ಬೆಂಗಳೂರು : ವಿಧಾನ ಪರಿಷತ್ ಕಲಾಪದಲ್ಲಿಯೂ ಸಹ ಕೇಂದ್ರ ಪ್ರತಿಪಕ್ಷ ನಾಯಕರ ಸಭೆಗೆ ಆಗಮಿಸಿದ ಗಣ್ಯರ ಆಹ್ವಾನಕ್ಕೆ ಐಎಎಸ್ ಅಧಿಕಾರಿ ಬಳಕೆ ಮಾಡಿಕೊಂಡಿರುವ ವಿಚಾರ ಪ್ರಸ್ತಾಪವಾಗಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಕಾಂಗ್ರೆಸ್ ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರಿಗಳ ಬಳಕೆ ಸರಿಯಲ್ಲ ಎಂದು ಪ್ರತಿಪಕ್ಷ ನಾಯಕರು ಕಿಡಿಕಾರಿದರು.
ಆಡಳಿತ-ಪ್ರತಿಪಕ್ಷ ಶಾಸಕರು ವಾಗ್ವಾದ ನಡೆಸಿದಾಗ ನಿಮಗೆ ಈ ವಿಚಾರದ ಮೇಲೆ ಚರ್ಚೆಗೆ ಅವಕಾಶ ನೀಡುತ್ತೇನೆ. ಬರವಣಿಗೆಯಲ್ಲಿ ನೀಡಿ. ಸೂಕ್ತ ನಿಯಮದ ಅಡಿ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ. ಪೀಠದಿಂದ ಚರ್ಚೆಗೆ ಅವಕಾಶದ ಭರವಸೆ ನೀಡುತ್ತೇನೆ ಎಂದು ಸಭಾಪತಿ ಪೀಠದಲ್ಲಿದ್ದ ಪ್ರಾಣೇಶ್ ಭರವಸೆ ಕೊಟ್ಟರು.
ಆದರೆ, ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು ನಮಗೆ 10 ನಿಮಿಷ ವಿಷಯ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಡಿ. ಗಂಭೀರ ವಿಚಾರ ಇದು. ಯಾವುದೇ ಹುದ್ದೆ ಇಲ್ಲದ ನಾಯಕರ ಆಹ್ವಾನಕ್ಕೆ 40 ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿದ್ದು ಏಕೆ? ನಾವು ಇದನ್ನು ಸಹಿಸಲ್ಲ ಎಂದು ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ಆರಂಭಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ಸಭಾಪತಿಗಳು ಕಲಾಪವನ್ನು 10 ನಿಮಿಷ ಮುಂದೂಡಿದರು. ಕಲಾಪ ಮರು ಆರಂಭವಾದಾಗಲೂ ಬಿಜೆಪಿ ಶಾಸಕರ ಹೋರಾಟ ಮುಂದುವರಿಯಿತು. ಸಭಾಪತಿಗಳು ಮನವೊಲಿಸುವ ಯತ್ನ ಮಾಡಿದರು. ಇದರಿಂದ ಬಜೆಟ್ ಮೇಲೆ ಮಾತನಾಡಬೇಕಿದ್ದ ಕಾಂಗ್ರೆಸ್ ಶಾಸಕ ಮಂಜುನಾಥ್ ಭಂಡಾರಿ ತಮ್ಮ ಅವಕಾಶಕ್ಕಾಗಿ ಕಾಯುತ್ತಲೇ ಕೂರಬೇಕಾಗಿ ಬಂತು.
ಸಭಾಪತಿಗಳು ಈ ವೇಳೆ ಸ್ಥಳಕ್ಕೆ ತೆರಳಿ ಮಾತುಕತೆ ನಡೆಸೋಣ. ಗದ್ದಲ ಬೇಡ. ಸದ್ಯ ಬಜೆಟ್ ಮೇಲೆ ಚರ್ಚೆ ನಡೆಯುತ್ತಿದೆ. ಬೇರೆ ಅವಕಾಶ ಲಭಿಸಲಿದೆ, ನಿಮ್ಮ ಸ್ಥಳಕ್ಕೆ ಬನ್ನಿ ಎಂದರು. ಬಿಜೆಪಿ ನಾಯಕರು ಒಪ್ಪಲಿಲ್ಲ. ಗದ್ದಲ ಮುಂದುವರಿಯಿತು. ಕಾಂಗ್ರೆಸ್ ಶಾಸಕ ಮತ್ತು ಸಚಿವರು ಸಹ ಪರಿಸ್ಥಿತಿ ನಿಯಂತ್ರಿಸುವಂತೆ ಸಭಾಪತಿಗಳ ಮೇಲೆ ಒತ್ತಡ ಹೇರಿದರು. ಕೋಟಾ ಶ್ರೀನಿವಾಸ ಪೂಜಾರಿ, ವೈಎ. ನಾರಾಯಣಸ್ವಾಮಿ ನಮಗೆ ಅವಕಾಶ ಬೇಕು. ಐಎಎಸ್ ಅಧಿಕಾರಿ ಬಳಸಿಕೊಂಡಿದ್ದಕ್ಕೆ ಸರ್ಕಾರ ಕ್ಷಮೆ ಕೋರಬೇಕು ಎಂದರು.