ಬೆಂಗಳೂರು : ವಿಳಾಸ ಕೇಳುವ ಸೋಗಿನಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಸರಗಳ್ಳರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಬ್ಯಾಂಕ್ ದರೋಡೆಗೆ ಯತ್ನಿಸಿ ವಿಫಲರಾಗಿರುವ ಸಂಗತಿಯೂ ಬೆಳಕಿಗೆ ಬಂದಿದೆ. ಬಂಧಿತರನ್ನು ಮಂಗಳೂರು ಮೂಲದ ಮೊಹಮ್ಮದ್ ರಫೀಕ್ ಹಾಗೂ ಶಿವಾಜಿನಗರ ಮೊಹಮ್ಮದ್ ಅನೀಸ್ ಎಂದು ಗುರುತಿಸಲಾಗಿದೆ.
ಅಕ್ಟೋಬರ್ 14ರಂದು ಜಯನಗರದ ಪಟ್ಟಾಭಿರಾಮನಗರದ 13ನೇ ಅಡ್ಡರಸ್ತೆಯಲ್ಲಿ ಬೈಕ್ ನಲ್ಲಿ ಬಂದಿದ್ದ ಆರೋಪಿಗಳು ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಚಿನ್ನದ ಸರವನ್ನು ಎಗರಿಸಿದ್ದರು. ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಂತೆ ವಿವಿಧ ಪ್ರಕರಣಗಳು ಹೊರಬಂದಿವೆ. ಆರೋಪಿಗಳ ಮೇಲೆ ಮಂಗಳೂರು, ಚಿಕ್ಕಮಗಳೂರು, ಬೆಂಗಳೂರಿನ ಶಂಕರಪುರ, ಹೆಚ್.ಎಸ್.ಆರ್ ಲೇಔಟ್, ಜೆ.ಪಿ.ನಗರ, ಬಸವನಗುಡಿ, ಕೆ.ಆರ್.ಮಾರ್ಕೆಟ್, ಬನ್ನೇರುಘಟ್ಟ ಸೇರಿದಂತೆ ಹಲವು ಕಡೆ ಸರಗಳ್ಳತನ ಮತ್ತು ದರೋಡೆ ಸೇರಿದಂತೆ 19 ಪ್ರಕರಣಗಳು ಈ ಆರೋಪಿಗಳ ಮೇಲಿರುವುದು ತಿಳಿದುಬಂದಿದೆ.