ಕರ್ನಾಟಕ

karnataka

ETV Bharat / state

ಬಿಎಂಟಿಸಿ ಬಸ್‌ಗಳಲ್ಲಿ ಕಳ್ಳರ ಕೈಚಳಕ: 25 ಲಕ್ಷ ಮೌಲ್ಯದ ಮೊಬೈಲ್‌ ಫೋನ್‌ಗಳು ವಶಕ್ಕೆ

ಕಳೆದ ಆರು ತಿಂಗಳಿನಿಂದ ಮಫ್ತಿಯಲ್ಲಿ ಹೋಗಿ ಬಿಎಂಟಿಸಿ ಬಸ್​ಗಳಲ್ಲಿ ಮೊಬೈಲ್​ ಕದಿಯುತ್ತಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

By

Published : Jan 14, 2023, 7:47 PM IST

Arrested Acuused
ಬಂಧಿತ ಆರೋಪಿಗಳು

ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್ ಫೋನ್ ಕದಿಯುತ್ತಿದ್ದ ಕುಖ್ಯಾತ ಕಳ್ಳರು ಹಾಗೂ ಸ್ವೀಕರಿಸುತ್ತಿದ್ದವರ ಸಹಿತ ಆರು ಜನರ ಗುಂಪನ್ನು ಸುದ್ದಗುಂಟೆ ಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಬರೋಬ್ಬರಿ 25 ಲಕ್ಷ ಮೌಲ್ಯದ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ‌. ಕಳ್ಳತನ ಮಾಡುತ್ತಿದ್ದ ಜಾಫರ್ ಸಿದ್ಧಿಕಿ, ಸೈಯದ್ ಅಖಿಲ್ ಹಾಗೂ ಕಳುವು ಮಾಲು ಸ್ವೀಕರಿಸುತ್ತಿದ್ದ ರೆಹಮಾನ್ ಷರೀಫ್, ಮುಸ್ತಾಕ್ ಅಹಮದ್, ಇಮ್ರಾನ್ ಪಾಶಾ, ಶಫೀಕ್ ಅಹಮದ್ ಬಂಧಿತ ಆರೋಪಿಗಳು.

ಕಳ್ಳರಿಂದ ವಶಪಡಿಸಿಕೊಂಡ ಮೊಬೈಲ್​ ಫೋನ್​ಗಳು

ಬಸ್ ಪ್ರಯಾಣಿಕರೇ ಟಾರ್ಗೆಟ್:ದಿನಪತ್ರಿಕೆ ಕೈಯಲ್ಲಿ ಹಿಡಿದು ಜನಸಂದಣಿ ಇರುವ ಬಸ್​ಗಳನ್ನು ಹತ್ತುತ್ತಿದ್ದ ಆರೋಪಿಗಳು, ಅದೇ ದಿನಪತ್ರಿಕೆಯನ್ನು ಅಡ್ಡಲಾಗಿ ಹಿಡಿದುಕೊಂಡು‌ ಪ್ರಯಾಣಿಕರ ಮೊಬೈಲ್ ಫೋನ್‌ಗಳನ್ನು ಕ್ಷಣಮಾತ್ರದಲ್ಲಿ ಎಗರಿಸುತ್ತಿದ್ದರು. ಕಳ್ಳತನಕ್ಕಾಗಿ ವ್ಯವಸ್ಥಿತ ಜಾಲ ರಚಿಸಿಕೊಂಡಿದ್ದ ಆರೋಪಿಗಳಾದ ಜಾಫರ್ ಸಿದ್ದಿಕ್ ಹಾಗೂ ಸೈಯದ್ ಅಖಿಲ್, ಬಸ್ ಹತ್ತಿದರೆ ಒಂದು ಆಟೋ ಬಸ್‌ನ ಹಿಂಬಾಲಿಸುವಂತೆ ಸಿದ್ಧಪಡಿಸಿಕೊಂಡಿರುತ್ತಿದ್ದರು. ಕಳ್ಳತನ ಯಶಸ್ವಿಯಾದ ಬಳಿಕ ಬಸ್‌ನಿಂದ ಇಳಿದು ಕದ್ದ ಮಾಲನ್ನು ಆಟೋದಲ್ಲಿರುವ ತಮ್ಮ‌ ಕಡೆಯವನ ಕೈಗೆ ನೀಡಿ ಮುಂದಿನ ಕಳ್ಳತನಕ್ಕೆ ಸಜ್ಜಾಗುತ್ತಿದ್ದರು. ಬಳಿಕ ಕದ್ದ ಮೊಬೈಲ್ ಫೋನ್‌ಗಳನ್ನು ಜೆ.ಜೆ‌.ನಗರ, ಗೋರಿಪಾಳ್ಯ ಭಾಗದಲ್ಲಿರುವ ಆರೋಪಿಗಳಿಗೆ ಮಾರಾಟ ಮಾಡುತ್ತಿದ್ದರು.

ಕಳೆದ ಆರು ತಿಂಗಳುಗಳಿಂದ ಆರೋಪಿಗಳ ಸರಣಿ ಕಳ್ಳತನ ಪ್ರಕರಣದ ತನಿಖೆಗಿಳಿದ ಸುದ್ದು ಗುಂಟೆಪಾಳ್ಯ ಠಾಣಾ ಇನ್ಸ್​​​ಪೆಕ್ಟರ್​​ ಮಾರುತಿ ಜಿ ನಾಯಕ್ ನೇತೃತ್ವದ ತಂಡ, ಪ್ರಯಾಣಿಕರಂತೆ ಬಸ್​ಗಳಲ್ಲಿ ಮಫ್ತಿ ಕಾರ್ಯಾಚರಣೆ ಕೈಗೊಂಡು ಸಂಘಟಿತವಾಗಿ ನಡೆಯುತಿದ್ದ ಜಾಲ ಭೇದಿಸಿದೆ. ಬಂಧಿತರಿಂದ 25 ಲಕ್ಷ ಮೌಲ್ಯದ ವಿವಿಧ ಮಾದರಿಯ 150 ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆಯಲಾಗಿದೆ.

