ಕರ್ನಾಟಕ

karnataka

ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್‌ ಕಂಪನಿಗಳಿಗೆ ಆಹ್ವಾನ: ಬೆಂಗಳೂರಿನಲ್ಲಿ ಇಂಡಸ್ಟ್ರಿಯಲ್‌ ಪಾರ್ಕ್‌ ಅಭಿವೃದ್ಧಿ

By

Published : Feb 17, 2022, 6:10 PM IST

ತೈವಾನ್​ ಕಂಪನಿಯೊಂದು ಕೈಗಾರಿಕಾ ಪಾರ್ಕ್‌ ಅಭಿವೃದ್ಧಿಪಡಿಸಲು ಮುಂದಾಗಿದೆ. ಈ ಸಂಬಂಧ ತೈವಾನ್ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ರಾಯಭಾರಿ ಬಾಶುವಾನ್ ನೇತೃತ್ವದ ನಿಯೋಗವು ಇಂದು ಸಿಎಂ ಭೇಟಿ ಮಾಡಿತು. ಅಲ್ಲದೇ ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್‌ ಕಂಪನಿಗಳಿಗೆ ಆಹ್ವಾನ ಸಹ ನೀಡಲಾಗಿದೆ.

ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್‌ ಕಂಪನಿಗಳಿಗೆ ಆಹ್ವಾನ
ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್‌ ಕಂಪನಿಗಳಿಗೆ ಆಹ್ವಾನ

ಬೆಂಗಳೂರು:ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್ ಬಳಿ ಕೈಗಾರಿಕಾ ಪಾರ್ಕ್‌ ಅಭಿವೃದ್ಧಿಪಡಿಸಲು ಮುಂದಾಗಿರುವ ತೈವಾನ್ ಮೂಲದ ಸೆಂಚುರಿ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಸಿಡಿಸಿ) ಇದರ ಪ್ಲ್ಯಾನ್​​ ಅಂತಿಮಗೊಳಿಸಿದೆ. ಜೊತೆಗೆ ಅಗತ್ಯ ಸಹಕಾರದ ಅಭಯದೊಂದಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ತೈವಾನ್ ಕಂಪನಿಗಳನ್ನು ಆಹ್ವಾನಿಸಲಾಗಿದೆ.

ತೈವಾನ್ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ರಾಯಭಾರಿ ಬಾಶುವಾನ್ ನೇತೃತ್ವದ ನಿಯೋಗವು ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಿತು. ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಹಾಗೂ ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ ಉಪಸ್ಥಿತಿಯಲ್ಲಿ ಹೂಡಿಕೆ ಕುರಿತು ಮಹತ್ವದ ಮಾತುಕತೆ ನಡೆಸಲಾಯಿತು.

ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ತೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ಉನ್ನತ ಮಟ್ಟದ ನಿಯೋಗವು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿ ಹೂಡಿಕೆ ಅವಕಾಶಗಳ ಕುರಿತು ಮಾತುಕತೆ ನಡೆಸಿತು.

ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್‌ ಕಂಪನಿಗಳಿಗೆ ಆಹ್ವಾನ

ತೈವಾನ್ ಕಂಪನಿಗಳಿಗೆ ಆಹ್ವಾನ:ನಂತರ ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆ ಮಾಡುವಂತೆ ತೈವಾನ್ ಕಂಪನಿಗಳನ್ನು ಆಹ್ವಾನಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಸರ್ಕಾರದಿಂದ ಎಲ್ಲ ಬೆಂಬಲ ಮತ್ತು ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಹೂಡಿಕೆಗೆ ಕರ್ನಾಟಕ ಸೂಕ್ತ ಸ್ಥಳ ಹೇಗೆ ಮತ್ತು ಅದಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

ಕರ್ನಾಟಕ ಮತ್ತು ತೈವಾನ್‌ ನಡುವೆ ಹಲವು ಸಾಮ್ಯತೆಗಳಿದ್ದು, ಇಎಸ್‌ಡಿಎಂ, ಎಲೆಕ್ಟ್ರಿಕ್ ವೆಹಿಕಲ್ಸ್, ಆಟೋ ಮತ್ತು ಆಟೋ ಕಾಂಪೊನೆಂಟ್ಸ್, ಹೆಲ್ತ್‌ಕೇರ್, ಇಂಜಿನಿಯರಿಂಗ್ ಮತ್ತು ಮೆಷಿನ್ ಟೂಲ್‌ ಮುಂತಾದ ಪ್ರಮುಖ ಉದ್ಯಮಗಳಲ್ಲಿ ಮುಂಚೂಣಿ ಸಾಧಿಸಿವೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ವಿಸ್ಟ್ರಾನ್ ಕಾರ್ಪೊರೇಶನ್, ಮೀಡಿಯಾಟೆಕ್, ಡೆಲ್ಟಾ ಎಲೆಕ್ಟ್ರಾನಿಕ್ಸ್ ಮತ್ತು ಡಿ-ಲಿಂಕ್ ಸೇರಿದಂತೆ ಪ್ರಮುಖ ತೈವಾನಿ ಕಂಪನಿಗಳಿಗೆ ಕರ್ನಾಟಕ ನೆಲೆಯಾಗಿದೆ. ಇತರ ತೈವಾನ್‌ ಕಂಪನಿಗಳೂ ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಬಹುದು, ಅದಕ್ಕೆ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ವಿವರಿಸಿದರು.

