ಕರ್ನಾಟಕ

karnataka

ETV Bharat / state

ಬಾಯಿ ಹರಿತ, ತಪ್ಪುವ ನಾಲಿಗೆ ಹಿಡಿತ.. ಮಂತ್ರಿಗಿರಿ ಕಳ್ಕೊಂಡ ಈಶ್ವರಪ್ಪಗೂ ವಿವಾದಗಳಿಗೂ ನಿಕಟ ನಂಟು! - ಈಶ್ವರಪ್ಪಗೂ ವಿವಾದಗಳಿಗೂ ಬಿಡಿಸಲಾರದ ನಂಟು

ಮುಂದೊಂದು ದಿನ ತ್ರಿವರ್ಣ ಧ್ವಜದ ಬದಲು ಕೇಸರಿ ಭಗವಾಧ್ವಜವೇ ದೇಶದ ರಾಷ್ಟ್ರೀಯ ಧ್ವಜವಾದರೂ ಆಗಬಹುದು, ಇದು ಮುಸ್ಲಿಂ ಗೂಂಡಾಗಳು ಮಾಡಿದ ಕಾರ್ಯ, ನಾವು ಹಿಂದೂ ಧರ್ಮದಲ್ಲಿ ಬರುವ ಯಾವುದೇ ಸಮುದಾಯಕ್ಕೆ ಬೇಕಿದ್ರೂ ಚುನಾವಣಾ ಟಿಕೆಟ್ ಕೊಡ್ತೀವಿ.. ಹೀಗೆ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳಿಂದಲೇ ಈಶ್ವರಪ್ಪ ಸುದ್ದಿಯಾಗುತ್ತಲೇ ಬರುತ್ತಿದ್ದರು. ಈಗ ರಾಜೀನಾಮೆ ನೀಡಿ ಪಕ್ಷದ ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾಗಿದ್ದಾರೆ..

ಈವರೆಗಿನ ಈಶ್ವರಪ್ಪ ಅವರ ವಿವಾದಾತ್ಮಕ ಹೇಳಿಕೆಗಳು ಇವು
ಈವರೆಗಿನ ಈಶ್ವರಪ್ಪ ಅವರ ವಿವಾದಾತ್ಮಕ ಹೇಳಿಕೆಗಳು ಇವು

By

Published : Apr 17, 2022, 11:41 AM IST

ಬೆಂಗಳೂರು: ಕಮೀಷನ್ ಆರೋಪದ‌ ಮಸಿಯಿಂದ ಮಂತ್ರಿಗಿರಿ ಕಳೆದುಕೊಂಡ ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಗೆ ಗ್ರಾಸವಾಗುತ್ತಾರೆ. ಆಗಿಂದಾಗ್ಗೆ ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ಪ್ರಸಂಗಗಳು ಸಾಕಷ್ಟಿವೆ. ಕೆ ಎಸ್ ಈಶ್ವರಪ್ಪ ಅವರು ನೀಡಿದ್ದ ಸಾಲು ಸಾಲು ವಿವಾದಿತ ಹೇಳಿಕೆಗಳು ಇಲ್ಲಿವೆ.

ಆಗಸ್ಟ್ 2021 :ಶಿವಮೊಗ್ಗದಲ್ಲಿ ನಡೆದ ಬಿಜೆಪಿ ನಗರ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡುತ್ತಾ, ಈ ಹಿಂದೆ ಹಿಂದುತ್ವದ ಬಗ್ಗೆ ಮಾತಾಡಿದ್ರೆ ಕೊಲೆ ಆಗ್ತಾ ಇತ್ತು. ಕೇರಳದಲ್ಲಿ ಸಾಕಷ್ಟು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಆಗ ವಾಪಸ್ ಹೊಡಿಯೋ ಶಕ್ತಿ ನಮಗೆ ಇರಲಿಲ್ಲ. ಆದರೆ, ಈಗ ದೇಶದಲ್ಲಿ ಬಿಜೆಪಿ ದೊಡ್ಡದಾಗಿ ಬೆಳೀತಿದೆ. ನಮಗೆ ಈಗ ತಿರುಗಿಸಿ ಹೊಡೆಯುವ ಶಕ್ತಿ ಬಂದಿದೆ. ಹೀಗಾಗಿ, ಯಾರು ನಮ್ಮ ಕಾರ್ಯಕರ್ತರ ಮೇಲೆ ಯಾವುದರಲ್ಲಿ ಹೊಡೀತಾರೋ ಅದ್ರಲ್ಲೆ ತಿರುಗಿಸಿ ಹೊಡೆಯಿರಿ, ಒಂದಕ್ಕೆ ಎರಡು ತೆಗೀರಿ ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.

