ಕರ್ನಾಟಕ

karnataka

By

Published : Apr 17, 2022, 8:17 AM IST

ETV Bharat / state

ಮಾನವ ಕಳ್ಳಸಾಗಣೆ ಆರೋಪದಡಿ ಕೇಸ್​ ದಾಖಲಿಸುವಾಗ ಮೂಲ ಆಶಯ ಮರೆಯಬಾರದು: ಹೈಕೋರ್ಟ್

ಮಾನವ ಕಳ್ಳಸಾಗಣೆ ಆರೋಪದಡಿ ಪ್ರಕರಣ ದಾಖಲಿಸುವಾಗ ಮೂಲ ಆಶಯವನ್ನು ಮರೆಯಬಾರದು ಎಂದು ಹೈಕೋರ್ಟ್​ ಅಭಿಪ್ರಾಯ ವ್ಯಕ್ತಪಡಿಸಿದೆ. ಅಮೃತಸರದ ರಾಜ್‌ಕುಮಾರ್ ಎಂಬುವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

High Court
ಹೈಕೋರ್ಟ್

ಬೆಂಗಳೂರು: ಐಪಿಸಿ ಸೆಕ್ಷನ್ 370 ರ ಅಡಿ ಮಾನವ ಕಳ್ಳಸಾಗಣೆ ಆರೋಪ ಪ್ರಕರಣ ದಾಖಲಿಸುವಾಗ ಈ ಸೆಕ್ಷನ್​ನ ಮೂಲ ಆಶಯವನ್ನು ಮರೆಯಬಾರದು ಎಂದು ಹೈಕೋರ್ಟ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮಾನವ ಕಳ್ಳಸಾಗಣೆ ಆರೋಪದಡಿ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅಮೃತಸರದ ರಾಜ್‌ಕುಮಾರ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣದ ಹಿನ್ನೆಲೆ:2019ರ ಜುಲೈ 20ರಂದು ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ವಲಸೆ ಅಧಿಕಾರಿ (ಇಮ್ಮಿಗ್ರೇಷನ್ ಆಫೀಸರ್) ಮೂವರು ಭಾರತೀಯ ವ್ಯಕ್ತಿಗಳು ಇಂಡಿಗೋ ವಿಮಾನದ ಮೂಲಕ ಮಲೇಷಿಯಾದ ಕೌಲಾಲಂಪುರಕ್ಕೆ ಪ್ರಯಾಣಿಸಲು ಪ್ರಯತ್ನಿಸುತ್ತಿದ್ದುದನ್ನು ಗಮನಿಸಿದ್ದರು. ಈ ವೇಳೆ ಪ್ರಯಾಣಿಕರನ್ನು ಪ್ರಶ್ನಿಸಿದಾಗ ಅವರು ಒಟ್ಟಾಗಿ ರಾಜಕುಮಾರ್ ಎಂಬುವರ ಜತೆ ಪ್ರವಾಸಿ ವೀಸಾ ಮೂಲಕ ಕೆಲಸಕ್ಕಾಗಿ ಕೌಲಾಲಂಪುರಕ್ಕೆ ಹೊರಟಿರುವುದು ಬೆಳಕಿಗೆ ಬಂದಿತ್ತು. ಮತ್ತಷ್ಟು ವಿಚಾರಿಸಿದಾಗ ಅಮೃತಸರದ ಮಧ್ಯವರ್ತಿ ಕಿರಣ್ ಎಂಬಾತನ ಮೂಲಕ ಪರಿಚಯವಾದ ರಾಜ್ ಕುಮಾರ್​​ಗೆ ಕೆಲಸಕ್ಕಾಗಿ ಮೂವರೂ ಹಣ ನೀಡಿದ್ದು ಕೂಡ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಲಸೆ ಅಧಿಕಾರಿಗಳು ಐಪಿಸಿ ಸೆಕ್ಷನ್ 370 ರಡಿ ರಾಜ್ ಕುಮಾರ್ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವನಹಳ್ಳಿ ಜೆಎಂಎಫ್ಸಿ ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದು, ಪ್ರಕರಣ ರದ್ದು ಕೋರಿ ರಾಜಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಆಕ್ಷೇಪಾರ್ಹ ಪೋಸ್ಟ್​ನಿಂದ ಹುಬ್ಬಳ್ಳಿ ಪ್ರಕ್ಷುಬ್ಧ.. ಪೊಲೀಸ್ ಠಾಣೆ ಮುಂದೆ ಕಲ್ಲು ತೂರಾಟ, ವಾಹನಗಳು ಜಖಂ

ಹೈಕೋರ್ಟ್ ತೀರ್ಪು:ಭಾರತೀಯ ದಂಡ ಸಂಹಿತೆಯ ಸೆಕ್ಷನ್ 370 ಮಾನವ ಕಳ್ಳಸಾಗಣೆ ಅಪರಾಧವನ್ನು ವಿವರಿಸುತ್ತದೆ. ಈ ಅಪರಾಧಕ್ಕಾಗಿ 7ರಿಂದ 10 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ. ಹಾಗೆಯೇ, ಸೆಕ್ಷನ್ 370 ಮಾನವ ಕಳ್ಳಸಾಗಣೆಯು ಪ್ರಮುಖವಾಗಿ ಶೋಷಣೆಯ ಉದ್ದೇಶ ಒಳಗೊಂಡಿರುವುದನ್ನು ಹೇಳುತ್ತದೆ. ಯಾವುದೇ ವ್ಯಕ್ತಿಯನ್ನು ಭಯ ಹುಟ್ಟಿಸಿ, ಬಲವಂತವಾಗಿ, ಅಪಹರಿಸಿ, ವಂಚನೆಯಿಂದ, ಅಧಿಕಾರ ಬಳಸಿ ಗುಲಾಮಗಿರಿಗೆ, ಲೈಂಗಿಕ ಕ್ರಿಯೆ ಮತ್ತಿತರೆ ಶೋಷಣೆಗಳಿಗೆ ಒಳಪಡಿಸುವುದನ್ನು ವಿವರಿಸುತ್ತದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರ ರಾಜ್ ಕುಮಾರ್ ಜತೆಗೆ ವಿದೇಶ ಪ್ರಯಾಣಕ್ಕೆ ಮುಂದಾಗಿದ್ದ ವ್ಯಕ್ತಿಗಳು ಅವರ ವಿರುದ್ಧ ಯಾವುದೇ ಶೋಷಣೆಯ ಆರೋಪಗಳನ್ನು ಮಾಡಿಲ್ಲ. ವಲಸೆ ಅಧಿಕಾರಿಗಳು ಅನುಮಾನ ಮತ್ತು ಹಣಕಾಸಿನ ವಹಿವಾಟು ನಡೆದಿದೆ ಎಂಬ ಅಂಶಗಳ ಆಧಾರದಲ್ಲಿ ಮಾನವಕಳ್ಳಸಾಗಣೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಈ ಅಂಶಗಳ ಆಧಾರದಲ್ಲಿ ಅರ್ಜಿದಾರರ ವಿರುದ್ಧ ಮಾನವ ಕಳ್ಳಸಾಗಣೆ ಆರೋಪದಡಿ ವಿಚಾರಣೆ ನಡೆಸುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ ಎಂದು ಅಭಿಪ್ರಾಯಪಟ್ಟು, ಪ್ರಕರಣವನ್ನು ರದ್ದುಪಡಿಸಿದೆ.

ABOUT THE AUTHOR

...view details