ಬೆಂಗಳೂರು: ಬ್ಯಾಂಕ್ನಿಂದ ಹಣ ಡ್ರಾ ಮಾಡಿಕೊಂಡ ಕ್ಷಣಮಾತ್ರದಲ್ಲಿ ಬೈಕ್ನಲ್ಲಿ ಬಂದ ಕಳ್ಳರ ತಂಡ ಲಕ್ಷಾಂತರ ರೂಪಾಯಿ ದುಡ್ಡನ್ನು ಎಗರಿಸಿದೆ.
ಬ್ಯಾಂಕ್ನನಿಂದ ಹಣ ಡ್ರಾ ಮಾಡಿ ತರುವಾಗ ಇರಲಿ ಎಚ್ಚರ... ಯಾಕಂದ್ರೆ!?
ದ್ವಿಚಕ್ರ ವಾಹನದಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಕಳ್ಳರ ತಂಡವೊಂದು ದೋಚಿದ ಪ್ರಕರಣ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇಲ್ಲಿನ ವಿಜ್ಞಾನ ನಗರದ ಮುಖ್ಯ ರಸ್ತೆಯಲ್ಲಿರುವ ಬ್ಯಾಂಕ್ನಿಂದ ಸಂಜಯಕುಮಾರ್ ಎಂಬುವವರು ಡಿಸೆಂಬರ್ 24ರಂದು ₹ 4 ಲಕ್ಷ ಹಣ ಡ್ರಾ ಮಾಡಿದ್ದಾರೆ. ನಂತರ ₹ 50 ಸಾವಿರ ಜೇಬಿನಲ್ಲಿಟ್ಟು, ಉಳಿದ ಹಣವನ್ನು ದ್ವಿಚಕ್ರ ವಾಹನದಲ್ಲಿ ಇಟ್ಟಿದ್ದಾರೆ. ಇದನ್ನೇ ಕಾಯುತ್ತಿದ್ದ ಕಳ್ಳರು ಅವರ ಬೆನ್ನುಬಿದ್ದಿದ್ದಾರೆ. ಕೊಂಚ ದೂರದಲ್ಲಿನ ಅಂಗಡಿ ಮಾಲೀಕರಿಗೆ ಜೇಬಿನಲ್ಲಿದ್ದ ₹50 ಸಾವಿರ ಹಣ ಕೊಡಲು ಹೋಗಿ ಬರುವಷ್ಟರಲ್ಲಿ ಉಳಿದ ಹಣ ಎಗರಿಸಿ ಕಳ್ಳರು ಮಾಯವಾಗಿದ್ದಾರೆ.
6 ಜನರ ಖದೀಮರ ತಂಡ ಈ ಕೃತ್ಯದಲ್ಲಿ ಪಾಳ್ಗೊಂಡಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.