ಫೆಬ್ರವರಿ 2021 :ಮುಂದೊಂದು ದಿನ ತ್ರಿವರ್ಣ ಧ್ವಜದ ಬದಲು ಕೇಸರಿ ಭಗವಾಧ್ವಜವೇ ದೇಶದ ರಾಷ್ಟ್ರೀಯ ಧ್ವಜವಾದರೂ ಆಗಬಹುದು ಎಂಬ ಹೇಳಿಕೆ ನೀಡುವ ಮೂಲಕ ಕೆ ಎಸ್ ಈಶ್ವರಪ್ಪ ಭಾರಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ವಿಧಾನಸೌಧದಲ್ಲಿ ಮಾತನಾಡುತ್ತಾ, ಮುಂದೊಂದು ದಿನ ಭಗವಾಧ್ವಜವೇ ರಾಷ್ಟ್ರ ಧ್ವಜ ಆಗಬಹುದು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಇತ್ತ ಬಿಜೆಪಿಯೂ ಈಶ್ವರಪ್ಪರ ಹೇಳಿಕೆಯಿಂದ ಮುಜುಗರಕ್ಕೊಳಗಾಗಬೇಕಾಯಿತು. ಈ ಹೇಳಿಕೆಯನ್ನು ಖಂಡಿಸಿ ಹಾಗೂ ಮಂತ್ರಿಗಿರಿಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರು.

ಫೆಬ್ರವರಿ 2021 :ಫೆ.20ರಂದು ಶಿವಮೊಗ್ಗದಲ್ಲಿ ಬಜರಂಗದಳದ ಹರ್ಷ ಎಂಬ ಯುವಕನ ಕೊಲೆಯಾಗುತ್ತದೆ. ಕೂಡಲೇ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವ ಈಶ್ವರಪ್ಪ, 'ಇದು ಮುಸ್ಲಿಂ ಗೂಂಡಾಗಳು ಮಾಡಿದ ಕಾರ್ಯ' ಎಂಬ ಹೇಳಿಕೆ ಕೊಡುವುದರ ಜೊತೆಗೆ ಶವದ ಮೆರವಣಿಗೆಯನ್ನೂ ಮುಂದೆ ನಿಂತು ನಡೆಸುತ್ತಾರೆ. ನಂತರ ಇದು ಇಡೀ ಶಿವಮೊಗ್ಗ ನಗರದಾದ್ಯಂತ ಕರ್ಫ್ಯೂ ಜಾರಿ ಮಾಡುವ ಮಟ್ಟಿಗಿನ ಕೋಮುದಳ್ಳುರಿಗೆ ಕಾರಣವಾಗುತ್ತದೆ.

ಆಗಸ್ಟ್ 2021 :ಕಾಂಗ್ರೆಸ್ಸಿಗರು ಕುಡುಕರು ಎನ್ನುತ್ತಲೇ ಅವಾಚ್ಯ ಪದ ಬಳಕೆ ಮೂಲಕ ಕೆ ಎಸ್ ಈಶ್ವರಪ್ಪ ಮತ್ತೊಂದು ವಿವಾದಾತ್ಮಕ ಹೇಳಿಕೆಗೆ ಸುದ್ದಿಯಾಗಿದ್ದರು. ಹಿಂದೂ ಕಾರ್ಯಕರ್ತರ ಮೇಲೆ ಕೈ ಮಾಡಿದವರನ್ನು ಒಂದಕ್ಕೆ ಎರಡು ತೆಗೆದು ಬಿಡಿ ಎಂಬ ಈಶ್ವರಪ್ಪನವರ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಟೀಕಾಪ್ರಹಾರ ನಡೆಸಿದ್ದರು. ಈ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ಕೇಳಿದಾಗ, ಕೆ ಎಸ್‌ ಈಶ್ವರಪ್ಪ ಸಿಟ್ಟಿನಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ತಾ, ವಿವಾದಾತ್ಮಕ ಮತ್ತು ಅಸಭ್ಯ ಪದವನ್ನು ಬಳಸಿದ್ದರು. ಕೊನೆಗೆ ಈ ಹೇಳಿಕೆ ವಿರುದ್ಧ ಸಾಕಷ್ಟು ವಿರೋಧಗಳು ವ್ಯಕ್ತವಾದ ಬೆನ್ನಿಗೆ ಈಶ್ವರಪ್ಪ ಕ್ಷಮೆ ಕೋರಿದ್ದರು.

