ಬೆಂಗಳೂರು:ಸರ್ವೆ ಮಾಡೋದೆ ದೊಡ್ಡ ಸವಾಲಾಗಿದ್ದು, ಈ ಸಂಬಂಧ ದಾಖಲೆಗಳೇ ಸಿಗುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಮ್ಮ ಅಸಹಾಕಾರ ವ್ಯಕ್ತಡಿಸಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಎಷ್ಟೋ ತಹಶೀಲ್ದಾರರು ನಿವೃತ್ತಿ ಹೊಂಡಿದ ಮೇಲೂ ಸಹಿ ಹಾಕಿ ಕೊಟ್ಟಿರುವ ಉದಾಹರಣೆಗಳಿವೆ. ಅಂತಹ ಪ್ರಕರಣಗಳ ತನಿಖೆಗೆ ಆದೇಶ ಮಾಡಿದ್ದೇನೆ. ಪೋಡಿ ಪ್ರಕರಣಗಳ ಇತ್ಯರ್ಥಕ್ಕಾಗಿಯೇ ಅಧಿಕಾರಿಗಳೇ ಹಳ್ಳಿಗೆ ನಡೆಯಿರಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಎಸಿ, ತಹಶೀಲ್ದಾರ್ ಸೇರಿದಂತೆ ಎಲ್ಲಾ ಹಂತದ ಅಧಿಕಾರಿಗಳು ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಗ್ರಾಮಕ್ಕೆ ಕಡ್ಡಾಯವಾಗಿ ಹೋಗಲೇಬೇಕು. ಅಲ್ಲೇ ವಾಸ್ತವ್ಯ ಹೂಡಿ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿ ಇತ್ಯರ್ಥಪಡಿಸಬೇಕು ಎಂದು ವಿವರಿಸಿದರು.
ಇದಕ್ಕೂ ಮುನ್ನ ಬಿಜೆಪಿ ಸದಸ್ಯ ಬೆಳ್ಳಿ ಪ್ರಕಾಶ್ ಮಾತನಾಡಿ, ಪೋಡಿ ಮುಕ್ತ ಗ್ರಾಮಗಳ ಭರವಸೆ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆ ನಡುವಿನ ಸಾಮರಸ್ಯದ ಕೊರತೆಯೆ ಈ ಸಮಸ್ಯೆಗೆ ಕಾರಣವಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಇದಕ್ಕೆ ಕೈ ಜೋಡಿಸಿದ ನಾರಾಯಣಸ್ವಾಮಿ, ಕಂದಾಯ ಇಲಾಖೆಯಲ್ಲಿ ಐವತ್ತು, ಅರವತ್ತು ವರ್ಷಗಳ ಕಡತಗಳೇ ಸಿಗುತ್ತಿಲ್ಲ. ಹಾಗಾಗಿ ಪೋಡಿ ಮಾಡಲು ಸಾಧ್ಯವಾಗುತ್ತಿಲ್ಲ. ಇಡೀ ರಾಜ್ಯದಲ್ಲಿ ಈ ಸಮಸ್ಯೆ ಕಾಡುತ್ತಿದೆ ಎಂದರು.
ಎ.ಟಿ.ರಾಮಸ್ವಾಮಿ ಮಧ್ಯಪ್ರವೇಶಿಸಿ, ಕೇವಲ ಪೋಡಿಮುಕ್ತ ಗ್ರಾಮ ಎಂದು ಘೋಷಣೆ ಮಾಡಿದ್ರೆ ಸಾಲದು. ಅದು ವಾಸ್ತವವಾಗಿ ಜಾರಿಗೆ ಬರುತ್ತಿಲ್ಲ. ಭ್ರಷ್ಟಾಚಾರಕ್ಕೂ ಕಾರಣವಾಗಿದೆ ಎಂದು ಆರೋಪಿಸಿದರು.ಇದೇ ವೇಳೆ ಮಾತನಾಡಿದ ಶಿವಲಿಂಗೇಗೌಡ ಅಧಿಕಾರಿಗಳು ರೈತರ ಜೊತೆ ಸ್ಪಾಟ್ ವಿಸಿಟ್ ಮಾಡಬೇಕು. ಸ್ಥಳದಲ್ಲೇ ಸಮಾಲೋಚನೆ ಮಾಡಿ ರಾಜಿ ಪಂಚಾಯಿತಿ ಮೂಲಕ ಪೋಡಿ ಮಾಡಬೇಕು. ಇಲ್ಲವಾದರೆ ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.