಿದ್ದಾರೆ.

ರಾಜ್ಯಪಾಲರ ಜೊತೆ ಕೇವಲ 12 ನಿಮಿಷದ ಮಾತುಕತೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಮನಿರ್ದೇಶನಕ್ಕೆ ಸಹಿ ಮಾಡುವಂತೆ ಮನವಿ ಮಾಡಿ ಮಾತುಕತೆ ನಡೆಸಿದರು. ಬೆಳಗ್ಗೆ 11.25ಕ್ಕೆ ರಾಜಭವನಕ್ಕೆ ಭೇಟಿ ನೀಡಿದ್ದ ಸಿಎಂ 11.37ಕ್ಕೆ ವಾಪಸ್ ಬಂದರು. ಅಷ್ಟರಲ್ಲೇ ತಮ್ಮ ಪಟ್ಟಿಗೆ ಸಹಿ ಪಡೆದುಕೊಂಡರು. ನಂತರ ವಿಧಾನಸೌಧಕ್ಕೆ11.45 ಕ್ಕೆ ತೆರಳಿ 12.25 ರವರೆಗಿದ್ದು ಅಂಕಿತ ಪಡೆದ ನಾಮನಿರ್ದೇಶಿತರ ಪಟ್ಟಿಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸುವಂತೆ ಸೂಚನೆ ನೀಡಿದರು. ಸರಿಯಾಗಿ 12.30 ಕ್ಕೆ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿ ವಲಯವಾರು ಜನಪ್ರತಿನಿಧಿಗಳ ಸಭೆಯನ್ನು ಸಿಎಂ ಮುಂದುವರೆಸಿದರು. ಇಂದಿನ ಭೇಟಿ ನಾಮನಿರ್ದೇಶನ ವಿಚಾರ ಸಂಬಂಧ ಎಂದು ಯಾರಿಗೂ ಸಣ್ಣ ಸುಳಿವನ್ನೂ ಕೊಡದೆ ಸಿಎಂ ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಿ ಮುಗಿಸಿದರು.

ವಿಧಾನಪರಿಷತ್ ನಾಮನಿರ್ದೇಶನಗೊಂಡ ಹೆಸರುಗಳು

ನಾಮನಿರ್ದೇಶನಕ್ಕೆ ಪಕ್ಷದ ಒಳಗೂ ಇತ್ತೀಚೆಗೆ ಚರ್ಚೆ ನಡೆದಿದೆ. ಈ ವೇಳೆ ಯಡಿಯೂರಪ್ಪ ಸ್ಪಷ್ಟವಾಗಿ ಎರಡು ಸ್ಥಾನ ತಮಗೆ ಬೇಕು ಎಂದು ತಿಳಿಸಿದ್ದು, ಉಳಿದ ಸ್ಥಾನಕ್ಕೆ ಪಕ್ಷದಿಂದ ಯಾರನ್ನಾದರೂ ಆಯ್ಕೆ ಮಾಡಿ ಎಂದು ಹೇಳಿದ್ದರು. ಅದರಂತೆ ಬಿಜೆಪಿಯಿಂದ 1, ಆರ್​ಎಸ್​ಎಸ್ ಸೂಚಿತ 2 ಹೆಸರುಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಂತಿಮಗೊಳಿಸಿ, ಮೂರು ಹೆಸರುಗಳನ್ನು ಎರಡು ದಿನದ ಕೆಳಗೆ ಸಿಎಂಗೆ ನೀಡಿದ್ದರು. ಸಿಎಂ ನಿವಾಸ ಕಾವೇರಿಗೆ ಭೇಟಿ ನೀಡಿ ಪಟ್ಟಿಯನ್ನು ಕೊಟ್ಟು ನಾಮನಿರ್ದೇಶನ ಸಂಬಂಧ ಅಂತಿಮ ಸುತ್ತಿನ ಮಾತುಕತೆ ನಡೆಸಿದ್ದರು. ಆ ವೇಳೆಯಲ್ಲೇ ಐದು ಹೆಸರನ್ನು ಅಂತಿಮಗೊಳಿಸಿದ್ದು, ನಾಮನಿರ್ದೇಶನ ಮಾಡುವ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದು ಇಂದು ಅಧಿಸೂಚನೆ ಹೊರಡಿಸಲಾಗಿದೆ.

