ಬೆಂಗಳೂರು : ಆಟೋ ರಿಕ್ಷಾಗಳನ್ನು ಕದ್ದು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದು, ಮತ್ತೊಂದೆಡೆ ಸಿಸಿಬಿಯ ಪೂರ್ವ ವಿಭಾಗದ ಸಂಘಟಿತ ಅಪರಾಧ ದಳದ ಅಧಿಕಾರಿಗಳು ದರೋಡೆಗೆ ಸಂಚು ರೂಪಿಸಿದ್ದ ಆರು ಜನರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಆಟೋ ರಿಕ್ಷಾಗಳ ಕಳ್ಳತನ ಪ್ರಕರಣದಲ್ಲಿ ಜಾವೀದ್ ಹಾಗೂ ಸೈಯದ್ ನದೀಮ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಒಟ್ಟು 7.50 ಲಕ್ಷ ಮೌಲ್ಯದ ಮೂರು ಆಟೋ ರಿಕ್ಷಾಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಮೈಸೂರಿನಲ್ಲಿ ಆಟೋ ಡೀಲರ್ ಆಗಿದ್ದ ಜಾವೀದ್, ಸಾಲ ಮಾಡಿಕೊಂಡು ಬೆಂಗಳೂರಿಗೆ ಬಂದು ನೆಲೆಸಿದ್ದ. ಇದೇ ಸಂದರ್ಭದಲ್ಲಿ ಮಗನ ಸ್ನೇಹಿತನಾಗಿದ್ದ ಆಟೋ ಚಾಲಕ ಸೈಯದ್ ನದೀಂ ಪರಿಚಯವಾಗಿತ್ತು. ಆಟೋಗಳನ್ನು ಕದ್ದು ಮಾರಾಟ ಮಾಡುವ ಉಪಾಯವನ್ನು ಸೈಯದ್ ನದೀಂಗೆ ಜಾವೀದ್ ತಿಳಿಸಿದ್ದನು. ಅದರಂತೆ ಇಬ್ಬರೂ ಸೇರಿ ರಾತ್ರಿ ರಸ್ತೆ ಬದಿ ನಿಲ್ಲಿಸುವ ಆಟೋಗಳನ್ನು ಕಳ್ಳತನ ಮಾಡಲಾರಂಭಿಸಿದ್ದರು. ಇದೇ ರೀತಿ ಎರಡು ಆಟೋಗಳನ್ನ ಕದ್ದು, ಅವುಗಳ ನಂಬರ್ ಪ್ಲೇಟ್ ಬದಲಿಸಿ ಮೈಸೂರಿಗೆ ಕೊಂಡೊಯ್ದು ಮಾರಾಟ ಮಾಡಿದ್ದರು.
ಡಿಸೆಂಬರ್ 11ರಂದು ಗಿರಿನಗರ ವ್ಯಾಪ್ತಿಯಲ್ಲಿ ಆಟೋ ರಿಕ್ಷಾವನ್ನು ಕಳ್ಳತನ ಮಾಡಿದ್ದರ ಕುರಿತು ಪ್ರಕರಣ ದಾಖಲಾಗಿತ್ತು. ಇತ್ತ ಕದ್ದ ಆಟೋವನ್ನು ಮೈಸೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಗಳು, ಗಿರಾಕಿಗಳು ಸಿಗದ ಕಾರಣ ಬೆಂಗಳೂರಿಗೆ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಆದರೆ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.