ಬೆಂಗಳೂರು : ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಾನ್ಸ್ಫಾರ್ಮರ್ ಸಂಬಂಧಿತ ಅವಘಡ ತಪ್ಪಿಸಲು ರಾಜ್ಯಾದ್ಯಂತ ನಾಳೆಯಿಂದ ಮೇ 20ರ ವರೆಗೆ ಟ್ರಾನ್ಸ್ಫಾರ್ಮರ್ ನಿರ್ವಹಣಾ ಅಭಿಯಾನ ನಡೆಸಲು ಇಂಧನ ಇಲಾಖೆ ನಿರ್ಧರಿಸಿದೆ. ಕಳೆದ ಒಂದು ತಿಂಗಳಲ್ಲಿ ನಡೆದ ಘಟನೆಗಳ ಹಿನ್ನೆಲೆಯಲ್ಲಿ ಈ ಅಭಿಯಾನ ನಡೆಸಲು ತೀರ್ಮಾನಿಸಲಾಗಿದ್ದು, ಎಲ್ಲ ಹಂತದ ಅಧಿಕಾರಿಗಳೂ ಅಭಿಯಾನದಲ್ಲಿ ಭಾಗವಹಿಸುವಂತೆ ಇಂಧನ ಸಚಿವ ವಿ.ಸುನೀಲ್ ಕುಮಾರ್ ನಿರ್ದೇಶನ ನೀಡಿದ್ದಾರೆ.
ರಾಜ್ಯದಲ್ಲಿ 15 ವರ್ಷಕ್ಕಿಂತ ಹಳೆಯ ವಿದ್ಯುತ್ ಪರಿವರ್ತಕಗಳು ಸಾಕಷ್ಟು ಪ್ರಮಾಣದಲ್ಲಿವೆ. ಮಳೆಗಾಲದಲ್ಲಿ ಅವುಗಳ ನಿರ್ವಹಣಾ ಸಮಸ್ಯೆ ಉಂಟಾಗುತ್ತಿದೆ. ಸಿಡಿಲು, ಇತ್ಯಾದಿ ಕಾರಣಗಳಿಂದ ಪರಿವರ್ತಕಗಳ ಹಾನಿ ಸಾಧ್ಯತೆ ಇದೆ. ಜೊತೆಗೆ ಅಧಿಕ ಲೋಡ್ನಿಂದ ಟ್ರಾನ್ಸ್ಫಾರ್ಮರ್ಗೆ ಹಾನಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಅಭಿಯಾನ ನಡೆಸಲಾಗುತ್ತಿದೆ.
ಅಭಿಯಾನದಲ್ಲಿ ಎಲ್ಲ ಹಂತದ ಅಧಿಕಾರಿಗಳೂ ಭಾಗಿಯಾಗಬೇಕು. ಪ್ರತಿ ದಿನ ಪರಿಶೀಲನೆ ನಡೆಸಿದ ಟ್ರಾನ್ಸ್ಫಾರ್ಮರ್ಗಳ ವಿವರ, ಅವುಗಳಲ್ಲಿ ಕಂಡುಬಂದ ನ್ಯೂನತೆ, ಯಾವ ಕಾರಣಕ್ಕಾಗಿ ತೊಂದರೆ ಕಾಣಿಸಿಕೊಂಡಿದೆ ಎಂಬ ವಿವರವನ್ನು ಕೇಂದ್ರ ಕಚೇರಿಗೆ ಪ್ರತಿದಿನ ಕಳುಹಿಸಿಕೊಡುವಂತೆ ಸೂಚನೆ ನೀಡಲಾಗಿದೆ. ಪ್ರತಿ ವರ್ಷವೂ ಈ ರೀತಿ ಅಭಿಯಾನ ನಡೆಸುವುದರಿಂದ ಟ್ರಾನ್ಸ್ಫಾರ್ಮರ್ಗಳ ಕ್ಷಮತೆ ಹೆಚ್ಚಲಿದೆ.