ಬೆಂಗಳೂರು :ಜೂನ್ 10ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆ ಮೂಲಕ ಜೆಡಿಎಸ್ ಪಕ್ಷಕ್ಕೆ ಮತ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದೆ. ವಿಧಾನಸಭೆಯಲ್ಲಿ 69 ಶಾಸಕ ಬಲವನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಒಬ್ಬ ಅಭ್ಯರ್ಥಿಯನ್ನು ರಾಜ್ಯಸಭೆಗೆ ಕಳಿಸಲು ಶಕ್ತವಾಗಿದೆಯಾದರೂ ಇವತ್ತು ಜೈರಾಮ್ ರಮೇಶ್ ಹಾಗೂ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿ ಹೊಸ ರಣತಂತ್ರ ಹೆಣೆದಿದೆ.
ಇರುವ ಶಾಸಕ ಬಲದಲ್ಲಿ 45 ಮತಗಳು ಮೊದಲ ಅಭ್ಯರ್ಥಿ ಜೈರಾಮ್ ರಮೇಶ್ ಅವರ ಗೆಲುವಿಗೆ ಸಾಕಾಗುತ್ತವಾದರೆ, ಉಳಿದಂತೆ 24 ಮತಗಳು ಅದರ ಬಳಿ ಹೆಚ್ಚುವರಿಯಾಗಿ ಉಳಿಯುತ್ತವೆ. ಈ ಮತಗಳಿಂದ ಅದರ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗೆಲ್ಲಲು ಸಾಧ್ಯವೇ ಇಲ್ಲವಾದರೂ, ಅವರನ್ನು ಉದ್ದೇಶಪೂರ್ವಕವಾಗಿ ಕಣಕ್ಕಿಳಿಸಲಾಗಿದೆ. ಮೊದಲನೆಯದಾಗಿ, ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಲು ತನಗೆ ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.
ಜೊತೆಗೆ ಜೆಡಿಎಸ್ ಪಕ್ಷ ತನಗಿರುವ 32 ಮತಗಳ ಬೆಂಬಲದೊಂದಿಗೆ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ, ಅದು ಗೆಲುವಿಗೆ ಕಾಂಗ್ರೆಸ್ ಇಲ್ಲವೇ ಬಿಜೆಪಿಯ ಹೆಚ್ಚುವರಿ ಮತಗಳನ್ನು ಪಡೆಯಬೇಕಾದ ಅನಿವಾರ್ಯತೆ ಇದೆ. ಆದರೆ, ಈಗ ಇಂತಹ ಸಾಧ್ಯತೆಗಳಿಗೆ ಕಾಂಗ್ರೆಸ್ ಪಕ್ಷ ಬ್ರೇಕ್ ಹಾಕಿದ್ದು, ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಲು ಸಾಧ್ಯವೇ ಇಲ್ಲ ಎಂಬ ಸಂದೇಶ ರವಾನಿಸಿದೆ.
ಹೀಗಾಗಿ, ತನ್ನ ಅಭ್ಯರ್ಥಿಯ ಗೆಲುವಿಗಾಗಿ ಜೆಡಿಎಸ್ ಪಕ್ಷ ಒಂದೋ ಬಿಜೆಪಿಯ ಮೊರೆ ಹೋಗಬೇಕು. ಆದರೆ, ಇದೀಗ ಬಿಜೆಪಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸಿದೆ. ಈಗ ಜೆಡಿಎಸ್ ಮತ್ತಷ್ಟು ಒತ್ತಡಕ್ಕೆ ಸಿಲುಕಿಕೊಂಡಿದೆ. ಒಂದು ವೇಳೆ ಅದು ತನ್ನ ಗೆಲುವಿಗಾಗಿ ಬಿಜೆಪಿಯ ಬೆಂಬಲ ಪಡೆದರೂ ಅಥವಾ ತಾನು ಸ್ಪರ್ದಿಸದೆ ಬಿಜೆಪಿಯ ಮೂರನೇ ಅಭ್ಯರ್ಥಿಯನ್ನು ಬೆಂಬಲಿಸಿದರೂ ಕಾಂಗ್ರೆಸ್ ಪಕ್ಷದ ರಣತಂತ್ರ ಯಶಸ್ವಿಯಾಗುತ್ತದೆ.
ಜೆಡಿಎಸ್ ಪಕ್ಷ ಕೋಮುವಾದಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರೆ, ಅದು ಬಿಜೆಪಿಯ ಬಿ ಟೀಮ್ ಎಂದು ರಾಜ್ಯದ ಜನರ ಮುಂದೆ ಹೇಳಲು ಕೈ ಪಾಳೆಯಕ್ಕೆ ಅನುಕೂಲವಾಗುತ್ತದೆ. ಹೀಗೆ ಜೆಡಿಎಸ್ ಪಕ್ಷಕ್ಕೂ, ಬಿಜೆಪಿಗೂ ಸಂಬಂಧವಿದೆ ಎಂಬುದನ್ನು ಜಾಹೀರು ಮಾಡಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಮತಗಳನ್ನು ಕ್ರೋಢೀಕರಿಸಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ.