ಬೆಂಗಳೂರು:ನಾಯಿ ಕಚ್ಚಿದ್ದಕ್ಕೆ ದೂರು ನೀಡಿದ್ದನ್ನು ಸಹಿಸದ ಮಾಲೀಕ ದೂರುದಾರರ ಮನೆಯ ದ್ವಿಚಕ್ರ ವಾಹನಗಳಿಗೆ ಬೆಂಕಿಯಿಟ್ಟ ಆರೋಪ ಕೇಳಿ ಬಂದಿದೆ. ದೂರು ನೀಡಿದ ಜಿದ್ದಿಗೆ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ನಾಯಿಯ ಮಾಲೀಕ ನಂಜುಂಡ ಬಾಬು ಅವರ ತಾಯಿ ಗೌರಮ್ಮ ವಿರುದ್ಧ ಪುಷ್ಪಾ ಎಂಬ ಮಹಿಳೆ ಕೊತ್ತನೂರು ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣದ ವಿವರ:ದೂರುದಾರೆ ಪುಷ್ಪಾ ಅವರಿಗೆ ನಾಯಿ ಕಚ್ಚಿದ್ದರಿಂದ ಅದರ ಮಾಲೀಕ ನಂಜುಂಡ ಬಾಬು ವಿರುದ್ಧ ಕೊತ್ತನೂರು ಠಾಣೆಗೆ ಅವರು ದೂರು ನೀಡಿದ್ದರು. ಮತ್ತೊಂದೆಡೆ ನಂಜುಂಡ ಬಾಬು ಅವರ ತಾಯಿಗೆ ಚೀಟಿ ಹಣವನ್ನು ಕೊಡಬೇಕಿದ್ದ ಪುಷ್ಪಾ, "ನಿಮ್ಮ ಮನೆಯ ನಾಯಿ ಕಚ್ಚಿದ್ದರಿಂದಲೇ ಆಸ್ಪತ್ರೆಗೆ ಹಣ ಖರ್ಚಾಗಿದೆ. ಆದ್ದರಿಂದ ನಂತರ ಹಣ ಕೊಡುವುದಾಗಿ" ಹೇಳಿದ್ದರು. ಅದೇ ಸಂದರ್ಭದಲ್ಲಿ ಬಂದಿದ್ದ ನಂಜುಂಡ ಬಾಬು "ದೂರು ಕೊಟ್ಟವರನ್ನು ಸುಮ್ಮನೆ ಬಿಡುವುದಿಲ್ಲ" ಎಂದು ಬೆದರಿಕೆ ಹಾಕಿದ್ದರು.
ಇದಾದ ಬಳಿಕ ಅಕ್ಟೋಬರ್ 23 ರಂದು ಪುಷ್ಪಾ ಅವರ ಮನೆಯ ಮುಂದೆ ನಿಲ್ಲಿಸಲಾಗಿದ್ದ, ಅವರ ಮಗನ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ನಂಜುಂಡ ಬಾಬು ಮತ್ತವರ ಕುಟುಂಬದವರೇ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿರುವ ಪುಷ್ಪಾ ಅವರು ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇರೆಗೆ ಆರೋಪಿ ನಂಜುಂಡ ಬಾಬುನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.