ಕಳೆದ ಒಂದು ವಾರದಿಂದ ಬಿಜೆಪಿ ಪಾಳಯದಲ್ಲಿ ನಾಮನಿರ್ದೇಶನ ವಿಚಾರದಲ್ಲಿ ಹಲವು ಸುತ್ತಿನ ಸಭೆಗಳನ್ನು ಆಂತರಿಕವಾಗಿ ನಡೆಸಲಾಗಿದೆ. ಆದರೆ ಮಾಹಿತಿಯನ್ನು ಗೌಪ್ಯವಾಗಿ ಇರಿಸಿಕೊಂಡು ಎಲ್ಲಾ ಪ್ರಕ್ರಿಯೆ ನಡೆಸಲಾಗಿದೆ. ಮಾಧ್ಯಮಗಳಿಗೆ ವಿಷಯ ಸೋರಿಕೆಯಾದಲ್ಲಿ ಆಕಾಂಕ್ಷಿಗಳಿಂದ ಲಾಬಿ ಶುರುವಾಗಲಿದೆ ಎನ್ನುವ ಕಾರಣಕ್ಕೆ ಗೌಪ್ಯತೆ ಕಾಯ್ದುಕೊಂಡು ನಾಮನಿರ್ದೇಶನ ಪ್ರಕ್ರಿಯೆಯನ್ನು ನಡೆಸಲಾಗಿದೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಹೆಚ್.ವಿಶ್ವನಾಥ್​ಗೆ ಕಡೆಗೂ ಪರಿಷತ್ ಸ್ಥಾನ ಸಿಕ್ಕಿದೆ. ಅವಕಾಶ ಮಾಡಿಕೊಡುವ ಭರವಸೆ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಡೆಗೂ ನಾಮನಿರ್ದೇಶನ ಮಾಡಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಿಯೇ ಗೆಲ್ಲಬೇಕು, ನಾಮನಿರ್ದೇಶನ ಮಾಡಲು ಬರುವುದಿಲ್ಲ ಎನ್ನುವ ತರ್ಕದ ನಡುವೆಯೂ ನಾಮನಿರ್ದೇಶನ ಮಾಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಸಿ.ಪಿ. ಯೋಗೀಶ್ವರ್​ಗೆ ಕಲಾಕ್ಷೇತ್ರದಲ್ಲಿನ ಸೇವೆಯಡಿ ಪರಿಷತ್​ಗೆ ನಾಮನಿರ್ದೇಶನ ಮಾಡಲಾಗಿದೆ. ಬಿಜೆಪಿ ಸರ್ಕಾರ ರಚನೆಯಲ್ಲಿ ಸಿ.ಪಿ. ಯೋಗೀಶ್ವರ್ ಕೂಡ ಪಾತ್ರ ವಹಿಸಿದ್ದರು. ರೆಸಾರ್ಟ್ ರಾಜಕಾರಣದ ವೇಳೆ ಸಕ್ರೀಯರಾಗಿದ್ದ ಕಾರಣ ಹಾಗು ಬಿಎಸ್​ವೈ ರಾಜಕೀಯ ಕಾರ್ಯದರ್ಶಿ ಸಂತೋಷ್ ಒತ್ತಡ ಹೇರಿ ಸಿಪಿವೈ ಸರ್ಕಾರ ರಚನೆಗೆ ಸಹಕಾರ ನೀಡಿದ್ದಾರೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಸಿ.ಪಿ. ಯೋಗೀಶ್ವರ್​ಗೆ ಅವಕಾಶ ಕಲ್ಪಿಸಲಾಗಿದೆ ಎನ್ನಲಾಗುತ್ತಿದೆ.

ಸಮಾಜಸೇವೆ ಕೋಟಾದಲ್ಲಿ ಬಿಜೆಪಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಬಿಜೆಪಿ ನಾಯಕರು ಹಾಗು ಆರ್​ಎಸ್​ಎಸ್​ನ ವಿರೋಧವಿಲ್ಲದ ಕಾರಣಕ್ಕೆ ಅನಾಯಾಸವಾಗಿ ಅವರಿಗೆ ಪರಿಷತ್ತಿನ ಸ್ಥಾನ ಒಲಿದುಬಂದಿದೆ.

ಶಾಂತರಾಮ ಬುದ್ನ ಸಿದ್ದಿ ಅವರಿಗೆ ವನವಾಸಿ ಕಲ್ಯಾಣ ಸೇವೆ ಮಾಡಿದ್ದಕ್ಕೆ, ಡಾ.ತಳವಾರ ಸಾಬಣ್ಣ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ನಾಮನಿರ್ದೇಶನ ಮಾಡಲಾಗಿದೆ. ಈ ಇಬ್ಬರೂ ಆರ್​ಎಸ್​ಎಸ್​ನ ಶಿಫಾರಸಿನಂತೆ ನಾಮನಿರ್ದೇಶನ ಮಾಡಲಾಗಿದೆ ಎನ್ನಲಾಗಿದೆ.

ABOUT THE AUTHOR

...view details