ಬೆಂಗಳೂರು:2020 ವರ್ಷದ ಕೊನೆಯ ಹಬ್ಬವವಾದ ವೈಕುಂಠ ಏಕಾದಶಿಯನ್ನು ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ಸಿಲಿಕಾನ್ ಸಿಟಿಯ ಕೆಲವು ದೇವಸ್ಥಾನಗಳಲ್ಲಿ ಏಕಾದಶಿ ನಿಮಿತ್ತ ಸಂಭ್ರಮ ಮನೆ ಮಾಡಿತ್ತು. ಕೊರೊನಾ ಇದ್ದರೂ ಕೂಡ ತಿರುಪತಿ ಗಿರಿವಾಸ ಶ್ರೀನಿವಾಸನ ದರ್ಶನ ಪಡೆದು ಭಕ್ತರು ಪುನೀತರಾದರು.
ನಗರದ ಇಸ್ಕಾನ್ ದೇವಾಲಯನ್ನು ಸಿಂಗಾರಗೊಳಿಸಲಾಗಿತ್ತು. ವಿವಿಧ ಹೂವುಗಳೊಂದಿಗೆ ದೇವರಿಗೆ ರಾಜಮುಡಿ ಹಾಗೂ ವಜ್ರಖಚಿತ ಕಿರೀಟವನ್ನ ಧರಿಸಲಾಗಿತ್ತು. ಬೆಳಗ್ಗೆ ವೈಕುಂಠ ದ್ವಾರಕ್ಕೆ ವಿಶೇಷ ಪೂಜೆ ಸಲ್ಲಿಸಿ ಬಾಗಿಲು ತೆರೆಯಲಾಯಿತು. ಆದ್ರೆ ಈ ಬಾರಿ ಕೊರೊನಾ ಕಾರಣದಿಂದಾಗಿ ಭಕ್ತರಿಗೆ ದೇವರ ದರ್ಶನ ಪಡೆಯಲು ಅವಕಾಶ ನಿರಾಕರಿಸಿದ್ದರಿಂದ ಎಲ್ಲಾ ಸಂಭ್ರಮಾಚರಣೆಯನ್ನ ಆನ್ಲೈನ್ ಮೂಲಕವೇ ವೀಕ್ಷಿಸಲು ಏರ್ಪಡು ಮಾಡಲಾಗಿತ್ತು.
ಕೋಟೆ ವೆಂಕಟರಮಣಸ್ವಾಮಿಗೆ ಕೇವಲ ಅರ್ಚಕರು ಮತ್ತು ಆಡಳಿತ ಮಂಡಳಿ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇಲ್ಲಿಯೂ ಕೂಡ ದೇವರ ದರ್ಶನ ಪಡೆಯಲು ಸಾರ್ವಜನಿಕರಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ಜನರು ಮುಚ್ಚಲಾಗಿದ್ದ ಮುಖ್ಯ ದ್ವಾರದ ಬಳಿಯೇ ದೇವರಿಗೆ ನಮಸ್ಕರಿಸಿದರು.