ಬೆಂಗಳೂರು:ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆ ಹಾಗೂ ಶಾಸಕರ ಭವನಕ್ಕೆ ಮಾಧ್ಯಮಗಳಿಗೆ ನಿಷೇಧ ಹೇರಿದ್ದು ಖಂಡನೀಯ. ಕೂಡಲೇ ಈ ನಿರ್ಧಾರ ಹಿಂಪಡೆಯಬೇಕೆಂದು ಆಗ್ರಹಿಸಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ವಿಧಾನಸಭೆ ಹಾಗೂ ಶಾಸಕರ ಭವನಕ್ಕೆ ಮಾಧ್ಯಮಗಳ ನಿಷೇಧ ಖಂಡಿಸಿ ಶಾಸಕರ ಭವನದ ಮುಂದೆ ಪ್ರತಿಭಟನೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನದಲ್ಲಿ ಈ ಸಂಸ್ಥೆಗಳಿಗೆ ಅಘಾದವಾದ ಶಕ್ತಿಯಿದೆ. ಆದರೆ ಕರ್ನಾಟಕದ ಸ್ಪೀಕರ್ ಶಾಸನಸಭೆಗೆ ಮತ್ತು ಶಾಸಕರ ಭವನಕ್ಕೆ ಟಿವಿ ಮಾಧ್ಯಮದವರು ಬರಬಾರದೆಂದು ಆದೇಶ ಹೊರಡಿಸಿದ್ದಾರೆ. ಇದು ನಿಜಕ್ಕೂ ಗೌರವ ತರುವಂತಹದ್ದಲ್ಲ. ನಾಗರಿಕರು ತಲೆ ತಗ್ಗಿಸುವಂತಹ ಕೆಲಸ. ರಾಜ್ಯದ ಪ್ರಜಾಪ್ರಭುತ್ವವಾದಿಗಳು ಎಲ್ಲರೂ ಇದನ್ನು ಖಂಡಿಸಬೇಕು ಎಂದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು. ಇದು ಮಾಧ್ಯಮಗಳನ್ನು ಹತ್ತಿಕ್ಕುವ ಕೆಲಸ. ಇದು ಒಳ್ಳೆಯದಲ್ಲ. ಇದರಲ್ಲಿ ಸಿಎಂ ಯಡಿಯೂರಪ್ಪನವರ ಕೈವಾಡವೂ ಇದೆ ಎಂದು ದೂರಿದ ಅವರು, ಯಡಿಯೂರಪ್ಪನವರ ವಿರುದ್ಧ ಮಾತನಾಡಲು ಸ್ಪೀಕರ್ಗಾಗಲಿ, ಕೇಂದ್ರದ ಮಂತ್ರಿಗಳಿಗಾಗಲಿ, ಶಾಸಕರು, ರಾಜ್ಯದ ಮಂತ್ರಿಗಳಿಗಾಗಲಿ ಯಾರಿಗೂ ತಾಕತ್ತಿಲ್ಲ ಎಂದರು.
ದೇಶಕ್ಕಾಗಿ ತ್ಯಾಗ ಮಾಡಿದವರ ಬಗ್ಗೆ ಅವಹೇಳನಕಾರಿಯಾಗಿ ಕೆಲವು ಶಾಸಕರು ಮಾತನಾಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಬಿಜೆಪಿಯಲ್ಲಿ ಐದಾರು ಮಂದಿ ರೌಡಿ ರಾಜಕಾರಣಿಗಳಿದ್ದಾರೆ. ಈ ರೀತಿ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ರೀತಿ ನಾಲಿಗೆ ಹರಿಬಿಟ್ಟರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಪೊಲೀಸರು ವಾಟಾಳ್ ನಾಗರಾಜ್ ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.