ಕದ್ದ ಮೊಬೈಲ್ ಫೋನ್‌ಗಳ ಐಎಂಇಐ ನಂಬರ್ ಬದಲಿಸಿ ವಿದೇಶಗಳಿಗೂ ರವಾನಿಸಿರುವ ಸಾಧ್ಯತೆಯಿದ್ದು, ಸದ್ಯ ತಲೆಮರೆಸಿಕೊಂಡಿರುವ ಮೊಬೈಲ್ ಸ್ವೀಕರಿಸುತ್ತಿದ್ದ ಅಫ್ಜಲ್, ನಹೀಂ ಪಾಶಾ, ಹಾಗೂ ವಸೀಂ ಪತ್ತೆಗಾಗಿ ತನಿಖೆ ಮುಂದುವರೆದಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.

78 ಲಕ್ಷ ರೂ ಮೌಲ್ಯದ 512 ಮೊಬೈಲ್​ ವಶಪಡಿಸಿಕೊಂಡಿದ್ದ ಪೊಲೀಸರು: ಆರು ತಿಂಗಳ ಹಿಂದೆಯೂ ಇದೇ ರೀತಿ ಮೊಬೈಲ್​ ಕಳ್ಳರ ಜಾಲವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದರು. ಏಳೆಂಟು ಜನರ ಗುಂಪನ್ನು ರಚಿಸಿಕೊಂಡು ನಗರದಲ್ಲಿ ಮೊಬೈಲ್​ಗಳನ್ನು ಕದ್ದು, ಹೈದರಾಬಾದ್​, ಮುಂಬೈ ಸೇರಿದಂತೆ ಬೇರೆ ಬೇರೆ ಜಾಗಗಳಿಗೆ ಮಾರಾಟ ಮಾಡುತ್ತಿದ್ದವರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಅವರಲ್ಲಿದ್ದ 78 ಲಕ್ಷ ರೂ ಮೌಲ್ಯದ 512 ಮೊಬೈಲ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಮೊಬೈಲ್​ ಕಳ್ಳತನಕ್ಕೆ ಕಡಿವಾಣ ಹಾಕಲು ಹೊಸ ಯೋಜನೆ: ಇದಷ್ಟೇ ಅಲ್ಲ ರಾಜಧಾನಿ ಬೆಂಗಳೂರಿನಲ್ಲಿ ಮೊಬೈಲ್​ ಕಳ್ಳತನ ಪ್ರಕರಣಗಳು ಕಡಿವಾಣವಿಲ್ಲದಂತೆ ದಾಖಲಾಗುತ್ತಿವೆ. ಈ ಮೊಬೈಲ್​ ಕಳ್ಳತನ ಪ್ರಕರಣಗಳನ್ನು ಹತೋಟಿಗೆ ತರಬೇಕು ಎನ್ನುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್​ ಇಲಾಖೆ ದೆಹಲಿ, ಮುಂಬೈನಲ್ಲಿ ಜಾರಿಯಲ್ಲಿರುವಂತೆಯೇ ಕೇಂದ್ರ ನಿರ್ಮಿತ ಸಿಇಐಆರ್ (ಸೆಂಟ್ರಲ್ ಇಕ್ವಿಪ್​ಮೆಂಟ್ ಐಡೆಂಟಿಟಿ ರಿಜಿಸ್ಟರ್ ಆ್ಯಪ್) ಅಪ್ಲಿಕೇಷನ್ ಸಂಪೂರ್ಣವಾಗಿ ಜಾರಿಗೆ ತರಲು ತೀರ್ಮಾನಿಸಿದೆ. ಕೆಲ ತಿಂಗಳಿನಿಂದ ಈ ಯೋಜನೆ ಪ್ರಾಯೋಗಿಕ ಹಂತದಲ್ಲಿದೆ. ಪ್ರಾಯೋಗಿಕ ಹಂತದಲ್ಲೇ ಉತ್ತಮ ಫಲಿತಾಂಶ ದೊರೆತಿದೆ. ಬೆಂಗಳೂರು ನಗರದಲ್ಲಿ ಈ ಯೋಜನೆ ಜಾರಿಗೆ ಕೇಂದ್ರ ಸರ್ಕಾರವೂ ಅಸ್ತು ಎಂದಿತ್ತು. ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಅಭಿವೃದ್ಧಿಪಡಿಸಿರುವ ಸಿಇಐಆರ್‌ ಯೋಜನೆ ಕಳೆದು ಹೋದ ಮೊಬೈಲ್‌ನ ಐಎಂಇಐ ನಂಬರ್‌ ಆಧರಿಸಿ ಮೊಬೈಲ್‌ ಪತ್ತೆ ಹಚ್ಚುವ, ಮೊಬೈಲ್‌ ಬಳಕೆ ಆಗದಂತೆ ಬ್ಲಾಕ್‌ ಮಾಡುವ ತಂತ್ರಜ್ಞಾನ ಒಳಗೊಂಡಿದೆ.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಹೆಚ್ಚಿದ ಕಳ್ಳತನ; ಪೊಲೀಸರಿಗೆ ಸವಾಲಾದ ಮಂಕಿ ಕ್ಯಾಪ್​ ಕಳ್ಳರು

ABOUT THE AUTHOR

...view details