ಕರ್ನಾಟಕ

karnataka

By ETV Bharat Karnataka Team

Published : Dec 2, 2023, 10:28 PM IST

ETV Bharat / state

'ಗ್ರಾಪಂ​ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಬಳಿಕ ಆಯ್ಕೆಯಾದವರ ವಿರುದ್ಧ ಅವಿಶ್ವಾಸ ಮಂಡಿಸಲು 15 ತಿಂಗಳ ಮಿತಿ ಇಲ್ಲ'

ಹೈಕೋರ್ಟ್​ ಗ್ರಾಪಂ ಅಧ್ಯಕ್ಷರ, ಉಪಾಧ್ಯಕ್ಷರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದು, ಅನರ್ಹಗೊಳ್ಳುವುದು ಮತ್ತು ಮರಣಹೊಂದಿದಲ್ಲಿ ಅದೇ ಹುದ್ದೆಗೆ ಆಯ್ಕೆಯಾದವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು 15 ತಿಂಗಳ ನಿಷೇಧಿತ ಅವಧಿಯ ಅನ್ವಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

Etv Bharatthere-is-no-limit-of-15-months-for-filing-no-confidence-says-high-court
'ಗ್ರಾಪಂ​ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಬಳಿಕ ಆಯ್ಕೆಯಾದವರ ವಿರುದ್ಧ ಅವಿಶ್ವಾಸ ಮಂಡಿಸಲು 15 ತಿಂಗಳ ಮಿತಿ ಇಲ್ಲ'

ಬೆಂಗಳೂರು: ಗ್ರಾಮ ಪಂಚಾಯಿತಿ ಅಧ್ಯಕ್ಷರ, ಉಪಾಧ್ಯಕ್ಷರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದು, ಅನರ್ಹಗೊಳ್ಳುವುದು ಮತ್ತು ಮರಣವನ್ನಪ್ಪಿದಲ್ಲಿ ಅದೇ ಹುದ್ದೆಗೆ ಆಯ್ಕೆಯಾದವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು 15 ತಿಂಗಳ ನಿಷೇಧಿತ ಅವಧಿಯ ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್​ ಅಭಿಪ್ರಾಯಪಟ್ಟಿದೆ. ಯಲಹಂಕ ತಾಲೂಕಿನ ಬಾಗಲೂರು ಗ್ರಾಮ ಪಂಚಾಯಿತಿ​ ಅಧ್ಯಕ್ಷರಾಗಿದ್ದ ಪ್ರೀತಿ ಮುನೇಗೌಡ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜು ಅವರಿದ್ದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಈ ಆದೇಶ ನೀಡಿದೆ.

ಅಲ್ಲದೇ, ಚುನಾವಣಾ ಫಲಿತಾಂಶದ ದಿನಾಂಕದಿಂದ 15 ತಿಂಗಳ ಅವಧಿಯನ್ನು ಲೆಕ್ಕ ಹಾಕಲಾಗುತ್ತದೆ. ಎರಡನೇ ಅವಧಿಯಗೆ ಇದನ್ನು 30 ತಿಂಗಳ ಮುಕ್ತಾಯ ದಿನದಿಂದ ಲೆಕ್ಕ ಹಾಕಲಾಗುತ್ತಿದೆ. ಆದ್ದರಿಂದ ಖಾಲಿ ಹುದ್ದೆಗೆ ಆಯ್ಕೆಯಾದವರಿಗೆ ಕನಿಷ್ಠ 15 ತಿಂಗಳ ನಿಷೇಧ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟ ಪಡಿಸಿದೆ.

