ಕರ್ನಾಟಕ

karnataka

By ETV Bharat Karnataka Team

Published : Dec 5, 2023, 1:02 PM IST

ETV Bharat / state

ಅರಣ್ಯಭೂಮಿಯಲ್ಲಿ ಸಾಗುವಳಿ ಸಕ್ರಮ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

HIGH COURT :ಒಮ್ಮೆ ಯಾವುದೇ ಜಾಗ ಅರಣ್ಯ ಇಲಾಖೆಗೆ ವರ್ಗಾವಣೆಯಾದ ನಂತರ, ಅದನ್ನು ಮತ್ತೆ ಖಾಸಗಿ ವ್ಯಕ್ತಿಗಳ ಹೆಸರಿಗೆ ವರ್ಗಾಯಿಸುವ ಅಥವಾ ಸಕ್ರಮಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ ತಿಳಿಸಿದೆ.

HIGH COURT
ಹೈಕೋರ್ಟ್

ಬೆಂಗಳೂರು:ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದ ಜಮೀನನ್ನು ಸಕ್ರಮಗೊಳಿಸಲು ಕೋರಿ ಚಿಕ್ಕಮಗಳೂರಿನ ಇಬ್ಬರು ಖಾಸಗಿ ವ್ಯಕ್ತಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿ ಆದೇಶಿಸಿದೆ.

ಅಜ್ಜಂಪುರ ತಾಲೂಕಿನ ಬುಕ್ಕಂಬುದಿ ಗ್ರಾಮದ ನಿವಾಸಿಗಳಾದ ಎಸ್‌. ಶಿವಕುಮಾರ್‌ ಮತ್ತು ಡಿ. ಮಂಜುನಾಥ್‌ ಎಂಬುವರು ಸಲ್ಲಿಸಿದ್ದ ತಕರಾರು ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಅಲ್ಲದೆ, ಪ್ರಕರಣದಲ್ಲಿ ವಿವಾದಿತ ಜಮೀನನ್ನು 1998-99ನೇ ಸಾಲಿನಲ್ಲೇ ಅರಣ್ಯ ಇಲಾಖೆಗೆ ನೀಡಲಾಗಿದೆ. ಈ ಜಾಗದಲ್ಲಿ ಅರಣ್ಯ ಇಲಾಖೆಯು ನಡು ತೋಪು ಬೆಳೆಸಿದೆ. ಹಾಗಾಗಿ, ಈ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಸಕ್ರಮಗೊಳಿಸುವ ಪ್ರಶ್ನೆಯೇ ಇಲ್ಲ. 200 ಎಕರೆಯನ್ನು ಅರಣ್ಯ ಇಲಾಖೆಗೆ ನೀಡಿರುವಾಗ, ತಮ್ಮ ಕಕ್ಷಿದಾರರು ಸಾಗುವಳಿ ಮಾಡುತ್ತಿರುವ 10 ಎಕರೆಯನ್ನಾದರೂ ಸಕ್ರಮಗೊಳಿಸಬೇಕು ಎಂದು ಮೇಲ್ಮನವಿದಾರರ ಪರ ವಕೀಲರು ಕೋರಿದರು.

ವಕೀಲರ ಈ ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠ, ಇಡೀ ಜಾಗವನ್ನೇ ಅರಣ್ಯ ಇಲಾಖೆಗೆ ನೀಡಲಾಗಿದೆ. ಆ ಕುರಿತು ದಾಖಲೆಗಳು ನೋಂದಣಿಯಾಗಿವೆ. ಇದು ಅರಣ್ಯ ಜಮೀನು ಎಂಬುದಾಗಿ ಸ್ಪಷ್ಟಪಿಸಿ 1998ರ ನ. 3ರಂದು ಜಿಲ್ಲಾಧಿಕಾರಿ ಆದೇಶ ಸಹ ಹೊರಡಿಸಿದ್ದಾರೆ. ಆ ಜಾಗದಲ್ಲಿ ನಡುತೋಪ ಎಂಬುದಾಗಿ ಘೋಷಿಸಿ, ಅರಣ್ಯ ಇಲಾಖೆಯು ಅಕೇಶಿಯಾ ಮತ್ತು ನೀಲಿಗಿರಿ ಮರಗಳನ್ನು ಬೆಳೆಸಿದೆ. ಒಮ್ಮೆ ಯಾವುದೇ ಜಾಗ ಅರಣ್ಯ ಇಲಾಖೆಗೆ ವರ್ಗಾವಣೆಯಾದ ನಂತರ, ಅದನ್ನು ಮತ್ತೆ ಖಾಸಗಿ ವ್ಯಕ್ತಿಗಳ ಹೆಸರಿಗೆ ವರ್ಗಾಯಿಸುವ ಅಥವಾ ಸಕ್ರಮಗೊಳಿಸಲು ಸಾಧ್ಯವಿಲ್ಲ.

ಹಾಗಾಗಿ, ಅರ್ಜಿದಾರರ ಮನವಿಯನ್ನು ಪರಿಗಣಿಸಲಾಗದು ಎಂದು ತಿಳಿಸಿದ ನ್ಯಾಯಪೀಠ ಮೇಲ್ಮನವಿ ವಜಾಗೊಳಿಸಿ ಆದೇಶಿಸಿದೆ. ಅರ್ಜಿದಾರರು ಸಾಗುವಳಿ ಮಾಡುತ್ತಿದ್ದ ಜಾಗವು ಸೇರಿದಂತೆ ಸುಮಾರು 200 ಎಕರೆಯನ್ನು 1998 ರಲ್ಲಿ ಅರಣ್ಯ ಪ್ರದೇಶ ಎಂದು ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ತಾವು ಕಳೆದ 30 ವರ್ಷಗಳಿಂದ ಜಾಗವನ್ನು ಸಾಗುವಳಿ ಮಾಡುತ್ತಿದ್ದು, ಅದನ್ನು ಸಕ್ರಮಗೊಳಿಸಲು ಸರ್ಕಾರಕ್ಕೆ ಆದೇಶಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸಿ ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠ 2023ರ ಆಗಸ್ಟ್‌ನಲ್ಲಿ ಆದೇಶಿಸಿತ್ತು. ಇದರಿಂದ ಅವರು ವಿಭಾಗೀಯ ಪೀಠಕ್ಕೆ ಎಸ್‌. ಶಿವಕುಮಾರ್‌ ಮತ್ತು ಡಿ. ಮಂಜುನಾಥ್‌ ಅವರು ಮೇಲ್ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ:ಚಿಕ್ಕಮಗಳೂರು ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ: ನಾಲ್ವರು ವಕೀಲರ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್​ ತಡೆ

ABOUT THE AUTHOR

...view details