ಕರ್ನಾಟಕ

karnataka

By

Published : Aug 16, 2019, 4:02 PM IST

ETV Bharat / state

ವಾಜಪೇಯಿ ಪುಣ್ಯಸ್ಮರಣೆಯಿಂದ ದೂರ ಉಳಿದ ರಾಜ್ಯ‌ ಬಿಜೆಪಿ ನಾಯಕರು

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ವಾಜಪೇಯಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಾಜಪೇಯಿ ಪುಣ್ಯಸ್ಮರಣೆ

ಬೆಂಗಳೂರು:ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮೊದಲ ವರ್ಷದ ಪುಣ್ಯಸ್ಮರಣೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ನಾಯಕರಿಗೆ ಸಮಯವಿಲ್ಲದಂತಾಗಿದೆಯೇ ಅಥವಾ ನಿರಾಸಕ್ತರಾಗಿದ್ದಾರಾ ಎನ್ನುವ ಪ್ರಶ್ನೆ‌ ಎದ್ದಿದೆ.

ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ವಾಜಪೇಯಿ ಪುಣ್ಯಸ್ಮರಣೆ

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ವಾಜಪೇಯಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಹೊರತುಪಡಿಸಿ ಬೇರೆ ಯಾವ ನಾಯಕರು ಇರಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಿಎಂ ಯಡಿಯೂರಪ್ಪ ದೆಹಲಿಯಲ್ಲಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಆರ್. ಅಶೋಕ್ ಕೂಡ ದೆಹಲಿಯಲ್ಲಿದ್ದಾರೆ. ಆದರೆ ಇತರೆ ನಾಯಕರು ಇಲ್ಲಿಯೇ ಇರುವ ಬಿಜೆಪಿ ಸಂಸದರು ಬೆಂಗಳೂರಿನ ಅಷ್ಟೂ ಬಿಜೆಪಿ ಶಾಸಕರೂ ಕಾರ್ಯಕ್ರಮದಿಂದ ದೂರ ಉಳಿದಿದ್ದರು.

ಬೆಂಗಳೂರಿನ ಹೊರಗೆ ಇರುವ ನಾಯಕರು ಹೊರತುಪಡಿಸಿದರೂ ಇಲ್ಲಿಯೇ ಇರುವ ನಾಯಕರು ಭಾಗಿಯಾಗಬೇಕಿತ್ತು ಆದರೆ ಅದ್ಯಾವುದೂ ಆಗದೇ ಕೇವಲ ರಾಜ್ಯ ಬಿಜೆಪಿ ಕಚೇರಿ ಸಿಬ್ಬಂದಿ ಮಾತ್ರ ಪಾಲ್ಗೊಂಡಿದ್ದರು. ಕಳೆದ ವರ್ಷ ವಾಜಪೇಯಿ ಚಿತಾಭಸ್ಮ ಬೆಂಗಳೂರಿಗೆ ತಂದು ರಾಜ್ಯದ ನದಿಗಳಲ್ಲಿ ವಿಸರ್ಜಿಸಿದ್ದ ರಾಜ್ಯ ಬಿಜೆಪಿ ನಾಯಕರು ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಬರಲಿಲ್ಲ. ಬಿಜೆಪಿ ನಾಯಕರಿಗೆ ವಾಜಪೇಯಿ ಪುಣ್ಯಸ್ಮರಣೆ ಬೇಡವಾಯಿತಾ? ಉತ್ಸಾಹ ಕುಗ್ಗಿತಾ? ಎನ್ನುವ ಪ್ರಶ್ನೆ ಎದ್ದಿದೆ.

ಅಟಲ್ ಬಿಹಾರಿ ವಾಜಪೇಯಿ ಪುಣ್ಯಸ್ಮರಣೆ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮೊದಲನೇ ಪುಣ್ಯಸ್ಮರಣೆ ಅಂಗವಾಗಿ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕವನ ವಾಚನದ ಮೂಲಕ ವಿಶಿಷ್ಟವಾಗಿ ಕವಿ ಹೃದಯದ ಅಟಲ್ ಜೀ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ್ ಅವರು ಪುಷ್ಪಾರ್ಚನೆ ಮಾಡಿ ನಂತರ ಕವಿತೆ ವಾಚನದ ಮೂಲಕ ವಾಜಪೇಯಿ ಅವರ ಗುಣಗಾನ ಮಾಡಿದರು.

ನಂತರ ಮಾತನಾಡಿದ ಅರುಣ ಕುಮಾರ್, ಅಜಾತಶತ್ರುವಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿ ಆಗಿರುವ ಸಂದರ್ಭದಲ್ಲಿ ದೇಶದ ಅಭಿವೃದ್ಧಿಗೆ ಹಲವಾರು ಕನಸುಗಳನ್ನು ಕಂಡಿದ್ದರು, ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ಕನಸನ್ನು ನನಸು ಮಾಡುವಲ್ಲಿ ಶ್ರಮಪಟ್ಟಿದ್ದವರಲ್ಲಿ ಅಟಲ್ ಜೀ ಅವರೂ ಒಬ್ಬರು. ರಾಜಕೀಯ ಜೀವನದಲ್ಲಿ ಅವರ ಶ್ರಮ ಅಪಾರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ಗಣೇಶ ಯಾಜಿ, ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಶಾಂತಾರಾಮ್ ಉಪಸ್ಥಿತರಿದ್ದರು. ಪಕ್ಷದ ಕಾರ್ಯಕರ್ತರು, ಕಾರ್ಯಾಲಯ ಸಿಬ್ಬಂದಿ ವರ್ಗದವರು ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕನ ಸಾಧನೆಗಳನ್ನು ಸ್ಮರಿಸಿದರು.

ABOUT THE AUTHOR

...view details