ಗ್ರಾಮ ಸ್ವರಾಜ್​ ಮತ್ತು ಪಂಚಾಯತ್​ ರಾಜ್​ ಕಾಯಿದೆ ಸೆಕ್ಷನ್​ 46 ಮತ್ತು 49ರ ತಿದ್ದುಪಡಿ ಅಂಶಗಳನ್ನು ಪರಿಶೀಲಿಸಿದ ನ್ಯಾಯಪೀಠ, ಗ್ರಾಮ ಪಂಚಾಯತ್​ಗೆ 5 ವರ್ಷಗಳ ಅವಧಿಗೆ ಚುನಾವಣೆ ನಡೆದರೂ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು 30 ತಿಂಗಳಿಗೆ ಇಳಿಕೆ ಮಾಡಿ ಎರಡು ಅವಧಿಯನ್ನಾಗಿಸಲಾಗಿದೆ. ಮೀಸಲು ಸೌಲಭ್ಯದಂತೆ ಸೆಕ್ಷನ್​ 43ರಲ್ಲಿ ತಿಳಿಸಿರುವಂತೆ ಅವಿಶ್ವಾಸ ನಿರ್ಣಯವನ್ನು 30 ತಿಂಗಳಿನಿಂದ 15 ತಿಂಗಳಿಗೆ ಇಳಿಕೆ ಮಾಡಲಾಗಿದೆ. ಆದರೆ, ಮೊದಲ ಅವಧಿಯಲ್ಲಿ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದವರು ರಾಜೀನಾಮೆ, ಅನರ್ಹಗೊಳಿಸುವುದು, ಸಾವನ್ನಪ್ಪಿದಾಗ ಮೊದಲನೇ ಅವಧಿ 30 ತಿಂಗಳು ಮತ್ತು ಎರಡನೇ ಅವಧಿಗೂ 30 ತಿಂಗಳು ಇದೆ. ಈ ನಿಟ್ಟಿನಲ್ಲಿ ರಾಜೀನಾಮೆಯಿಂದ ಆಯ್ಕೆಯಾದವರಿಗೆ 15 ತಿಂಗಳ ಒಳಗಾಗಿ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ಅಡ್ಡಿಯಾಗುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?:ಅರ್ಜಿದಾರರ 2021ರ ಡಿಸೆಂಬರ್​ 27ರಂದು ಬಾಗಲೂರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದು, 2022ರ ಜನವರಿ 18ರಂದು ಹಮೀದಾ ಎಂಬುವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2023ರ ಫೆಬ್ರವರಿ 1ರಂದು ಹಮೀದಾ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಇದನ್ನು 2023ರ ಫೆಬ್ರವರಿ 1ರಂದು ರಾಜೀನಾಮೆಯನ್ನು ಪುರಸ್ಕರಿಸಲಾಗಿತ್ತು. ಅದೇ ಸ್ಥಾನಕ್ಕೆ 2023ರ ಮಾರ್ಚ್​ 7ರಂದು ಹೊಸದಾಗಿ ಚುನಾವಣೆ ನಡೆದು ಪ್ರೀತಿ ಮುನೇಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬಳಿಕ 2023ರ ಅಕ್ಟೋಬರ್​ 10ರಂದು ಪ್ರೀತಿ ಮುನೇಗೌಡರ ವಿರುದ್ಧ ಇತರ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. 2023ರ ನವೆಂಬರ್​ 21 ನಿರ್ಣಯ ಮಂಡಿಸಲು ದಿನಾಂಕವನ್ನು ನಿಗದಿ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಪ್ರೀತಿ ಮುನೇಗೌಡ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರೀತಿ ಮುನೇಗೌಡ ಅವರು 2023ರ ಮಾರ್ಚ್ ತಿಂಗಳಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗ್ರಾಮ ಸ್ವರಾಜ್​ ಮತ್ತು ಪಂಚಾಯತ್​ ರಾಜ್​ ಕಾಯಿದೆಯ ಸೆಕ್ಷನ್​ 49ರ ಅವರ ವಿರುದ್ಧ 15 ತಿಂಗಳ ಮುನ್ನ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ಅವಕಾಶವಿಲ್ಲ. ಅಲ್ಲದೇ, ಅಧ್ಯಕ್ಷರಾಗಿ ಆಯ್ಕೆಯಾದ ಎಂಟು ತಿಂಗಳ ಒಳಗೆ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಅದನ್ನು ಪರಿಗಣಿಸುವುದು ಮತ್ತು ಚುನಾವಣಾ ಸಭೆಗೆ ನೋಟಿಸ್​ ನೀಡುವುದಕ್ಕೆ ನಿಯಮ ಬಾಹಿರ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಇದನ್ನೂ ಓದಿ:ಹೈಕೋರ್ಟ್ ಕಟ್ಟಡ ಸ್ಥಳಾಂತರಿಸಲು ಕೋರಿರುವ ಅರ್ಜಿ: ಕಾಲಾವಕಾಶ ಕೋರಿದ ಆಡಳಿತ ವಿಭಾಗ

ABOUT THE AUTHOR

...view details