ಬೆಂಗಳೂರು:ನಗರದಲ್ಲಿ ನ್ಯೂ ಇಯರ್ ಸೆಲೆಬ್ರೆಷನ್ ಎಂಜಾಯ್ ಮಾಡುತ್ತಿದ್ದ ಕುಟುಂಬಕ್ಕೆ ಕಳ್ಳರು ಶಾಕ್ ನೀಡಿದ್ದಾರೆ. ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ ಮಾಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ರಾಜಧಾನಿಯ ಮಹಾಲಕ್ಷ್ಮಿ ಲೇಔಟ್ನಲ್ಲಿ ನಿನ್ನೆ (ಶುಕ್ರವಾರ) ಸಂಜೆ ಈ ಘಟನೆ ನಡೆದಿದೆ.
ಡಿ.31ರಂದು ವೆಂಕಟೇಶ್ ಎನ್ನುವವರ ಮನೆಗೆ ಮೂವರು ಖದೀಮರು ಎಂಟ್ರಿ ಕೊಟ್ಟಿದ್ದಾರೆ. ಇಬ್ಬರು ಪೊಲೀಸರೆಂದೂ ಹಾಗೂ ಒಬ್ಬ ಕಳ್ಳನನ್ನು ಎಳೆದು ತಂದಿರುವುದಾಗಿ ವ್ಯಕ್ತಿಗಳು ಹೇಳಿದ್ದಾರೆ. ಕಳ್ಳತನದ ವಸ್ತು ನಿಮಗೆ ಕೊಟ್ಟಿದ್ದಾನೆಂದು ಮನೆಯವರಿಗೆ ಹೆದರಿಸಿ ಚಿನ್ನಾಭರಣ ಹಾಗೂ ನಗದು ತೆಗೆದುಕೊಂಡು ಮೂವರು ಪರಾರಿಯಾಗಿದ್ದಾರೆ ಎಂದು ದೂರು ದಾಖಲಾಗಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.