ಬೆಂಗಳೂರು: ಯುನೈಟೆಡ್ ಕಿಂಗ್ಡಮ್ನ (ಯುಕೆ) 22 ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸುವ ಉಪ ಕುಲಪತಿಗಳ ನಿಯೋಗವು ಎರಡು ದಿನಗಳ ಭೇಟಿಗಾಗಿ ನಗರಕ್ಕೆ ಗುರುವಾರ ಆಗಮಿಸಿದೆ. ಇದು ದೇಶಕ್ಕೆ ಇದುವರೆಗೆ ಭೇಟಿ ಕೊಟ್ಟಿರುವ ಯುಕೆ ಉಪ ಕುಲಪತಿಗಳ ಅತ್ಯಂತ ದೊಡ್ಡ ನಿಯೋಗ ಎನ್ನಲಾಗಿದೆ.
ರಾಜ್ಯದಲ್ಲಿ ಉನ್ನತ ಶಿಕ್ಷಣ ಕ್ರಮದಲ್ಲಿ ಅನುಷ್ಠಾನಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ- 2020)ಯು ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಒತ್ತು ನೀಡುವ ಆಶಯ ಹೊಂದಿದ್ದು, ಅದಕ್ಕನುಗುಣವಾಗಿ ಸಹಭಾಗಿತ್ವ ಪಾಲುದಾರಿಕೆ ಸಾಧ್ಯತೆಗಳನ್ನು ಗುರುತಿಸಲು ನಿಯೋಗ ಗಮನ ಕೇಂದ್ರೀಕರಿಸಲಿದೆ.
ರಾಜ್ಯದ ಉನ್ನತ ಶಿಕ್ಷಣ ಸಚಿವರ ನಿಯೋಗವು ಮೇ ತಿಂಗಳಲ್ಲಿ ಲಂಡನ್ಗೆ ಭೇಟಿ ಕೊಟ್ಟು ವಿಶ್ವ ಶಿಕ್ಷಣ ಸಮಾವೇಶ (ಇ.ಡಬ್ಲ್ಯು.ಎಫ್)ದಲ್ಲಿ ಪಾಲ್ಗೊಂಡಿತ್ತು. ಈ ಸಂದರ್ಭದಲ್ಲಿ ಸಚಿವರ ನಿಯೋಗವು ಯುಕೆಯ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿತ್ತು. ಜೊತೆಗೆ, ಕೆಲವು ವಿಶ್ವವಿದ್ಯಾಲಯಗಳಿಗೆ ಭೇಟಿ ಕೊಟ್ಟಿತ್ತು. ಅದರ ಬೆನ್ನಲ್ಲೇ ಯುಕೆ ಉಪ-ಕುಲಪತಿಗಳ ನಿಯೋಗವು ರಾಜ್ಯಕ್ಕೆ ಬಂದಿದೆ.
ಬೋಧಕರ ವಿನಿಮಯಕ್ಕೆ ಅವಕಾಶ:ಎರಡೂ ರಾಷ್ಟ್ರಗಳ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ವಿದ್ಯಾರ್ಥಿಗಳ ಹಾಗೂ ಬೋಧಕರ ವಿನಿಮಯಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲು ಹಾಗೂ ಸಂಶೋಧನಾ ಉತ್ಕೃಷ್ಟತೆ ಸಾಧಿಸಲು ಪೂರಕವಾಗುವಂತೆ ಸಹಭಾಗಿತ್ವದ ಸಾಧ್ಯತೆಗಳನ್ನು ಗುರುತಿಸಲು ಯು.ಕೆ. ಉಪ-ಕುಲಪತಿಗಳ ತಂಡವು ಉತ್ಸಾಹದಿಂದಿದೆ. ಇದೇ ಸಂದರ್ಭದಲ್ಲಿ ನಗರದಲ್ಲಿ ಎರಡು ದಿನಗಳ ದುಂಡುಮೇಜಿನ ಶೈಕ್ಷಣಿಕ ಸಮಾಲೋಚನಾ ಸಭೆಯನ್ನು ಏರ್ಪಡಿಸಲಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ನಾರಾಯಣ ಮಾತನಾಡಿ, ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಳು ಭಾರತ- ಯುನೈಟೆಡ್ ಕಿಂಗ್ಡಮ್ ನಡುವಿನ ಸಂಬಂಧದ ಆಧಾರಸ್ತಂಭಗಳಾಗಿವೆ. ಎನ್ಇಪಿಗೆ ತಕ್ಕಂತೆ ಎರಡೂ ಕಡೆಯ ವಿವಿಗಳ ನಡುವೆ ಸಹಕಾರ ಬಲವರ್ಧನೆಯ ಉದ್ದೇಶದೊಂದಿಗೆ ಹೋದ ವರ್ಷವೇ ಭಾರತ-ಯುಕೆ ನೀಲನಕ್ಷೆ 2030 ಕಾರ್ಯಕ್ರಮವನ್ನು ಘೋಷಿಸಲಾಗಿದೆ. ಸಹಭಾಗಿತ್ವದಿಂದಾಗಿ ವಿದ್ಯಾರ್ಥಿಗಳು, ಬೋಧಕರು ಮತ್ತು ಸಂಶೋಧಕರ ದ್ವಿಮುಖ ವಿನಿಮಯ ಸುಗಮವಾಗಿ ನಡೆಯಲಿದೆ ಎಂದು ವಿವರಿಸಿದರು.
ಆತ್ಮನಿರ್ಭರ ಭಾರತ ನಿರ್ಮಾಣ ಸಾಕಾರ: ಇದಕ್ಕೆ ಪೂರಕವಾಗಿ ವಿಶ್ವದ ಪ್ರತಿಷ್ಠಿತ ವಿವಿಗಳು ಕರ್ನಾಟಕದಲ್ಲಿ ತಮ್ಮ ಕ್ಯಾಂಪಸ್ಗಳನ್ನು ತೆರೆಯಲು ಉತ್ಸುಕವಾಗಿವೆ. ಎನ್ಇಪಿ ಜಾರಿಯಲ್ಲಿ ರಾಜ್ಯವು ಮುಂಚೂಣಿಯಲ್ಲಿರುವುದು ವರದಾನವಾಗಿದ್ದು, ಇದರಿಂದ ಆತ್ಮನಿರ್ಭರ ಭಾರತ ನಿರ್ಮಾಣ ಕೂಡ ಸಾಕಾರಗೊಳ್ಳಲಿದೆ.