ಬೆಂಗಳೂರು:ಕಬಡ್ಡಿ ಹಾಗೂ ಈಜು ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಏಕಲವ್ಯ ಪ್ರಶಸ್ತಿ ಪುರಸ್ಕೃತರಿಬ್ಬರು ತಮ್ಮ ಸಂತಸವನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಿಎಂ ಯಡಿಯೂರಪ್ಪ ಅವರಿಂದ ಏಕಲವ್ಯ ಪ್ರಶಸ್ತಿ ಪಡೆದ ನಂತರ 'ಈಟಿವಿ ಭಾರತ್' ಜೊತೆ ಮಾತನಾಡಿದ ಕಬಡ್ಡಿ ಆಟಗಾರ್ತಿ ಉಷಾರಾಣಿ ಎನ್., ಏಕಲವ್ಯ ಪ್ರಶಸ್ತಿ ಬಂದಿರುವುದು ನನಗೆ ತುಂಬಾ ಸಂತೋಷ ತಂದಿದೆ. ಇದರ ಜೊತೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ. ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸಿ ಪದಕ ಪಡೆಯುವುದು ನನ್ನ ಮುಂದಿನ ಗುರಿಯಾಗಿದೆ. ಅದೇ ರೀತಿ ಒಲಿಂಪಿಕ್ಸ್ನಲ್ಲಿ ಕಬಡ್ಡಿ ಪಂದ್ಯವನ್ನು ಸೇರಿಸಲಾಗುತ್ತಿದ್ದು, ಅದರಲ್ಲೂ ಭಾಗವಹಿಸಿ ರಾಜ್ಯಕ್ಕೆ ಹೆಸರು, ಪ್ರಶಸ್ತಿ ತರುವ ಗುರಿ ಹೊಂದಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂತಸ ಹಂಚಿಕೊಂಡ ಏಕಲವ್ಯ ಪ್ರಶಸ್ತಿ ಪುರಸ್ಕೃತರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಬಡ್ಡಿ ಪಂದ್ಯಾವಳಿ ಆಡಿರುವ ಉಷಾರಾಣಿ, 2015 ಜನವರಿ 31ರಿಂದ ಫೆಬ್ರವರಿ 14ರವರೆಗೆ ಕೇರಳದಲ್ಲಿ ನಡೆದ ನ್ಯಾಷನಲ್ ಗೇಮ್ಸ್ನಲ್ಲಿ ಭಾಗವಹಿಸಿದ್ದರು. 2016ರ ನವೆಂಬರ್ 27ರಿಂದ 30ರವರೆಗೆ ಬಿಹಾರದಲ್ಲಿ ನಡೆದ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದರು. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ 2016ರ ಫೆ. 5ರಿಂದ 16ರವರೆಗೆ ಅಸ್ಸೋಂನಲ್ಲಿ ನಡೆದ ಸೌತ್ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದಿದ್ದರು.
ಇನ್ನು ಈಜುಪಟು ಅವಿನಾಶ್ ಮಣಿ ಸಹ ತಮ್ಮ ಸಂತಸ ಹಂಚಿಕೊಂಡಿದ್ದು, ಈಜು ಪಂದ್ಯಾವಳಿಯಲ್ಲಿ ನನಗೆ 2017ನೇ ಸಾಲಿನ ಏಕಲವ್ಯ ಪ್ರಶಸ್ತಿ ಸಿಕ್ಕಿರುವುದು ಸಂತಸವಾಗಿದೆ. ಈ ಪ್ರಶಸ್ತಿ ನೀಡಿದ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. 2022ನೇ ಸಾಲಿನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಿ ಪದಕ ಪಡೆಯುವ ವಿಶ್ವಾಸವಿದೆ. ಒಲಿಂಪಿಕ್ಸ್ನಲ್ಲೂ ಪಾಲ್ಗೊಳ್ಳಲು ತಯಾರಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಅವಿನಾಶ್ ಮಣಿ ಈಜುಪಟುವಾಗಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡಿ ಚಿನ್ನ, ರಜತ ಹಾಗೂ ಕಂಚಿನ ಪದಕ ಪಡೆದಿದ್ದಾರೆ. ರಾಷ್ಟ್ರೀಯಮಟ್ಟದಲ್ಲಿ 2016 ಸೆಪ್ಟಂಬರ್ 24ರಿಂದ 28ರವರೆಗೆ ಜಾರ್ಖಂಡ್ನಲ್ಲಿ ನಡೆದ ಎಪ್ಪತ್ತನೇ ಹಿರಿಯರ ಪಂದ್ಯಾವಳಿಯಲ್ಲಿ ಒಂದು ರಜತ ಹಾಗೂ ಐದು ಕಂಚಿನ ಪದಕಗಳನ್ನು ಪಡೆದಿದ್ದರು. 2017ರ ಅಕ್ಟೋಬರ್ 7ರಿಂದ 11ರವರೆಗೆ ಮಧ್ಯಪ್ರದೇಶದಲ್ಲಿ ನಡೆದ 71ನೇ ಹಿರಿಯರ ಈಜು ಪಂದ್ಯಾವಳಿಯಲ್ಲಿ ಒಂದು ಚಿನ್ನ, ಒಂದು ರಜತ ಹಾಗೂ ಮೂರು ಕಂಚಿನ ಪದಕಗಳನ್ನು ಪಡೆದು ದಾಖಲೆ ಮಾಡಿದ್ದರು.
ಇನ್ನು ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಂಡು 2016 ಅಕ್ಟೋಬರ್ 19ರಿಂದ 23ರವರೆಗೆ ಶ್ರೀಲಂಕಾದಲ್ಲಿ ನಡೆದ ಸೌತ್ ಏಷಿಯನ್ ಈಜು ಪಂದ್ಯಾವಳಿಯಲ್ಲಿ ಮೂರು ಚಿನ್ನ, ಎರಡು ರಜತ ಹಾಗೂ ಎರಡು ಕಂಚು ಪದಕ ಪಡೆದಿದ್ದರು. 2017 ಸೆಪ್ಟಂಬರ್ 8ರಿಂದ 16ರವರೆಗೆ ಉಜ್ಜೆಕಿಸ್ತಾನದಲ್ಲಿ ನಡೆದ ಏಷ್ಯನ್ ವಯೋಮಿತಿ ಪಂದ್ಯಾವಳಿಯಲ್ಲಿ ಎರಡು ಕಂಚಿನ ಪದಕಗಳನ್ನು ಪಡೆದಿದ್ದಾರೆ.