ಕರ್ನಾಟಕ

karnataka

By

Published : Sep 24, 2020, 10:51 PM IST

ETV Bharat / state

ಕರ್ನಾಟಕ ಧನವಿನಿಯೋಗ ವಿಧೇಯಕ-2020ಕ್ಕೆ ಸದನ ಅಂಗೀಕಾರ

2020-21ನೇ ಆರ್ಥಿಕ ವರ್ಷದ ಮೊದಲ ಪೂರಕ ಅಂದಾಜನ್ನು ರಾಜ್ಯ ಸರ್ಕಾರ ಮಂಡಿಸಿದ್ದು, 4008 ಕೋಟಿ ರೂ. ಮೊತ್ತದ ಪೂರಕ ಅಂದಾಜುಗಳಿಗೆ ಗುರುವಾರ ವಿಧಾನಸಭೆ ಅಂಗೀಕಾರ ನೀಡಿದೆ.

The House has approved the Karnataka Charter of 2020
ಕರ್ನಾಟಕ ಧನವಿನಿಯೋಗ ವಿಧೇಯಕ 2020ಕ್ಕೆ ಸದನ ಅಂಗೀಕಾರ

ಬೆಂಗಳೂರು: 2020-21ನೇ ಆರ್ಥಿಕ ವರ್ಷದ ಮೊದಲ ಪೂರಕ ಅಂದಾಜನ್ನು ರಾಜ್ಯ ಸರ್ಕಾರ ಮಂಡಿಸಿದ್ದು, 4008 ಕೋಟಿ ರೂ. ಮೊತ್ತದ ಪೂರಕ ಅಂದಾಜುಗಳಿಗೆ ಗುರುವಾರ ವಿಧಾನಸಭೆ ಅಂಗೀಕಾರ ನೀಡಿದೆ.

ಸಿಎಂ ಯಡಿಯೂರಪ್ಪ ಪರವಾಗಿ ಪೂರಕ ಅಂದಾಜುಗಳನ್ನು ಮಂಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ, ಕೊರೊನಾ ಸಂಕಷ್ಟದಿಂದಾಗಿ ಅಗತ್ಯ ವೆಚ್ಚಗಳಿಗಾಗಿ ಮೊದಲ ಕಂತಿನ ಪೂರಕ ಅಂದಾಜುಗಳನ್ನು ಮಂಡಿಸಿ ಒಪ್ಪಿಗೆ ಪಡೆದರು.

ಪೂರಕ ಅಂದಾಜಿನ ಪ್ರಕಾರ ಸರ್ಕಾರಿ ಆಸ್ಪತ್ರೆಗೆ ಕೊರೊನಾ ವೈದ್ಯಕೀಯ ಸಲಕರಣೆ ಮತ್ತಿತರ ವೆಚ್ಚಗಳಿಗೆ 1090 ಕೋಟಿ ರೂ., ವಿವಿಧ ಸರ್ಕಾರಿ ಸಾರಿಗೆ ನಿಗಮಗಳ ಸಿಬ್ಬಂದಿಗೆ ಲಾಕ್​​ಡೌನ್ ವೇಳೆ ವೇತನ ನೀಡಲು 543.91 ಕೋಟಿ ರೂ., ವೈದ್ಯಕೀಯ ಕಾಲೇಜುಗಳಲ್ಲಿ ಮೂಲಸೌಕರ್ಯಕ್ಕಾಗಿ 165.7 ಕೋಟಿ ರೂ., ಕೃಷಿ ಉಪಕರಣಗಳ ಖರೀದಿಗೆ 100 ಕೋಟಿ ರೂ., ಆಟೋ ಚಾಲಕರಿಗೆ ಕೊರೊನಾ ಲಾಕ್​ಡೌನ್​ ಪರಿಹಾರ ನೀಡಲು 97 ಕೋಟಿ ರೂ., ಅಂಗನವಾಡಿಗಳ ದುರಸ್ತಿಗೆ 87 ಕೋಟಿ ರೂ., ವಾರ್ತಾ ಇಲಾಖೆಯಿಂದ ಬಾಕಿಯಿದ್ದ ಬಿಲ್ ಹಣ ಪಾವತಿಸಲು 56 ಕೋಟಿ ರೂ. ಹೀಗೆ ವಿವಿಧ ವೆಚ್ಚಗಳ ಬಾಬ್ತು 4008 ಕೋಟಿ ರೂ. ಪೂರಕ ಅಂದಾಜಿಗೆ ಒಪ್ಪಿಗೆ ಪಡೆಯಲಾಯಿತು.

ಅಧಿಕಾರಿಗಳ ಬೋಗಸ್ ಲೆಕ್ಕ:

ಈ ವೇಳೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಈಗಾಗಲೇ 2.37 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದೀರಿ. ಇದೀಗ 4008 ಕೋಟಿ ರೂಪಾಯಿ ಪೂರಕ ಅಂದಾಜು ಮಂಡಿಸುತ್ತಿದ್ದೀರಿ. ಈ ಹಣ ಹೇಗೆ ಹೊಂದಿಸುತ್ತೀರಿ? ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.