ಇದನ್ನೂ ಓದಿ:ಈಶ್ವರಪ್ಪ ನಾಲಿಗೆ ಹರಿತಕ್ಕೆ ಬಿಜೆಪಿ ನಾಯಕರೇ ವಿಲ ವಿಲ: ಪದೇ ಪದೆ ಮುಜುಗರಕ್ಕೊಳಗಾಗುತ್ತಿರುವ ಕೇಸರಿ ನಾಯಕರು

ಕೈಗಾರಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ ನೀತಿಗಳು ಹಾಗೂ ಕೈಗೊಂಡಿರುವ ವಿವಿಧ ಉಪಕ್ರಮಗಳ ಬಗ್ಗೆ ಸಚಿವರು ಮಾಹಿತಿ ನೀಡಿದರು. ನೂತನ ಕೈಗಾರಿಕಾ ನೀತಿ ಹಾಗೂ ಕೈಗಾರಿಕಾ ಸೌಲಭ್ಯ ತಿದ್ದುಪಡಿ ಅಧಿನಿಯಮದಲ್ಲಿನ ತಿದ್ದುಪಡಿಗಳಿಂದ ನಮ್ಮ ರಾಜ್ಯ ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಭೂ ಸುಧಾರಣೆ ಕಾಯಿದೆ ತಿದ್ದುಪಡಿ, ಅಫಿಡವಿಟ್‌ ಬೇಸ್ಡ್‌ ಕ್ಲಿಯರೆನ್ಸ್‌ (ಎಬಿಸಿ) ಯೋಜನೆ ಇತ್ಯಾದಿ ಕ್ರಮಗಳಿಂದ ರಾಜ್ಯದಲ್ಲಿ ಉದ್ಯಮಸ್ನೇಹಿ ವಾತಾವರಣ ಸೃಷ್ಟಿಯಾಗಿದ್ದು, ಹೂಡಿಕೆಯ ಪ್ರಸ್ತಾಪಗಳು ವೃದ್ಧಿಸಿವೆ ಎಂದು ಹೇಳಿದರು.

ಕರ್ನಾಟಕವು ದೇಶದ ಆಕರ್ಷಕ ಹೂಡಿಕೆ ತಾಣ:ತೈವಾನ್ ಹೂಡಿಕೆದಾರರಿಗೆ ಕೈಗಾರಿಕೆ ಇಲಾಖೆಯಿಂದ ಎಲ್ಲ ಸಹಕಾರ ನೀಡಲಾಗುವುದು. ಸರ್ಕಾರದ ಹಲವು ಸುಧಾರಣಾ ಕ್ರಮಗಳಿಂದಾಗಿ ಕರ್ನಾಟಕವು ದೇಶದ ಆಕರ್ಷಕ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ. ಹಣಕಾಸು ವರ್ಷದ ಏಪ್ರಿಲ್ - ಸೆಪ್ಟೆಂಬರ್ ಅವಧಿಯಲ್ಲಿ ಶೇ. 45ರಷ್ಟು ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿ ಇಡೀ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಕೈಗಾರಿಕಾಭಿವೃದ್ದಿ ಆಯುಕ್ತರಾದ ಗುಂಜನ್ ಕೃಷ್ಣ ತಿಳಿಸಿದರು.

ತೈವಾನ್ ಮೂಲದ ಉದ್ಯಮಗಳಿಗೆ ಅನುಕೂಲ ಕಲ್ಪಿಸಿರುವ ಕರ್ನಾಟಕ ಸರ್ಕಾರಕ್ಕೆ ಬಾಶುವಾನ್ ಕೃತಜ್ಞತೆ ವ್ಯಕ್ತಪಡಿಸಿದರು. ತೈವಾನ್ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ದಕ್ಷಿಣ - ಚೆನ್ನೈನ ಮಹಾನಿರ್ದೇಶಕ ಬೆನ್ ವಾಂಗ್ ಹಾಗೂ ಕೇಂದ್ರದ ಸಿಬ್ಬಂದಿ, ಇನ್ವೆಸ್ಟ್ ಇಂಡಿಯಾ ಫೋರಂನ ಪ್ರಾದೇಶಿಕ ಮುಖ್ಯಸ್ಥೆ ಸಾಯಿ ಸುಧಾ, ತೈವಾನ್ ಡೆಸ್ಕ್ ಲೀಡ್ ಅಜು ಆಂಟೋನಿ, ಕೈಗಾರಿಕಾಭಿವೃದ್ದಿ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಎನ್‌ ಶಿವಶಂಕರ್‌, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಉಪಸ್ಥಿತರಿದ್ದರು.

ಸಿಡಿಸಿ ಮಾಸ್ಟರ್‌ ಪ್ಲಾನ್​:ಬೆಂಗಳೂರಿನಲ್ಲಿ ಕೈಗಾರಿಕಾ ಪಾರ್ಕ್‌ ಅಭಿವೃದ್ಧಿಪಡಿಸಲು ಮುಂದಾಗಿರುವ ತೈವಾನ್ ಮೂಲದ ಸೆಂಚುರಿ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಸಿಡಿಸಿ), ಈ ಸಂಬಂಧ ಮಾಸ್ಟರ್ಪ್ಲಾನ್‌ ಅಂತಿಮಗೊಳಿಸಿದೆ. ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್ ಬಳಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ 70 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು, ಅಲ್ಲಿ ತೈವಾನ್‌ನ 100 ಕಂಪನಿಗಳಿಗೆ ಸ್ಥಳಾವಕಾಶ ಕಲ್ಪಿಸಲಿದೆ. ಟಿಇಎಂಐಸಿಓ ಮೋಟಾರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈಗಾಗಲೇ ಪಾರ್ಕ್‌ನಲ್ಲಿ ಕಾರ್ಖಾನೆ ನಿರ್ಮಾಣ ಕಾರ್ಯ ಪ್ರಾರಂಭಿಸಿದೆ.

ABOUT THE AUTHOR

...view details