ಅನರ್ಹ ಶಾಸಕರಿಂದ ತೆರವಾದ ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು 'ಉತ್ತಮ ಪ್ರಜಾಕೀಯ ಪಕ್ಷ'ದ ಸ್ಥಾಪಕ ಚಿತ್ರನಟ ಉಪೇಂದ್ರ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಉಪಚುನಾವಣೆ ಮಿನಿಸಮರದ ಅಖಾಡಕ್ಕೆ ಧುಮುಕಲು ನಿರ್ಧರಿಸಿರುವ ಉಪ್ಪಿ, ಅದೃಷ್ಟ ಪರೀಕ್ಷೆಗೆ ಮತ್ತೆ ಮುಂದಾಗಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಇದೇ ಅಕ್ಟೋಬರ್ 21 ರಂದು ನಡೆಯಲಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಎಲ್ಲಾ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಪ್ರಜಾಕೀಯದ ವಿಚಾರಗಳಿಗೆ ತಮ್ಮ ಅಮೂಲ್ಯವಾದ ಮತ ಮೀಸಲಿಡಿ ಎಂದು ಮತದಾರರಿಗೆ ಮನವಿ ಮಾಡಿದ್ದಾರೆ.
ಇದೇ ಟ್ವೀಟ್ನಲ್ಲಿ ಪತ್ರವನ್ನೂ ಲಿಂಕ್ ಮಾಡಿದ್ದು, 'ನಾನೊಬ್ಬ ಪ್ರಜೆಯಲ್ಲ, ನನ್ನ ಹಣದಿಂದಲೇ ಸರ್ಕಾರ ನಡೆಯುತ್ತಿದೆ ಎಂಬ ಅರಿವು ಇರುವ ಅಸಾಮಾನ್ಯ ಪ್ರಜೆ' ಎಂದು ಬರೆಯಲಾಗಿದೆ. ಅಲ್ಲದೇ ಈ ಪತ್ರದಲ್ಲಿ ಮತದಾರನಿಗೆ ಎಂತಹಾ ಜನಪ್ರತಿನಿಧಿಗಳು ಬೇಕು? ಎಂಬ ಬಗ್ಗೆ ಮಾಹಿತಿಯನ್ನೂ ಉಪ್ಪಿ ಒದಗಿಸಿದ್ದಾರೆ.
ಅಕ್ಟೋಬರ್ 21 ರಂದು 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.