ದೊಡ್ಡಬಳ್ಳಾಪುರ: ಆಂಧ್ರ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಕರ್ನಾಟಕದಲ್ಲಿ ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸುವ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಆಂಧ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಷಾ ಶ್ರೀಚರಣ್ ಹೇಳಿದರು.
ಆಂಧ್ರ ಸರ್ಕಾರದಲ್ಲಿ ಸಚಿವೆಯಾದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಉಷಾ ಶ್ರೀಚರಣ್ ಆಗಮಿಸಿದರು. ದೊಡ್ಡಬಳ್ಳಾಪುರ ತಾಲೂಕು ಕುರುಬರ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ಕಾರ್ಯವೈಖರಿ, ಸಾಧನೆ, ಜಾರಿ ಮಾಡಿರುವ ಯೋಜನೆಗಳು ಹಾಗೂ ಜನರ ಸಮಸ್ಯೆಗೆ ಸ್ಪಂದಿಸುವ ಶೈಲಿ ಶ್ಲಾಘಿಸಿದರು.
ಕರ್ನಾಟಕದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸ್ಪರ್ಧೆ ಬಗ್ಗೆ ಸಿಎಂ ಜಗನ್ ಜೊತೆ ಚರ್ಚೆ.. ಕರ್ನಾಟಕ ರಾಜ್ಯದಲ್ಲೂ ವೈಎಸ್ಆರ್ ಕಾಂಗ್ರೆಸ್ ಪಕ್ಷ ಕಟ್ಟುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈವರೆಗೆ ಪಕ್ಷ ಕಟ್ಟುವ ಬಗ್ಗೆ ಯೋಚಿಸಿರಲಿಲ್ಲ. ಗಡಿ ಭಾಗದಲ್ಲಿ ಸ್ಪರ್ಧಿಸುವ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು. ಇದಲ್ಲದೆ ಇಲ್ಲಿನ ಜನರ ಅಭಿಪ್ರಾಯ ಖುದ್ದು ಪಡೆದು ತಿಳಿಸಲಾಗುವುದು ಎಂದರು.
ಕರ್ನಾಟಕದ ಮಗಳು, ಆಂಧ್ರದ ಸೊಸೆ :ಉಷಾ ಮೂಲತಃ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದವರು. ಬೆಂಗಳೂರು ಉತ್ತರ ತಾಲೂಕಿನ ಸಿಂಗನಾಯಕನಹಳ್ಳಿಯ ಶ್ರೀಚರಣ್ ಅವರನ್ನು ವಿವಾಹವಾಗಿದ್ದರು. ಆ ಬಳಿಕ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗವನ್ನು ತಮ್ಮ ರಾಜಕೀಯ ಕಾರ್ಯ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡರು. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಮೊದಲ ಯತ್ನದಲ್ಲೇ ಶಾಸಕಿಯಾಗಿ, ಈಗ ಸಚಿವೆಯಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್-ಬಿಜೆಪಿಗೆ ಮತ ನೀಡಿದ್ರೆ ಇನ್ನೂ 70 ವರ್ಷವಾದ್ರೂ ನೀರು ಬರೋಲ್ಲ: ಹೆಚ್ಡಿಕೆ