ಬೆಂಗಳೂರು:ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ಕಳೆದ 9 ದಿನಗಳಿಂದ ನಡೆಸುತ್ತಿರುವ ಪಾದಯಾತ್ರೆ ಬಹುತೇಕ ಅಂತಿಮ ರೂಪ ಪಡೆದುಕೊಳ್ಳುತ್ತಿದೆ. ನಾಳೆ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಇಂದು ಬಿಟಿಎಂ ಲೇಔಟ್ನಿಂದ ಹೊರಟು ಅರಮನೆ ಮೈದಾನಕ್ಕೆ ತೆರಳುವ ಮಾರ್ಗದಲ್ಲಿ ಶಾಂತಿನಗರ ವಿಧಾನಸಭೆ ಕ್ಷೇತ್ರವನ್ನು ತಲುಪಿದಾಗ, ನಾಯಕರನ್ನು ಮೆಚ್ಚಿಸಲು ನಡೆಸಿದ ಪ್ರಯತ್ನ ಸಾಕಷ್ಟು ಅಧ್ವಾನವನ್ನು ಸಹ ಉಂಟು ಮಾಡಿತು.
ಪಾದಯಾತ್ರೆ ಸಾಗಿದ ಸ್ಥಳಗಳಲ್ಲಿ ಬಹುತೇಕ ಸಂಚಾರ ದಟ್ಟಣೆ ಸಾಮಾನ್ಯವಾಗಿತ್ತು. ಆದರೆ ಶಾಂತಿನಗರ ವ್ಯಾಪ್ತಿಯಲ್ಲಿ ಸಾಗಿದ ಸಂದರ್ಭ ಇದು ಕೊಂಚ ಹೆಚ್ಚಾಗಿಯೇ ಗೋಚರಿಸಿತು. ಕಿರಿದಾದ ರಸ್ತೆಗಳು ಹಾಗೂ ಕಾಂಗ್ರೆಸ್ ನಾಯಕರ ವಾಹನಗಳು ಸಾಕಷ್ಟು ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಅಭಿಮಾನಿಗಳು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಅಭಿನಂದಿಸಲು ವಿಶೇಷ ವೇದಿಕೆ ಸಿದ್ಧಪಡಿಸಿಕೊಂಡು ನಿಂತಿದ್ದರಿಂದ ಇನ್ನಷ್ಟು ತೊಡಕು ಎದುರಾಯಿತು.
ಮಾರ್ಗದುದ್ದಕ್ಕೂ ಅಭಿಮಾನಿಗಳು ಹಾರ-ತುರಾಯಿ ಹಿಡಿದು, ರಾಜ್ಯ ನಾಯಕರನ್ನು ಅಭಿನಂದಿಸಲು ಮುಂದಾಗಿದ್ದರಿಂದ ಸಾಕಷ್ಟು ಸಂಚಾರ ದಟ್ಟಣೆ ಹಾಗೂ ಹಲವು ಗೊಂದಲಗಳಿಗೆ ಕಾರಣವಾಯಿತು. ಶಾಂತಿನಗರ ವಿಧಾನಸಭಾ ಕ್ಷೇತ್ರ ಪ್ರವೇಶ ಮಾಡುವಾಗ ಅದ್ಧೂರಿಯಾಗಿ ಬರಮಾಡಿಕೊಳ್ಳುವ ಪ್ರಯತ್ನ ಮಹಮದ್ ನಲಪಾಡ್ ಹಾಗೂ ಸ್ಥಳೀಯ ಶಾಸಕ ಎನ್.ಎ. ಹ್ಯಾರಿಸ್ ಮೂಲಕ ಆಯಿತು. ಅಂತಿಮವಾಗಿ ಟ್ರಿನಿಟಿ ವೃತ್ತದಲ್ಲಿ ಪಾದಯಾತ್ರೆಯನ್ನು ಶಾಂತಿನಗರ ಕ್ಷೇತ್ರದಿಂದ ಬೀಳ್ಕೊಡುವ ಸಂದರ್ಭದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿತ್ತು.