ಕರ್ನಾಟಕ

karnataka

By

Published : May 14, 2023, 12:34 PM IST

ETV Bharat / state

ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಇಲ್ಲ, ನಿವೃತ್ತಿ ಅನ್ನೋದೆಲ್ಲ ನಾಟಕ: ವಿ.ಸೋಮಣ್ಣ

ಸೋತ ಮಾತ್ರಕ್ಕೆ ರಾಜಕೀಯ ನಿವೃತ್ತಿ ಇಲ್ಲ. ನಾನು ಸಾಯುವತನಕ ಸಕ್ರಿಯ ರಾಜಕಾರಣದಲ್ಲಿಯೇ ಇರುತ್ತೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದರು.

EX Minister  somanna
ಮಾಜಿ ಸಚಿವ ವಿ. ಸೋಮಣ್ಣ

ಬೆಂಗಳೂರು:ಸೋತ ಮೇಲೆ ಮಾತನಾಡುವುದು ಏನೂ ಉಳಿದಿಲ್ಲ. ಚಿನ್ನದಂತಹ ಕ್ಷೇತ್ರ ಬಿಟ್ಟು ಪಕ್ಷ ಹೇಳಿತು ಎಂದು ಬೇರೆ ಕಡೆ ಹೋದರೆ ಜನ ಆಶೀರ್ವಾದ ಮಾಡಲಿಲ್ಲ. ನಾನು ಈ ಸೋಲನ್ನು ಸ್ವೀಕರಿಸುತ್ತೇನೆ. ಆದರೆ ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಪಡೆಯಲ್ಲ. ಸಾಯುವವರೆಗೂ ರಾಜಕಾರಣದಲ್ಲೇ ಇರುವುದಾಗಿ ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.

ವಿಜಯನಗರ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಿವೃತ್ತಿ ಅನ್ನೋ ಪದವೇ ನನಗೆ ಗೊತ್ತಿಲ್ಲ. ಎಷ್ಟು ಜನ ನಿವೃತ್ತಿ ತೆಗೆದುಕೊಂಡಿದ್ದಾರೆ ಹೇಳಿ?. ನಿವೃತ್ತಿ ಅನ್ನೋದೆಲ್ಲ ಒಂದು ನಾಟಕ. ಇನ್ನೇನು ಸೋತಾಗಿದೆ, ನಾನು ಏನು ಮಾತನಾಡಲಿ. ಹೈಕಮಾಂಡ್ ಸೂಚನೆ ಮೇರೆಗೆ ಹೋಗಿ ಸ್ಪರ್ಧಿಸಿದೆ. ಚಾಲೆಂಜ್ ಆಗಿ ತಗೊಂಡೆ. ಪ್ರತಿಯೊಂದಕ್ಕೂ ಕಾಲ ಅಂತಾ ಇರುತ್ತದೆ. ನನ್ನ ಈ ಕ್ಷೇತ್ರ ಚಿನ್ನದಂತೆ ಇತ್ತು. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು. ಪಕ್ಷದ ಮಾತು ಕೇಳಿದೆ ಅಷ್ಟೇ" ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ಸಿದ್ದು, ಡಿಕೆಶಿ ಕಟ್ಟಿ ಹಾಕುವ ಕೇಸರಿ ಪಡೆ ತಂತ್ರ ವಿಫಲ: ಪದ್ಮನಾಭನಗರ ಗೆದ್ದು ಅಶೋಕ್ ನಿಟ್ಟುಸಿರು!

ಸೋಲಿಗೆ ಯಡಿಯೂರಪ್ಪ ಫ್ಯಾಕ್ಟರ್ ಅಲ್ಲ:ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಮೂಲೆ ಗುಂಪು ಮಾಡಿದ್ದೇ ಮುಳುವಾಯ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, "ಅವರನ್ನು ಪಕ್ಷ ಮೂಲೆಗುಂಪು ಮಾಡಲಿಲ್ಲ. ಅವರ ನಾಯಕತ್ವದಲ್ಲಿಯೇ ಚುನಾವಣೆ ಮಾಡಿದ್ದೇವೆ. ಸೋತ ತಕ್ಷಣ ಎಲ್ಲ ಮುಗಿದು ಹೋಯ್ತಾ? ಸೋಲಿಗೆ ಯಡಿಯೂರಪ್ಪ ಫ್ಯಾಕ್ಟರ್ ಕಾರಣ ಅಲ್ಲ. ಆದರೂ ಪಕ್ಷಕ್ಕೂ ಹಿನ್ನಡೆ ಆಗಿದ್ದು ನಮಗೆಲ್ಲ ಒಂದು ಎಚ್ಚರಿಕೆಯ ಗಂಟೆ. ಜನರ ತೀರ್ಮಾನ ಇದು. ಈ ಜನಾದೇಶಕ್ಕೆ ಬದ್ಧರಾಗಬೇಕು" ಎಂದರು.