ಬಳಿಕ ಸಿದ್ದರಾಮಯ್ಯ ಅವರೇ ಮಾತು ಮುಂದುವರೆಸಿ, ಮಾಧುಸ್ವಾಮಿ ನಾನೂ 13 ಬಜೆಟ್ ಮಂಡನೆ ಮಾಡಿದ್ದೇನೆ. ಪ್ರತಿ ಬಾರಿ ಈ ರೀತಿ ಪೂರಕ ಅಂದಾಜು ಮಂಡಿಸುವಾಗಲೂ ತೆರಿಗೆ ವಸೂಲಿ ಹೆಚ್ಚಳ ಮಾಡುತ್ತೇವೆ ಎಂದು ಅಧಿಕಾರಿಗಳು ಬೋಗಸ್ ಲೆಕ್ಕ ನೀಡುತ್ತಾರೆ. ನೀವು, ನಾವು ಅದನ್ನು ಸದನದಲ್ಲಿ ಹೇಳುತ್ತೇವೆ. ತೆರಿಗೆ ಹೆಚ್ಚಳವಾಗಲ್ಲ ಬದಲಿಗೆ ವೆಚ್ಚಗಳನ್ನು ಕಡಿತಗೊಳಿಸಿ ಹೊಂದಾಣಿಕೆ ಮಾಡುತ್ತೇವೆ ಅಷ್ಟೇ ಎಂದರು.

ಚಾಲಕರಿಗೆ ಪರಿಹಾರ ಸಿಕ್ಕೇ ಇಲ್ಲ:

7.50 ಲಕ್ಷ ಆಟೋ, ಕಾರು ಚಾಲಕರಿಗೆ ಪರಿಹಾರ ನೀಡವುದಾಗಿ ಘೋಷಿಸಿದ್ದೀರಿ. ಅವರಿಗೆ ಯಾರಿಗೂ ಪರಿಹಾರ ಸಿಕ್ಕಿಲ್ಲ. ಸಾಕಷ್ಟು ಷರತ್ತುಗಳನ್ನು ಹಾಕಿದ್ದೀರಾ. ಈಗ ಕೇವಲ ಎರಡು ಲಕ್ಷ ಆಟೋ ಚಾಲಕರಿಗೆ ಪರಿಹಾರ ನೀಡಿದ್ದೀರ ಎಂದು ಕಿಡಿ ಕಾರಿದರು.

ಈ ಬಗ್ಗೆ ಸಚಿವ ಮಾಧುಸ್ವಾಮಿ ಮಾತನಾಡಿ ಪರಿಹಾರಕ್ಕಾಗಿ 1.45 ಲಕ್ಷ ಮಂದಿ ಚಾಲಕರು ಅರ್ಜಿ ಹಾಕಿದ್ದಾರೆ ಅಷ್ಟೇ. ಅದರಲ್ಲಿ 30,000 ಅರ್ಜಿ ಇನ್ನೂ ಬಾಕಿ ಉಳಿದಿದೆ ಎಂದು ಸ್ಪಷ್ಟನೆ ನೀಡಿದರು.

ಆಗ ಸಿದ್ದರಾಮಯ್ಯ ಎಲ್ಲಾ ಆಟೋ ಚಾಲಕರಿಗೆ ಪರಿಹಾರ ಹಣ ಕೈ ಸೇರಿಲ್ಲ. ಹಾಗಿದ್ದರೆ 7.50 ಲಕ್ಷ ಚಾಲಕರಿಗೆ ಪರಿಹಾರ ಕೊಡುವುದಾಗಿ ಏಕೆ ಘೋಷಣೆ ಏಕೆ ಮಾಡಿದಿರಿ?. ಅಷ್ಟು ಚಾಲಕರು ಇಲ್ಲ ಅಂದ್ರೆ ಏಕೆ ಘೋಷಣೆ ಮಾಡಿದಿರಿ. ಸರ್ಕಾರದಲ್ಲಿ ಅಂಕಿಅಂಶ ಇಲ್ವಾ?. ಇನ್ನೊಮ್ಮೆ ಆಟೋ ಚಾಲಕರು, ಟ್ಯಾಕ್ಸಿ ಚಾಲಕರ ಸಂಘದ ಜೊತೆ ಮಾತನಾಡಿ. ಅವರಿಗೆ ನೆರವು‌ ಮಾಡುವುದು ಮುಖ್ಯ ಎಂದು ತಿಳಿಸಿದರು.

ಬಳಿಕ ಸಚಿವ ಮಾಧುಸ್ವಾಮಿ, ಸಂಘಟನೆಗಳ ಜೊತೆ ಸಭೆ ನಡೆಸಿ ಆಗಿರುವ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಭರವಸೆ ನೀಡಿದರು.

ಇದೇ ವೇಳೆ 2020ನೇ ಸಾಲಿನ ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕಕ್ಕೂ ಅಂಗೀಕಾರ ಪಡೆಯಲಾಯಿತು.

ABOUT THE AUTHOR

...view details