ಕರ್ನಾಟಕ

karnataka

ETV Bharat / state

ನಾರಾಯಣಗೌಡ ಬಿಡುಗಡೆಗೆ ಆಗ್ರಹಿಸಿ ಕರವೇ ಪಂಜಿನ ಮೆರವಣಿಗೆ - ಸಿಎಂ ಸಿದ್ದರಾಮಯ್ಯ

ನಾರಾಯಣಗೌಡ ಸೇರಿದಂತೆ ಬಂಧಿಸಲಾದ ಕರವೇ ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪಂಜಿನ ಮೆರವಣಿಗೆ ನಡೆಸಲಾಗಿದೆ.

Torch light Procession by KaRaVe to release Narayana Gowda
ನಾರಾಯಣಗೌಡ ಬಿಡುಗಡೆಗೆ ಆಗ್ರಹಿಸಿ ಕರವೇ ಪಂಜಿನ ಮೆರವಣಿಗೆ

By ETV Bharat Karnataka Team

Published : Dec 30, 2023, 10:45 AM IST

Updated : Dec 30, 2023, 1:05 PM IST

ನಾರಾಯಣಗೌಡ ಬಿಡುಗಡೆಗೆ ಆಗ್ರಹಿಸಿ ಕರವೇ ಪಂಜಿನ ಮೆರವಣಿಗೆ

ಆನೇಕಲ್​: ಕನ್ನಡ ನಾಮಫಲಕ ಕಡ್ಡಾಯ ಆಗ್ರಹಿಸಿ ಕೆಲ ಅಂಗಡಿ ಬೋರ್ಡ್​ಗಳ ತೆರವಿಗೆ ಯತ್ನಿಸಿದ ನಾರಾಯಣಗೌಡ ಅವರ ಬಂಧನವನ್ನು ಖಂಡಿಸಿ ಕರವೇ ಶಿವರಾಮೇಗೌಡ ಬಣದವರು ಶುಕ್ರವಾರ ಸಂಜೆ ಆನೇಕಲ್ ಪಟ್ಟಣದಲ್ಲಿ ಪಂಜಿನ‌ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. "ನಾರಾಯಣಗೌಡ ಸೇರಿ ಕನ್ನಡಿಗರನ್ನು ಬಿಡುಗಡೆ ಮಾಡದೇ ಇದ್ದರೆ ಉಗ್ರ ಹೋರಾಟ ಕೈಗೊಳ್ಳುತ್ತೇವೆ" ಎಂದು ಕರವೇ ರಾಜ್ಯ ಉಪಾಧ್ಯಕ್ಷ ಲೋಕೇಶ್ ಗೌಡ ಎಚ್ಚರಿಸಿದ್ದಾರೆ.

ಪ್ರತಿಭಟನೆ ವೇಳೆ ಮಾತನಾಡಿದ ಲೋಕೇಶ್​ ಗೌಡ, "ಬೆಂಗಳೂರಿನಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎನ್ನುವುದು ಕನ್ನಡಿಗರ ಹೋರಾಟ. ಆದರೆ ಸರ್ಕಾರ ಪೊಲೀಸರನ್ನು ಮುಂದೆ ಬಿಟ್ಟು ಹಿರಿಯ ಹೋರಾಟಗಾರ ನಾರಾಯಣ ಗೌಡ ಸೇರಿದಂತೆ ಹಲವರನ್ನು ಬಂಧಿಸಿ ಜೈಲಿಗೆ ಕಳುಹಿಸಿರುವುದು ನಾಚಿಕೆಗೇಡಿನ ಸಂಗತಿ. ನಾನು ಕನ್ನಡಿಗ, ಕನ್ನಡಿಗರ ಪರ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಆಸ್ತಿಪಾಸ್ತಿ ಹಾನಿ ಮಾಡಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ಬಂದು ವ್ಯಾಪಾರ ಮಾಡುವವರು ಇಲ್ಲಿನ ಭಾಷೆಗೆ ಗೌರವ ಕೊಡದೇ ಇರುವುದರ ಬಗ್ಗೆ ಚಕಾರ ಎತ್ತಲು ತಾಕತ್ತು ಇಲ್ಲವೇ" ಎಂದು ಪ್ರಶ್ನಿಸಿದರು.

"ಬಂಧಿಸಿರುವ ನಾರಾಯಣ ಗೌಡ ಹಾಗೂ ಕನ್ನಡಪರ ಹೋರಾಟಗಾರರನ್ನು ಕೂಡಲೇ ಬೇಷರತ್ ಬಿಡುಗಡೆ ಮಾಡದೇ ಇದ್ದರೆ ಕನ್ನಡಪರ ಸಂಘಟನೆಗಳು ಉಗ್ರ ಹೋರಾಟ ನಡೆಸಲಿವೆ. ಮುಂದಿನ ದಿನಗಳಲ್ಲಿ ನಡೆಯುವ ಹೋರಾಟಕ್ಕೆ ಸರ್ಕಾರವೇ ನೇರ ಹೊಣೆ ಆಗಲಿದೆ" ಎಂದರು.

ಕನ್ನಡ ಸಾಹಿತ್ಯ ಪರಿಷತ್ ಆನೇಕಲ್ ತಾಲೂಕು ಅಧ್ಯಕ್ಷ ಆದೂರು ಪ್ರಕಾಶ್ ಅವರು ಮಾತನಾಡಿದರು. ಆನೇಕಲ್ ಬಸ್ ನಿಲ್ದಾಣದಿಂದ ತಾಲೂಕು ಕಚೇರಿಯವರೆಗೆ ಪಂಜಿನ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಅನ್ಯರಾಜ್ಯದವರು ಕರ್ನಾಟಕಕ್ಕೆ ಬಂದ ಮೇಲೆ ಕನ್ನಡ ಮಾತನಾಡಲೇಬೇಕು: ಪೂಜಾ ಗಾಂಧಿ

Last Updated : Dec 30, 2023, 1:05 PM IST

ABOUT THE AUTHOR

...view details