ಕರ್ನಾಟಕ

karnataka

By

Published : Sep 20, 2022, 9:44 PM IST

Updated : Sep 20, 2022, 10:03 PM IST

ETV Bharat / state

ಹತ್ಯೆಯಾದ ಪ್ರವೀಣ್​ ನೆಟ್ಟಾರು ಮನೆ ಭೇಟಿಗೆ ಮುತಾಲಿಕ್​ಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್​

ಬೆಳ್ಳಾರೆಯಲ್ಲಿ ಹತ್ಯೆಗೊಳಗಾದ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್​ ನೆಟ್ಟಾರು ಮನೆಗೆ ಭೇಟಿ ನೀಡಲು ಮುಂದಾಗಿದ್ದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​ಗೆ ದಕ್ಷಿಣಕನ್ನಡ ಜಿಲ್ಲೆಗೆ ಪ್ರವೇಶಿಸದಂತೆ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧವನ್ನು ಹೈಕೋರ್ಟ್​ ರದ್ದುಪಡಿಸಿದೆ.

the-high-court-lifted-the-ban-imposed-on-pramod-muthalik
ಹತ್ಯೆಯಾದ ಪ್ರವೀಣ್​ ನೆಟ್ಟಾರು ಮನೆ ಭೇಟಿಗೆ ಮುತಾಲಿಕ್​ಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್​

ಬೆಂಗಳೂರು : ಮಂಗಳೂರಿನ ಬೆಳ್ಳಾರೆಯಲ್ಲಿ ಇತ್ತೀಚೆಗೆ ಹತ್ಯೆಗೊಳಗಾಗಿದ್ದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್​ ನೆಟ್ಟಾರು ಅವರ ಕುಟುಂಬಸ್ಥರ ಭೇಟಿಗೆ ಮುಂದಾಗಿದ್ದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​ಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿ ಹೊರಡಿಸಿದ್ದಆದೇಶವನ್ನು ಹೈಕೋರ್ಟ್​ ರದ್ದುಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದ ಕ್ರಮ ಪ್ರಶ್ನಿಸಿ ಮುತಾಲಿಕ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಪ್ರಕರಣವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್​ಗೆ ವರ್ಗಾವಣೆ ಮಾಡಿದ್ದು, ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.

ಜಿಲ್ಲಾಡಳಿತ ಹೊರಡಿಸಿರುವ ಕ್ರಿಮಿನಲ್​ ಪ್ರೊಸೀಡರ್​ ಕೋಡ್​ನ ಸೆಕ್ಷನ್​ 144 ಪ್ರಕಾರ ಎರಡು ತಿಂಗಳ ಅವಧಿಗೆ ಮಾತ್ರ ನಿರ್ಬಂಧ ವಿಧಿಸುವುದಕ್ಕೆ ಅವಕಾಶವಿದೆ. ಈ ಅವಧಿ ಈಗಾಗಲೇ ಅವಧಿ ಮುಗಿದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್​ಗೆ ವರ್ಗಾವಣೆ ಮಾಡಲಾಗುತ್ತಿದೆ. ಅಲ್ಲದೆ, ಅರ್ಜಿದಾರರ ವಾದ ಆಲಿಸಿ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಬಹುದು ಎಂದು ನ್ಯಾಯಪೀಠ ತಿಳಿಸಿದೆ.ಅಲ್ಲದೆ, ಪೊಲೀಸ್​ ಆಯುಕ್ತರ ಹೊರಡಿಸಿದ್ದ ಆದೇಶದ ಅವಧಿ ಈಗಾಗಲೇ ಮುಗಿದಿದ್ದು, ವಿಚಾರಣೆಗೆ ಮಾನ್ಯತೆ ಕಳೆದುಕೊಂಡಿರುವುದಾಗಿ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣ ಸಂಬಂಧ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸರು ಹೊರಡಿಸಿರುವ ಆದೇಶ ನಿಯಮ ಬಾಹಿರವಾಗಿದೆ. ಸುಪ್ರೀಂಕೋರ್ಟ್​ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದು ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

