ಬೆಂಗಳೂರು : ಕೂಡಲಸಂಗಮ ಪೀಠದ ಬಸವ ಜಯಮೃತ್ಯಂಜಯ ಸ್ವಾಮೀಜಿ ಅವರಿಗೆ ಬೆದರಿಕೆ ಕರೆ ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು ಸರ್ಕಾರದ ಮೀಸಲಾತಿ ಘೋಷಣೆಯನ್ನು ಒಪ್ಪಿಕೊಂಡಿದ್ದಕ್ಕೆ ಕೂಡಲಸಂಗಮ ಶ್ರೀಗಳಿಗೆ ಬೆದರಿಕೆ ಕರೆಗಳು ಬರುತ್ತಿವೆ. ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ನಾಯಕರಿಂದಲೇ ಬೆದರಿಕೆ ಕರೆ ಬರುತ್ತಿವೆ ಎಂದು ಸಚಿವರು ಆರೋಪ ಮಾಡಿದ್ದರು.
ಬಳಿಕ ಅರವಿಂದ್ ಬೆಲ್ಲದ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಈ ಕುರಿತು ಮಾಹಿತಿ ನೀಡಿ, ಸೂಕ್ತ ಭದ್ರತೆಯನ್ನು ಶ್ರೀಗಳಿಗೆ ಕಲ್ಪಿಸಲು ಮನವಿ ಮಾಡಿದ್ದರು. ಪ್ರತಿ ದಿನವೂ ಶ್ರೀಗಳಿಗೆ ದೂರವಾಣಿ ಕರೆಗಳು ಬರುತ್ತಿದ್ದು, ನಿಂದನಾತ್ಮಕವಾದ ಮಾತುಗಳನ್ನಾಡುತ್ತಾರೆ. ಕೆಲವರು ಕುಡಿದು ಸಹ ಮಾತನಾಡಿ ಶ್ರೀಗಳ ಮನನೋಯಿಸುತ್ತಿದ್ದಾರೆ. ಇನ್ನು ಕೆಲ ಕರೆಗಳು ಬೆದರಿಕೆ ಕರೆಗಳಾಗಿವೆ, ಹಾಗಾಗಿ ಶ್ರೀಗಳಿಗೆ ಸೂಕ್ತ ಭದ್ರತೆಯ ಅಗತ್ಯವಿದೆ ಸಿಎಂಗೆ ಮನವಿ ಮಾಡಿದರು.
ಇದೀಗಾ ಶಾಸಕರ ಅರವಿಂದ ಬೆಲ್ಲದ್ ಅವರ ಮನವಿಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ ಅವರು ಬೆದರಿಕೆ ಕರೆಗಳ ದಾಖಲೆ ಪರಿಶೀಲಿಸಿ ಸೂಕ್ತ ಭದ್ರತೆ ನೀಡುವಂತೆ ಪೊಲಿಸ್ ಇಲಾಖೆಗೆ ಸೂಚನೆ ನೀಡಿದರು. ಹಾಗಾಗಿ ಇನ್ನು ಮುಂದೆ ಬಸವ ಜಯಮೃತ್ಯುಂಜಯ ಶ್ರೀಗಳು ಪೊಲೀಸ್ ಭದ್ರತೆಯಲ್ಲಿ ಸಂಚಾರ ಮಾಡಲಿದ್ದಾರೆ.