ಬೆಂಗಳೂರು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್ಸಿ)ನಲ್ಲಿ ಮಾರ್ಚ್ 2 ರಂದು ಇಬ್ಬರು ವಿದ್ಯಾರ್ಥಿಗಳ ಸಾವು ಸಂಭವಿಸಿರುವುದು ಬೆಳಕಿಗೆ ಬಂದಿದೆ.
ಪಿಹೆಚ್ಡಿ ವಿದ್ಯಾರ್ಥಿ ರಣಧೀರ ಕುಮಾರ್ (36) ನೇಣಿಗೆ ಶರಣಾಗಿದ್ದು, ಮತ್ತೋರ್ವ ಎಂಟೆಕ್ ವಿದ್ಯಾರ್ಥಿ ರಾಹುಲ್ ಪ್ರತಾಪ್ (31) ಸಂಜೆ ಫುಟ್ಬಾಲ್ ಅಭ್ಯಾಸ ಮಾಡುವ ಸಂದರ್ಭ ಸಾವಿಗೀಡಾಗಿದ್ದಾರೆ.
ನ್ಯಾನೋ ವಿಜ್ಞಾನ ಹಾಗೂ ಇಂಜಿನಿಯರಿಂಗ್ ಕುರಿತು ಪಿಹೆಚ್ಡಿ ಮಾಡುತ್ತಿದ್ದ ರಣಧೀರ ಕುಮಾರ್ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಎಂಟೆಕ್ ವಿದ್ಯಾರ್ಥಿ ರಾಹುಲ್ ಪ್ರತಾಪ್ ಜಿಮ್ಖಾನ ಮೈದಾನದಲ್ಲಿ ಫುಟ್ಬಾಲ್ ಆಡುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಆತನನ್ನು ಪ್ರಾಥಮಿಕ ಚಿಕಿತ್ಸೆ ಬಳಿಕ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ: ನಾಪತ್ತೆಯಾದ ಯುವತಿ ಕಾಡಿನಲ್ಲಿ ಶವವಾಗಿ ಪತ್ತೆ
ಆತ್ಮಹತ್ಯೆಗೆ ಶರಣಾದ ರಣಧೀರನ ಬಗ್ಗೆ ಆತನ ಸಹಪಾಠಿಗಳು ಹೇಳುವ ಪ್ರಕಾರ, ಮಾರ್ಚ್ 2 ರಂದು ಮಂಗಳವಾರ ಸಂಜೆಯವರೆಗೂ ಆತನ ರೂಮ್ ಬಾಗಿಲು ತೆಗೆದಿರಲಿಲ್ಲ. ಹೀಗಾಗಿ, ನಾವು ರಕ್ಷಣಾ ಸಿಬ್ಬಂದಿಗೆ ವಿಷಯ ತಿಳಿಸಿದ್ದೆವು. ಅವರು ಬಂದು ಬಾಗಿಲು ತೆಗೆದಾಗ ನೇಣು ಬಿಗಿದುಕೊಂಡು ರಣಧೀರ ಸಾವಿಗೆ ಶರಣಾಗಿದ್ದ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದಿದ್ದಾರೆ.
ಐಐಎಸ್ಸಿ ಮೃತಪಟ್ಟ ವಿದ್ಯಾರ್ಥಿಗಳ ಮಾಹಿತಿಗಳನ್ನು CeNSE ವೆಬ್ಸೈಟ್ನಿಂದ ತೆಗೆದು ಹಾಕಿದ್ದು, ವಿದ್ಯಾರ್ಥಿಗಳ ಪೋಷಕರ ಹೆಸರು, ವ್ಯಾಸಂಗ ವಿಭಾಗ ಹಾಗೂ ಇತರೆ ಮಾಹಿತಿಗಳು ಇದರಲ್ಲಿ ದಾಖಲಾಗಿರುತ್ತದೆ.
ಘಟನೆಯ ಬಗ್ಗೆ ಐಐಎಸ್ಸಿಯ ಉನ್ನತಾಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದು, ಮೃತ ವಿದ್ಯಾರ್ಥಿಗಳ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಐಐಎಸ್ಸಿಯ ವಿದ್ಯಾರ್ಥಿಗಳು ಮಾನಸಿಕ ಅಥವಾ ಯಾವುದೇ ಸಮಸ್ಯೆ ಇದ್ದರೆ ಐಐಎಸ್ಸಿಯ ಸೌಕರ್ಯ ಬಳಕೆ ಮಾಡಿ ಸಹಾಯ ಪಡೆಯಬೇಕು ಎಂದು ಸೂಚಿಸಿದೆ.