ನವೆಂಬರ್ 2020 :ಬೆಳಗಾವಿ ಲೋಕಸಭೆ ಉಪಚುನಾವಣೆ ಸಂದರ್ಭ ನಾವು ಹಿಂದೂ ಧರ್ಮದಲ್ಲಿ ಬರುವ ಯಾವುದೇ ಸಮುದಾಯಕ್ಕೆ ಬೇಕಿದ್ರೂ ಚುನಾವಣಾ ಟಿಕೆಟ್ ಕೊಡ್ತೀವಿ. ಅದು ಲಿಂಗಾಯತರಾಗಿರಬಹುದು, ಕುರುಬರಾಗಿರಬಹುದು, ಒಕ್ಕಲಿಗರಾಗಿರಬಹುದು ಅಥವಾ ಬ್ರಾಹ್ಮಣರಾಗಿರಬಹುದು. ಆದ್ರೆ, ಖಂಡಿತವಾಗಿಯೂ ಮುಸ್ಲಿಮರಿಗೆ ಟಿಕೆಟ್ ಕೊಡಲ್ಲ ಎಂಬ ಹೇಳಿಕೆ ನೀಡಿದ್ದರು. ಉಪಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಈ ರೀತಿ ಉತ್ತರ ನೀಡಿದ್ದರು. ಈಶ್ವರಪ್ಪರ ಈ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಟೀಕೆಗೆ ಗ್ರಾಸವಾಗಿತ್ತು.

2015 ಅಕ್ಟೋಬರ್ :2015ರಲ್ಲಿ ಪರಿಷತ್ ಪ್ರತಿಪಕ್ಷದ ನಾಯಕನಾಗಿದ್ದಾಗ ಬಿಜೆಪಿ ಮುಖಂಡ ಅತ್ಯಾಚಾರ ಸಂಬಂಧ ದೊಡ್ಡ ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದರು. ಸುದ್ದಿವಾಹಿನಿಯ ವರದಿಗಾರ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, 'ಅಲ್ಲಮ್ಮ... ನೀನೀಗ ಇಲ್ಲಿದ್ದೀಯಮ್ಮ.. ಒಬ್ಬ ಹೆಣ್ಣುಮಗಳು. ಇಲ್ಲಿ ಯಾವನೋ ಎಳ್ಕೊಂಡ್ಹೋಗಿ ನಿನ್ನ ರೇಪ್ ಮಾಡಿದ್ರೆ, ಪ್ರತಿಪಕ್ಷದವ್ರು ನಾವು ಎಲ್ಲೋ ಇರ್ತೀವಿ, ಏನ್ ಮಾಡಬೇಕು ಹೇಳಿ' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತೀವ್ರ ಆಕ್ರೋಶ, ಟೀಕೆ ವ್ಯಕ್ತವಾಗಿತ್ತು.

ಹತ್ಯೆಗೀಡಾಗಿದ್ದ ಎಸ್.ಐ ಜಗದೀಶ್ ಅವರ ಅಂತಿಮ ದರ್ಶನಕ್ಕಾಗಿ ರಾಮನಗರದ ಮಲ್ಲಾಪುರಕ್ಕೆ ಬಂದಿದ್ದ ವೇಳೆ, ವರದಿಗಾರ್ತಿಯೊಬ್ಬರು ಎಲ್ಲೋ ಒಂದ್ ಕಡೆ ಸರ್ಕಾರವನ್ನು ಸಮರ್ಥವಾಗಿ ಎಚ್ಚರಿಸುವಂಥ ಕೆಲಸವನ್ನ ಪ್ರತಿಪಕ್ಷವಾಗಿ ಬಿಜೆಪಿ ಕೂಡ ಮಾಡ್ತಿಲ್ಲ ಅಂತಾ ನಿಮಗೆ ಅನಿಸ್ತಾ ಇಲ್ವಾ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸುವ ಭರದಲ್ಲಿ ಈಶ್ವರಪ್ಪ ಈ ರೀತಿ ನಾಲಿಗೆ ಹರಿಬಿಟ್ಟಿದ್ದರು.

2014: 2014ರಲ್ಲಿ ಲೋಕಸಭೆ ಚುನಾವಣೆ ಪ್ರಚಾರ ವೇಳೆ ಕೊಪ್ಪಳ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡತ್ತಾ, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ವಿವಾದಿತ ಹೇಳಿಕೆ ನೀಡಿದ್ದರು. 'ಮನಮೋಹನ್ ಸಿಂಗ್ ಗಂಡಸೇ ಅಲ್ಲ, ಕಾಂಗ್ರೆಸ್‌ನಲ್ಲಿ ತಾಯಿ ಮೊಲೆ ಹಾಲು ಕುಡಿದ ಗಂಡಸರೇ ಇಲ್ಲ' ಎಂಬ ವಿವಾದಿತ ಮಾತುಗಳನ್ನು ಆಡಿದ್ದರು. ಅವರ ಆ ಹೇಳಿಕೆ ದೇಶಾದ್ಯಂತ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಕೊನೆಗೆ ಈಶ್ವರಪ್ಪ ಕ್ಷಮೆ ಕೇಳುವುದರೊಂದಿಗೆ ವಿವಾದಕ್ಕೆ ಇತಿಶ್ರೀ ಹಾಡಲಾಗಿತ್ತು.

For All Latest Updates

TAGGED:

ABOUT THE AUTHOR

...view details