ಕರ್ನಾಟಕ

karnataka

ETV Bharat / state

ಮನೆ ಮುಂದೆ ದಿನಪತ್ರಿಕೆ ಇರುವ, ಕಸ ಗುಡಿಸದೆ, ರಂಗೋಲಿ ಬಿಡಿಸದ ಮನೆಗಳೇ ಇವರ ಟಾರ್ಗೆಟ್​! - ಬೆಂಗಳೂರು ಕಳ್ಳರ ಬಂಧನ ಪ್ರಕರಣ

ಕದ್ದ ಆಭರಣಗಳನ್ನು ಆರೋಪಿಗಳು ಮಾರಲು ಬರುವ ಬಗ್ಗೆ ಮಾಹಿತಿ ಪಡೆದ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು, ಮೂವರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

three-thieves-arrested-in-bengaluru
ಮೂವರು ಕಳ್ಳರ ಬಂಧನ

By

Published : Apr 28, 2021, 11:05 AM IST

ಬೆಂಗಳೂರು:ದಿನಪತ್ರಿಕೆ ಬಿದ್ದಿರುವುದು, ಕಸ ಗುಡಿಸದಿರುವ, ರಂಗೋಲಿ ಹಾಕದಿರುವ ಮನೆಗಳನ್ನು ಗಮನಿಸಿ ಬೀಗ ಒಡೆದು ಚಿನ್ನಾಭರಣ ದೋಚುತ್ತಿದ್ದ ಮೂವರು ಖದೀಮರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಚನ್ನಮ್ಮನಕೆರೆ ಅಚ್ಚುಕಟ್ಟು ನಿವಾಸಿ ಯೋಗೇಶ್ ಅಲಿಯಾಸ್ ಚಪಾತಿ (24), ಎಲೆಕ್ಟ್ರಾನಿಕ್ ಸಿಟಿಯ ಯಶವಂತ ಅಲಿಯಾಸ್ ಮೀನು (22) ಮತ್ತು ಬನಶಂಕರಿಯ ಮೋಹನಕುಮಾರ್ (29) ಬಂಧಿತ ಆರೋಪಿಗಳಾಗಿದ್ದಾರೆ. ಕದ್ದ ಆಭರಣಗಳನ್ನು ಆರೋಪಿಗಳು ಮಾರಲು ಬರುವ ಬಗ್ಗೆ ಮಾಹಿತಿ ಪಡೆದ ಕುಮಾರಸ್ವಾಮಿ ಲೇಔಟ್ ಠಾಣಾಧಿಕಾರಿ ಟಿ.ಎಂ.ಶಿವಕುಮಾರ್ ನೇತೃತ್ವದ ತಂಡ ಕಳ್ಳರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತರಿಂದ 44.5 ಲಕ್ಷ ರೂ. ಮೌಲ್ಯದ 921 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿಗಳ ತಂಡ ನಗರದ ವಿವಿಧೆಡೆ ಮನೆ ಕಳ್ಳತನ ಮಾಡುತ್ತಿತ್ತು. ಮನೆ ಮುಂದೆ ಪೇಪರ್, ಕಸ ಬಿದ್ದಿರುವುದನ್ನು ಕಳ್ಳರು ಗಮನಿಸುತ್ತಿದ್ದರು. ರಂಗೋಲಿ ಬಿಡಿಸದೆ ಬಹಳ ದಿನವಾಗಿದ್ದಲ್ಲಿ ಅಂತಹ ಮನೆಗಳ ಮೇಲೆ ನಿಗಾ ಇರಿಸುತ್ತಿದ್ದರು. ಸ್ವಲ್ಪ ಹೊತ್ತು ಯಾರೂ ಕಾಣದೆ ಇದ್ದಾಗ ಬೀಗ ಒಡೆದು ಒಳನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದರು.

ಮೂವರು ಕಳ್ಳರ ಬಂಧನ

ಪ್ರತಿ ಆರೋಪಿ ವಿರುದ್ಧ 8ರಿಂದ 10 ಪ್ರಕರಣಗಳಿದ್ದು, ಹಲವು ಬಾರಿ ಜೈಲೂಟ ಉಂಡು ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆದರೂ ಹಳೇ ಚಾಳಿ ಬಿಡದೆ ಕಳ್ಳತನ ಮುಂದುವರೆಸಿದ್ದರು. ಕದ್ದ ಚಿನ್ನಾಭರಣ ಮಾರಿ ಬಂದ ಹಣದಲ್ಲಿ ಗೋವಾಗೆ ಹೋಗಿ ವಿಲಾಸಿ ಜೀವನ ನಡೆಸುತ್ತಿದ್ದರು. ಜೊತೆಗೆ ಪಬ್, ಬಾರ್, ಹುಡುಗಿಯರ ಶೋಕಿ ಮಾಡುತ್ತಿದ್ದರು. ಜೇಬಿನಲ್ಲಿ ಹಣ ಮುಗಿದ ಬಳಿಕ ಮತ್ತೆ ಕೃತ್ಯಕ್ಕೆ ಕೈಹಾಕುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜಾಮೀನು ಕೊಡಿಸುತ್ತಿದ್ದ ಕಳ್ಳರು:

ಕದ್ದ ಚಿನ್ನಾಭರಣ ಮಾರಿದ ಹಣದಲ್ಲಿ ಜೈಲಿನಲ್ಲಿರುವ ತಮ್ಮ ಸ್ನೇಹಿತರು ಅಥವಾ ಬೇರೆ ಗ್ಯಾಂಗ್​ನ ಸದಸ್ಯರಿಗೆ ಜಾಮೀನು ಕೊಡಿಸಲು ಸಹಾಯ ಮಾಡುತ್ತಿದ್ದರು. ನಂತರ ಇವರು ಜೈಲುಪಾಲಾದಾಗ ಈ ಹಿಂದೆ ಇವರಿಂದ ಜಾಮೀನಿಗೆ ಸಹಾಯ ಪಡೆದಿದ್ದ ಆರೋಪಿಗಳು ಶ್ಯೂರಿಟಿ ಕೊಟ್ಟು ಬಿಡಿಸುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ಸಿರಗುಪ್ಪ ಬಳಿ ಭೀಕರ ಅಪಘಾತ: ವಾಣಿಜ್ಯ ತೆರಿಗೆ ಇಲಾಖೆ ನಿರೀಕ್ಷಕ, ಪುತ್ರ ಸೇರಿ ನಾಲ್ವರ ದುರ್ಮರಣ

ABOUT THE AUTHOR

...view details