ಬೆಂಗಳೂರು : ಗಣರಾಜ್ಯೋತ್ಸವ ಪರೇಡ್ಗೆ ಆಯ್ಕೆಯಾದ ಕರ್ನಾಟಕದ ಸ್ತಬ್ಧಚಿತ್ರ ಹಲವು ವೈಶಿಷ್ಟತೆಗಳನ್ನು ಹೊಂದಿದೆ. ನವದೆಹಲಿಯಲ್ಲಿ ಈ ವರ್ಷದ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಕರ್ನಾಟಕದ ಸಾಂಪ್ರದಾಯಿಕ ಕರಕುಶಲತೆಯ ತೊಟ್ಟಿಲು ಎಂಬ ವಿಷಯದ ಕುರಿತು ರಾಜ್ಯದ ಸ್ತಬ್ಧಚಿತ್ರ ಆಯ್ಕೆ ಮಾಡಲಾಗಿತ್ತು.
'ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು' ಎಂಬ ವಿಷಯದ ಕುರಿತು ನಮ್ಮ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವ ಪರೇಡ್ಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಸತತ 13ನೇ ಬಾರಿಗೆ ನಮ್ಮ ಟ್ಯಾಬ್ಲೋ ಆಯ್ಕೆಯಾಗಿದೆ.
ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು 12 ರಾಜ್ಯಗಳ ಪಟ್ಟಿಯನ್ನು ಆಯ್ಕೆ ಮಾಡಲಾಗಿದೆ. ದಕ್ಷಿಣ ಭಾರತದಿಂದ ಕರ್ನಾಟಕ ಮಾತ್ರ ಆಯ್ಕೆಯಾಗಿದೆ ಎಂದು ಸಿಎಂ ಬೊಮ್ಮಾಯಿಯವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು.
'ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು' ಎಂಬ ವಿಷಯದ ಕುರಿತು ಸಿದ್ಧವಾಗಿರುವ ಸ್ತಬ್ಧಚಿತ್ರ ಮುಂಭಾಗದಲ್ಲಿ ಮೈಸೂರಿನ ಬೀಟೆ ಮರ ಹಾಗೂ ದಂತದ ಕೆತ್ತನೆಯ ಕಲಾಕೃತಿ, ಮಧ್ಯದಲ್ಲಿ ಕಣ್ಮನ ಸೆಳೆಯುವ ಬಿದರಿ ಕಲಾಕೃತಿ, ಕಿನ್ನಾಳ ಕಲಾ ವಸ್ತುಗಳು, ಕಂಚಿನ ಪ್ರತಿಮೆಗಳು, ಚೆನ್ನಪಟ್ಟಣದ ಮೆರುಗೆಣ್ಣೆಯ ಆಟಿಕೆಗಳು, ಮರಗೆತ್ತನೆ ಮತ್ತು ಕುಂಬಾರಿಕೆ ಹಾಗೂ ಹಿಂಬದಿಯಲ್ಲಿ ಪಾರಂಪರಿಕ ಕರಕುಶಲ ವಸ್ತುಗಳ ಜತೆಗೆ ಮಾತೆ ಕಮಲಾದೇವಿ ಇದ್ದಾರೆ ಎಂದು ಕರ್ನಾಟಕ ಕರಕುಶಲ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೌಶಲ್ಯದಿಂದ ತಯಾರಿಸಿದ ಮಡಿಕೆ, ಸೂಕ್ಷ್ಮವಾಗಿ ಕೆತ್ತನೆ ಮಾಡಿದ ಶ್ರೀಗಂಧದ ಚಿಕಣಿ (ಮಿನಿಯೇಚರ್ ಅಥವಾ ಕಿರು ಮಾದು ವಸ್ತುಗಳು), ಕೈಮಗ್ಗದ ಸೀರೆಗಳು, ಕೈಯಿಂದಲೇ ತಯಾರಿಸಿದ ವಿಶಿಷ್ಟ ಕಲಾಕೃತಿಗಳೂ ಒಳಗೊಂಡಂತೆ ರಾಜ್ಯದ 16 ಕರಕುಶಲ ವಸ್ತುಗಳು ಭೌಗೋಳಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂದೇ ಕರೆಯುತ್ತಾರೆ.
ಚೆನ್ನಪಟ್ಟಣ ಮತ್ತು ಕಿನ್ನಾಳ ಮರದ ಕೆತ್ತನೆ ವಸ್ತುಗಳು (ಇನ್ ಕಾರ್ವಿಂಗ್), ಕಂಚಿನ ಪ್ರತಿಮೆಗಳು, ಮೆರುಗೆಣ್ಣೆಯ ಹಾಗೂ ಬಿದರಿಯ ಕಲಾಕೃತಿಗಳು ಕರ್ನಾಟಕದ ಪ್ರಮುಖ ಕಲೆಗಳಾಗಿವೆ ಎಂದು ಸ್ತಬ್ಧಚಿತ್ರದ ಕುರಿತು ನಿಗಮದ ಅಧಿಕಾರಿಗಳು ಹೇಳಿದ್ದಾರೆ.
ಟೆರ್ರಾಕೋಟ ಅತ್ಯಂತ ಹಳೆಯ ಕಲೆ :ಟೆರ್ರಾಕೋಟ ಅತ್ಯಂತ ಹಳೆಯ ಕಲೆಯಾಗಿದೆ. ವಿಜಯನಗರದ ಅರಸರು ಘೋಷಿಸುತ್ತಿದ್ದ ಕಿನ್ನಾಳದ ಮೆರುಗೆಣ್ಣೆಯ ಕಲಾಕೃತಿಗಳು, ಕರ್ನಾಟಕದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ಮತ್ತು ಒಂದು ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಶ್ರೀಗಂಧದ ಕಲಾಕೃತಿಗಳು ಹಾಗೂ ದಂತದ ಕೆತ್ತನೆಯ ಕಲೆ ರಾಜ್ಯದಲ್ಲಿ ವಿಶಿಷ್ಟ ಎನಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಮಲಾದೇವಿ ಚಟ್ಟೋಪಾಧ್ಯಾಯರಿಂದ ಕಲೆ ಉಳಿಸಲು ಪ್ರಮುಖ ಪಾತ್ರ :ಸ್ವಾತಂತ್ರ್ಯ ಹೋರಾಟಗಾರರು, ಅಭಿನೇತ್ರಿ, ಸಮಾಜ ಸೇವಕರು, ಕಲಾ ಉತ್ತೇಜಕರೂ ಎಲ್ಲವೂ ಆಗಿದ್ದ ಕರ್ನಾಟಕದವರೇ ಆದ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ನಶಿಸಿ ಹೋಗುತ್ತಿದ್ದ ಪಾರಂಪರಿಕ ಕರಕುಶಲ ವಸ್ತುಗಳ ತಯಾರಿಕಾ ಕಲೆಯನ್ನು ಉಳಿಸಲು ಪ್ರಮುಖ ಪಾತ್ರ ವಹಿಸಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