ಅಲ್ಲದೆ, ಅರ್ಜಿದಾರರಿಗೆ ಯಾವ ಕಾರಣಕ್ಕೆ ನಿರ್ಬಂಧ ವಿಧಿಸಿದ್ದಾರೆ ಎಂಬುದಕ್ಕೆ ವಿವರಣೆ ನೀಡಿಲ್ಲ. ಏಕಾಏಕಿ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಆದ್ದರಿಂದ ಜಿಲ್ಲಾಡಳಿತದ ಈ ಆದೇಶ ರದ್ದು ಮಾಡಬೇಕು ಎಂದು ಕೋರಿದರು. ಜತೆಗೆ, ಅರ್ಜಿದಾರ ಪ್ರಮೋದ್​ ಮುತಾಲಿಕ್​ ಪ್ರವೀಣ್​ ನೆಟ್ಟಾರು ಮನೆ ಭೇಟಿಗೆ ಅವಕಾಶ ನೀಡಿದಲ್ಲಿ ಶಾಂತಿ ಭಂಗಕ್ಕೆ ಕಾರಣವಾಗಲಿದೆ ಎಂಬುದು ಉದ್ದೇಶವಾಗಿದೆ. ಆದರೆ, ಈ ಅಂಶವನ್ನು ಅರ್ಜಿದಾರರ ಗಮನ ತಂದಿಲ್ಲ ಎಂದು ವಿವರಿಸಿದ್ದರು.

ಪ್ರಕರಣದ ಹಿನ್ನೆಲೆ: ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​ ಅವರನ್ನು ಜುಲೈ 28ರ ಸಂಜೆ 4 ಗಂಟೆಯಿಂದ ಮುಂದಿನ ಆದೇಶದವರೆಗೂ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿದಂತೆ ಜಿಲ್ಲಾಧಿಕಾರಿಗಳು ಜುಲೈ 28ರಂದು ಆದೇಶ ಹೊರಡಿಸಿದ್ದರು. ಇದರ ಮುಂದುವರಿದ ಭಾಗವಾಗಿ ಜುಲೈ 28ರಿಂದ ಆಗಸ್ಟ್​ 3 ರವರೆಗೂ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾ ಪೊಲೀಸ್​ ಆಯುಕ್ತರು ಆದೇಶಿಸಿದ್ದರು.

ಜುಲೈ 29 ರಂದು ಮಂಗಳೂರಿಗೆ ಆಗಮಿಸಿದ್ದು ಅವರನ್ನು ಪೊಲೀಸರು ತಡೆದು ಜಿಲ್ಲಾಡಳಿತ ಮತ್ತು ಪೊಲೀಸರು ಹೊರಡಿಸಿರುವ ಆದೇಶವನ್ನು ವಿವರಿಸಿದ್ದರು. ಇದಾದ ನಂತರ ಅರ್ಜಿದಾರರ ಮಂಗಳೂರು ಪೊಲೀಸ್​ ಆಯುಕ್ತರಿಗೆ ಮನವಿ ಸಲ್ಲಿಸಿ ಷರತ್ತುಗಳನ್ನು ವಿಧಿಸಿ ಮೃತಪಟ್ಟ ಪ್ರವೀಣ್​ ನೆಟ್ಟಾರು ಕುಟುಂಬಸ್ಥರ ಭೇಟಿಗೆ ಅವಕಾಶ ನೀಡುವುದಕ್ಕೆ ಮನವಿ ಮಾಡಿದ್ದರು. ಆದರೂ ಅವಕಾಶ ನೀಡದ ಹಿನ್ನೆಲೆಯಲ್ಲಿ ಈ ಬಗ್ಗೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ :ಪೀಣ್ಯ ಎಲಿವೇಟೆಡ್ ರಸ್ತೆ ಕಾಮಗಾರಿ ಡಿಸೆಂಬರ್ ವೇಳೆಗೆ ಪೂರ್ಣ: ಸಿಎಂ ಬಸವರಾಜ ಬೊಮ್ಮಾಯಿ

Last Updated : Sep 20, 2022, 10:03 PM IST

ABOUT THE AUTHOR

...view details