ಬೆಂಗಳೂರು:ದಿನಪತ್ರಿಕೆ ಬಿದ್ದಿರುವುದು, ಕಸ ಗುಡಿಸದಿರುವ, ರಂಗೋಲಿ ಹಾಕದಿರುವ ಮನೆಗಳನ್ನು ಗಮನಿಸಿ ಬೀಗ ಒಡೆದು ಚಿನ್ನಾಭರಣ ದೋಚುತ್ತಿದ್ದ ಮೂವರು ಖದೀಮರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಚನ್ನಮ್ಮನಕೆರೆ ಅಚ್ಚುಕಟ್ಟು ನಿವಾಸಿ ಯೋಗೇಶ್ ಅಲಿಯಾಸ್ ಚಪಾತಿ (24), ಎಲೆಕ್ಟ್ರಾನಿಕ್ ಸಿಟಿಯ ಯಶವಂತ ಅಲಿಯಾಸ್ ಮೀನು (22) ಮತ್ತು ಬನಶಂಕರಿಯ ಮೋಹನಕುಮಾರ್ (29) ಬಂಧಿತ ಆರೋಪಿಗಳಾಗಿದ್ದಾರೆ. ಕದ್ದ ಆಭರಣಗಳನ್ನು ಆರೋಪಿಗಳು ಮಾರಲು ಬರುವ ಬಗ್ಗೆ ಮಾಹಿತಿ ಪಡೆದ ಕುಮಾರಸ್ವಾಮಿ ಲೇಔಟ್ ಠಾಣಾಧಿಕಾರಿ ಟಿ.ಎಂ.ಶಿವಕುಮಾರ್ ನೇತೃತ್ವದ ತಂಡ ಕಳ್ಳರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತರಿಂದ 44.5 ಲಕ್ಷ ರೂ. ಮೌಲ್ಯದ 921 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿಗಳ ತಂಡ ನಗರದ ವಿವಿಧೆಡೆ ಮನೆ ಕಳ್ಳತನ ಮಾಡುತ್ತಿತ್ತು. ಮನೆ ಮುಂದೆ ಪೇಪರ್, ಕಸ ಬಿದ್ದಿರುವುದನ್ನು ಕಳ್ಳರು ಗಮನಿಸುತ್ತಿದ್ದರು. ರಂಗೋಲಿ ಬಿಡಿಸದೆ ಬಹಳ ದಿನವಾಗಿದ್ದಲ್ಲಿ ಅಂತಹ ಮನೆಗಳ ಮೇಲೆ ನಿಗಾ ಇರಿಸುತ್ತಿದ್ದರು. ಸ್ವಲ್ಪ ಹೊತ್ತು ಯಾರೂ ಕಾಣದೆ ಇದ್ದಾಗ ಬೀಗ ಒಡೆದು ಒಳನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದರು.