ಕರ್ನಾಟಕ

karnataka

By ETV Bharat Karnataka Team

Published : Dec 13, 2023, 1:26 PM IST

Updated : Dec 13, 2023, 2:27 PM IST

ETV Bharat / state

'ಬಾಂಬ್​ ಕರೆ ಬಂದಾಗ ಪೊಲೀಸರು ಎಷ್ಟು ಅಲರ್ಟ್ ಆಗಿರುತ್ತಾರೆ ಎಂಬುದನ್ನು ತಿಳಿಯಲು ಹುಸಿ ಕರೆ'

ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಸಹಾಯವಾಣಿಗೆ ಕರೆ ಮಾಡಿ ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿಯು ಪೊಲೀಸರು ಬಾಂಬ್​ ಬೆದರಿಕೆ ಬಂದಾಗ ಎಷ್ಟರ ಮಟ್ಟಿಗೆ ಅಲರ್ಟ್ ಆಗಿರುತ್ತಾರೆ ಎನ್ನುವುದನ್ನು ಚೆಕ್​ ಮಾಡಲು ಬೆದರಿಕೆಯ ಕರೆ ಮಾಡಿದ್ದೆ ಅಂತಾ ಆರೋಪಿ ಹೇಳಿದ್ದಾನೆ.

fake-call
ಕೇಂದ್ರ ವಿಭಾಗ ಡಿಸಿಪಿ ಶೇಖರ್​ ಟೆಕ್ಕಣ್ಣನವರ್

ಡಿಸಿಪಿ ಶೇಖರ್​ ಟೆಕ್ಕಣ್ಣನವರ್ ಹೇಳಿಕೆ

ಬೆಂಗಳೂರು :ಬಾಂಬ್ ಇಟ್ಟಿರುವ ಸಂದೇಶ ಬಂದಾಗ ಪೊಲೀಸರು ಎಷ್ಟರ ಮಟ್ಟಿಗೆ ಅಲರ್ಟ್ ಆಗಿರುತ್ತಾರೆ ಎನ್ನುವುದನ್ನು ಚೆಕ್​ ಮಾಡಲು ಹುಸಿ ಬಾಂಬ್ ಕರೆ ಮಾಡಿರುವುದಾಗಿ ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿದ್ದ ಆರೋಪಿ ಹೇಳಿದ್ದಾನೆ.

ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಸಹಾಯವಾಣಿಗೆ ಕರೆ ಮಾಡಿ ಹುಸಿ ಬಾಂಬ್ ಬೆದರಿಕೆ ಹಾಕಿರುವ ಪ್ರಕರಣ ಸಂಬಂಧ ಕೇಂದ್ರ ವಿಭಾಗದ ಪೊಲೀಸರು ಕೋಲಾರ ಮೂಲದ ಭಾಸ್ಕರ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಬಾಂಬ್ ಇಟ್ಟಿರುವ ಸಂದೇಶ ಬಂದಾಗ ಎಷ್ಟರ ಮಟ್ಟಿಗೆ ಆಲರ್ಟ್ ಆಗಿರುತ್ತಾರೆ ಅನ್ನೋದನ್ನು ಚೆಕ್ ಮಾಡುವುದಕ್ಕೆ ಹುಸಿ ಬಾಂಬ್ ಕರೆ ಮಾಡಿರುವುದಾಗಿ ಹೇಳಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಬಾಂಬ್​ ಬೆದರಿಕೆ ಸಂಬಂಧ ಕೇಂದ್ರ ವಿಭಾಗ ಡಿಸಿಪಿ ಶೇಖರ್​ ಟೆಕ್ಕಣ್ಣನವರ್​ ಮಾತನಾಡಿ ಡಿ.11 ರಂದು ರಾತ್ರಿ 11.35ಕ್ಕೆ ಎನ್ಐಎಗೆ ಅನಾಮಿಕ ಕರೆ ಮಾಡಿ ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ವ್ಯಕ್ತಿ ಹೇಳಿದ್ದ. ಎನ್ಐಎ ಅಧಿಕಾರಿಗಳು ಬೆಂಗಳೂರು ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು. ಈ ಸಂಬಂಧ ವಿಧಾನಸೌಧ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಈ ಹಿಂದೆ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ವಡ್ಡಹಳ್ಳಿಯವನಾದ ಭಾಸ್ಕರ್ ಬಿಕಾಂ ಪದವೀಧರನಾಗಿದ್ದು ವ್ಯವಸಾಯ ಮಾಡುತ್ತಿದ್ದ. ಇತ್ತೀಚೆಗೆ ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದ ಸುದ್ದಿಯನ್ನು ತಿಳಿದುಕೊಂಡಿದ್ದ. ಈ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದ ಬಗ್ಗೆಯೂ ತಿಳಿದುಕೊಂಡಿದ್ದ. ಮೊನ್ನೆ ಈತ ಊರಿನಿಂದ ಬೆಂಗಳೂರಿಗೆ ಬಂದಿದ್ದ.

ನಗರ ಪೊಲೀಸರು ಬಾಂಬ್ ಕರೆ ಬಂದಾಗ ಎಷ್ಟರ ಮಟ್ಟಿಗೆ ಕ್ರಿಯಾಶೀಲರಾಗುತ್ತಾರೆ ಎಂಬುದನ್ನು ತಿಳಿಯಲು ನಿರ್ಧರಿಸಿದ್ದ. ಇದೇ ವೇಳೆ ನಗರದದಿಂದ ಊರಿಗೆ ತೆರಳಲು ಬಸ್ ಹೋಗುವಾಗ ರಾಜಭವನ ಕಂಡಿದ್ದಾನೆ. ಮೊಬೈಲ್​ನಲ್ಲಿ ಎಎನ್ಐ ಸಹಾಯವಾಣಿಗೆ ಕರೆ ಮಾಡಿ ರಾಜಭವನದಲ್ಲಿ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದ. ಬೆದರಿಕೆ ಕರೆಯಿಂದ ಗಾಬರಿಯಾದ ಎನ್ಐಎ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇನ್ನೊಂದೆಡೆ ಬೆಂಗಳೂರಿನಿಂದ ನೇರವಾಗಿ ಆಂಧ್ರದ ಚಿತ್ತೂರಿನ ದೇವಸ್ಥಾನವೊಂದಕ್ಕೆ ಆರೋಪಿ ತೆರಳಿದ್ದ. ಬಾಂಬ್ ಬೆದರಿಕೆ ಕರೆ ನಂತರ ಕರೆ ಬಂದ ನೆಟ್ವರ್ಕ್ ಟ್ರ್ಯಾಕ್​ ಮಾಡುತ್ತಿದ್ದ ಪೊಲೀಸರಿಗೆ ಆರೋಪಿ ಚಿತ್ತೂರಿನಿಂದ ತನ್ನೂರಿಗೆ ವಾಪಸ್ ಬರುತ್ತಿರುವುದನ್ನು ಅರಿತು ಭಾಸ್ಕರ್​ನನ್ನು ಬಂಧಿಸಿದ್ದಾರೆ. ಸದ್ಯ ಭಾಸ್ಕರ್​ನನ್ನು ವಿಧಾನಸೌಧ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಇದನ್ನೂ ಓದಿ:ರಾಜಭವನದಲ್ಲಿ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಕರೆ; ಅಲರ್ಟ್​ ಆದ ಪೊಲೀಸರಿಂದ ತೀವ್ರಗೊಂಡ ತಪಾಸಣೆ

Last Updated : Dec 13, 2023, 2:27 PM IST

ABOUT THE AUTHOR

...view details