ಬೆಂಗಳೂರು:ಮಧ್ಯಾಹ್ನದ ಊಟದ ಯೋಜನೆಯಡಿಯಲ್ಲಿ ಮೇ, ಜೂನ್ ತಿಂಗಳ 2021ರ ಬೇಸಿಗೆ ರಜೆಯ ಆಹಾರ ಭದ್ರತಾ ಭತ್ಯೆಯ ಪರಿವರ್ತನಾ ವೆಚ್ಚ (ಕುಕ್ಕಿಂಗ್ ಕಾಸ್ಟ್) ನಗದು ಹಣವನ್ನು ಅರ್ಹ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡುವಂತೆ ಸೂಚಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಾಲಯ ಕೂಡ ನಿರ್ದೇಶನ ನೀಡಿದೆ.
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿವರೆಗಿನ ಫಲಾನುಭವಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಯೋಜನೆಯಡಿ 2021ರ ಮೇ, ಜೂನ್ ತಿಂಗಳಿನ 50 ದಿನ ಬೇಸಿಗೆ ರಜಾ ಅವಧಿ ಎಂದು ಪರಿಗಣಿಸಲಾಗಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ ಸಂಬಂಧಿಸಿದ ಆಹಾರ ಭದ್ರತಾ ಭತ್ಯೆಯ ಪರಿವರ್ತನ ವೆಚ್ಚದ ನಗದು ಹಣವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಹೊಂದಿರುವ ಬ್ಯಾಂಕ್ ಖಾತೆ ವಿವರಗಳನ್ನು ಪಡೆದು ಶಾಲೆಯ ಮುಖ್ಯ ಶಿಕ್ಷಕರು ಶಿಕ್ಷಣ ಇಲಾಖೆಯ ತಂತ್ರಾಂಶದಲ್ಲಿ ಸೇರಿಸಲು ಅಗತ್ಯ ಕ್ರಮವಹಿಸಲು ಸೂಚಿಸಲಾಗಿದೆ ಎಂದಿದ್ದಾರೆ. ಶಾಲೆಗಳಲ್ಲಿ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳು ಬ್ಯಾಂಕ್ ಖಾತೆ ಹೊಂದಿರುತ್ತಾರೆ. ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳೂ ಸೇರಿದಂತೆ ಹಲವು ವಿದ್ಯಾರ್ಥಿಗಳು ಬ್ಯಾಂಕ್ ಖಾತೆ ಇನ್ನೂ ಹೊಂದಿಲ್ಲದಿದ್ದರೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಶೂನ್ಯ ಬ್ಯಾಂಕ್ ಠೇವಣಿ ಖಾತೆ ತೆರೆಯಲು ಸಮೀಪದ ರಾಷ್ಟ್ರೀಕೃತ ಬ್ಯಾಂಕ್, ಗ್ರಾಮೀಣ ಬ್ಯಾಂಕ್ ಹಾಗೂ ಅಂಚೆ ಕಛೇರಿ ಸೇರಿದಂತೆ ಜಿಲ್ಲಾ ವ್ಯಾಪ್ತಿಯ ಎಲ್ಲಾ ಬ್ಯಾಂಕ್ಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲೆಯ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿರಿ: ಪ್ರೀತಿಸಿ ಮದುವೆಯಾದ ಮಗಳಿಗೆ ವಿಲನ್ ಆದ PSI ತಾಯಿ; ರಕ್ಷಣೆಗೆ SP ಮೊರೆ ಹೋದ ಜೋಡಿ
ಕೇಂದ್ರ ಸರ್ಕಾರದ ನಿರ್ದೇಶನ ಹಾಗೂ ರಾಜ್ಯ ಸರ್ಕಾರದ ಆಶಯದಂತೆ ಎಲ್ಲಾ ಮುಖ್ಯ ಶಿಕ್ಷಕರೂ ಸೇರಿ ಎಲ್ಲ ಅಧಿಕಾರಿಗಳು ಹಣದ ನೇರ ಜಮಾವಣೆಗೆ ಅಗತ್ಯ ಕ್ರಮ ವಹಿಸಬೇಕೆಂದು ಅದೇಶದಲ್ಲಿ ತಿಳಿಸಿದ್ದಾರೆ.