ಇದನ್ನೂ ಓದಿ:ವರುಣಾ ಕ್ಷೇತ್ರ: ಭಾರೀ ಪೈಪೋಟಿ ನಡುವೆಯೂ ಸೋಮಣ್ಣ ವಿರುದ್ಧ ಗೆಲುವು ಸಾಧಿಸಿದ ಸಿದ್ದರಾಮಯ್ಯ

ಈ ದೇಶಕ್ಕೆ ಮೋದಿಯವರು ಪ್ರಶ್ನಾತೀತ ನಾಯಕರು. ಅವರ ಕೆಲಸಗಳು ಅವಿಸ್ಮರಣೀಯ. ಕಾಂಗ್ರೆಸ್‌ನ ಗ್ಯಾರಂಟಿ ಸ್ಕೀಂಗಳೇ ಅವರ ಗೆಲುವಿಗೆ ಕಾರಣ. ನಾನು ಕೆಲಸಗಾರ, ಈಗ ನಿರುದ್ಯೋಗಿ ಆಗಿದೀನಿ. ಒಳ್ಳೆಯವರನ್ನು ಯಾರೂ ಗುರುತಿಸಲ್ಲ. ನಾನು ಸೋಲನ್ನು ಒಪ್ಪಿಕೊಂಡಿದ್ದೇನೆ. ಫಲಿತಾಂಶದ ನಂತರ ವರಿಷ್ಠರು ಕರೆ ಮಾಡಿ ಮಾತನಾಡಿದ್ದಾರೆ ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಮತ ವಿಭಜನೆ ಬಗ್ಗೆ ಪ್ರತಿಕ್ರಿಯಿಸಿ, ಅದನ್ನು ಯಡಿಯೂರಪ್ಪ ಅವರಿಗೆ ಕೇಳಿ. ಅವರು ಹಿರಿಯರು. ನಮ್ಮ ಪಕ್ಷದ ನಾಯಕರು. ನಾನು ಸೀಮಿತ. ನನಗೆ ಕೇಳಬೇಡಿ ಎಂದರು.

ಕಾಂಗ್ರೆಸ್​​ನಲ್ಲಿ ಸಿಎಂ ಹುದ್ದೆ ಕಚ್ಚಾಟ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸೋಮಣ್ಣ, ಅದು ಅವರ ಪಕ್ಷದ ನಿರ್ಧಾರಕ್ಕೆ ಬಿಟ್ಟಿದೆ. ಡಿ.ಕೆ.ಶಿವಕುಮಾರ್ ನಮ್ಮ ತಾಲೂಕಿನವರು. ಸಿದ್ದರಾಮಯ್ಯ ಹಿರಿಯ ನಾಯಕ. ಅವರು ಈಗಾಗಲೇ ಒಮ್ಮೆ ಸಿಎಂ ಆಗಿದ್ದಾರೆ. ಡಿಕೆಶಿ ಸಿಎಂ ಆಗಬೇಕಾಗಿರುವವರು. ಯಾರನ್ನು ಸಿಎಂ ಮಾಡಬೇಕು ಅಂತಾ ಅವರ ಪಕ್ಷ ನಿರ್ಧರಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಚಾಮರಾಜನಗರ, ವರುಣದಲ್ಲಿ ವಿ.ಸೋಮಣ್ಣಗೆ ಸೋಲು: 4ನೇ ಬಾರಿ ಗೆದ್ದ ಪುಟ್ಟರಂಗಶೆಟ್ಟಿ

ABOUT THE AUTHOR

...view details