ಕರ್ನಾಟಕ

karnataka

By ETV Bharat Karnataka Team

Published : Jan 10, 2024, 9:57 PM IST

ETV Bharat / state

ದೇವಾಲಯಗಳಲ್ಲಿ ವಸ್ತ್ರ ಸಂಹಿತೆ: ರಾಮಲಿಂಗಾರೆಡ್ಡಿಗೆ ಮನವಿ ಸಲ್ಲಿಸಲು ಮುಂದಾದ ಧಾರ್ಮಿಕ ಸಂಸ್ಥೆ

ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಡ್ರೆಸ್ ಕೋಡ್ ಜಾರಿಗೆ ತರಲು ರಾಜ್ಯದ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಚಿಂತನೆ ನಡೆಸಿದೆ ಎಂದು ಸಂಘದ ಸಂಚಾಲಕ ಮೋಹನ್ ಗೌಡ ತಿಳಿಸಿದ್ದಾರೆ.

thinking-of-implementing-dress-code-in-religious-endowments-department-temples
ದೇವಾಲಯಗಳಲ್ಲಿ ವಸ್ತ್ರ ಸಂಹಿತೆ: ರಾಮಲಿಂಗಾರೆಡ್ಡಿಗೆ ಮನವಿ ಸಲ್ಲಿಸಲು ಮುಂದಾದ ಧಾರ್ಮಿಕ ಸಂಸ್ಥೆ

ಬೆಂಗಳೂರು: ರಾಜ್ಯದ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಬೆಂಗಳೂರಿನ 50 ದೇವಸ್ಥಾನಗಳು ಸೇರಿದಂತೆ ರಾಜ್ಯದಾದ್ಯಂತ 500ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಡ್ರೆಸ್ ಕೋಡ್ ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಚಾಲಕ ಮೋಹನ್ ಗೌಡ ತಿಳಿಸಿದ್ದಾರೆ.

ದತ್ತಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನಗಳಲ್ಲೂ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ರಾಜ್ಯ ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲು ಮಹಾಸಂಘ ನಿರ್ಧರಿಸಿದೆ ಎಂದು ಮಹಾಸಂಘದ ಸಂಚಾಲಕ ಮೋಹನ್ ಗೌಡ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದು, "ಇಂದು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿದರೆ ಕೆಲ ಪ್ರಗತಿಪರರು, ವಿಚಾರವಾದಿಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕರು ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಪತ್ರಿಕಾ ಹೇಳಿಕೆ ಮೂಲಕ ಕಿಡಿಕಾರಿದ್ದಾರೆ.

"ದೇವರ ದರ್ಶನಕ್ಕಾಗಿ ತುಂಡು ಬಟ್ಟೆ ಅಥವಾ ಸಾಂಪ್ರದಾಯಿಕವಲ್ಲದ ಉಡುಗೆಯಲ್ಲಿ ದೇವಸ್ಥಾನಗಳಿಗೆ ಹೋಗುವುದು ಅಭಿವ್ಯಕ್ತಿ ಸ್ವಾತಂತ್ರ್ಯವಾಗಲಾರದು. ಪ್ರತಿಯೊಬ್ಬರಿಗೂ ಮನೆಯಲ್ಲಿ ಮತ್ತು ಸಾರ್ವಜನಿಕವಾಗಿ ಏನು ಧರಿಸಬೇಕೆಂಬ ವೈಯಕ್ತಿಕ ಸ್ವಾತಂತ್ರ್ಯವಿದೆ. ಆದರೆ ದೇವಸ್ಥಾನದಲ್ಲಿ ನಮ್ಮ ಸಂಸ್ಕೃತಿಯಂತೆ ವಸ್ತ್ರ ಧರಿಸುವುದು ಅವಶ್ಯಕವಾಗಿದೆ. ದೇವಾಲಯದ ಆವರಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಲ್ಲ ಧರ್ಮವನ್ನು ಪಾಲಿಸುವುದು ಮುಖ್ಯ. ಹಾಗಾಗಿ ದತ್ತಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನಗಳಲ್ಲೂ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ರಾಜ್ಯ ಹಿಂದೂ ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಲು ಮಹಾಸಂಘ ನಿರ್ಧರಿಸಿದೆ" ಎಂದು ಮೋಹನ್ ಗೌಡ ತಿಳಿಸಿದ್ದಾರೆ.

ಇದನ್ನೂ ಓದಿ:ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಗೈರು: ಬಿಜೆಪಿ ನಾಯಕರಿಂದ ವಾಗ್ದಾಳಿ

ದೇವಾಲಯದಲ್ಲಿ ಮೊಬೈಲ್ ಸ್ವಿಚ್ಡ್​ ಆಫ್ ಆದೇಶ:ಕೆಲವು ತಿಂಗಳ ಹಿಂದೆ ರಾಜ್ಯ ಸರ್ಕಾರವು ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆಯನ್ನು ‌ನಿಷೇಧಿಸಿ ಆದೇಶ ಹೊರಡಿಸಿತ್ತು. ದೇವಸ್ಥಾನದ ಒಳಗೆ ಪ್ರವೇಶಿಸುವಾಗ ಮೊಬೈಲ್ ಫೋನ್ ಸ್ವಿಚ್ಡ್​ ಆಫ್ ಮಾಡಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಸೂಚಿಸಿತ್ತು.

ಆದೇಶದಲ್ಲಿ ಏನಿದೆ?: ದೇವಾಲಯಗಳ ಆವರಣದಲ್ಲಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಹೆಚ್ಚಾಗಿದೆ. ಇದರಿಂದ ಭಕ್ತರು ದೇವಾಲಯಕ್ಕೆ ಆಗಮಿಸಿದಾಗ ಮೊಬೈಲ್ ಫೋನ್ ಬಳಕೆಯ ಶಬ್ದಗಳಿಂದ ದೇವಾಲಯದ ಸಿಬ್ಬಂದಿಗಳಿಗೂ ಹಾಗೂ ದೇವರ ದರ್ಶನಕ್ಕೆ ಬರುವ ಭಕ್ತರಿಗೂ ಏಕ ಮನಸ್ಸಿನಿಂದ ಧ್ಯಾನ ಪೂಜಾದಿಗಳನ್ನು ನಡೆಸಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ದೇವರ ದರ್ಶನದ ಸಮಯದಲ್ಲಿ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ಡ್​ ಆಫ್ ಮಾಡಿ, ದೇವರ ದರ್ಶನ ಮಾಡುವಂತೆ ಸೂಚಿಸಲಾಗಿತ್ತು. ಈ ಬಗ್ಗೆ ದೇವಾಲಯಗಳ ಸೂಚನಾ ಫಲಕಗಳಲ್ಲಿ ಅಗತ್ಯ ಸೂಚನೆಗಳನ್ನು ಪ್ರಕಟಿಸುವಂತೆ ತಿಳಿಸಲಾಗಿತ್ತು.

ABOUT THE AUTHOR

...view details