ಕರ್ನಾಟಕ

karnataka

ದೆಹಲಿ‌ ರೈತರ ಪ್ರತಿಭಟನೆ ಬೆಂಬಲಿಸಿ ರಾಜ್ಯದ ರೈತರಿಂದ ಧರಣಿ ಆರಂಭ: ದೆಹಲಿಗೆ ತೆರಳಲಿದೆ ತಂಡ

By

Published : Dec 16, 2020, 9:38 PM IST

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಗೋ ಹತ್ಯೆ ನಿಷೇಧ ಮಸೂದೆಗಳನ್ನು ರಾಜ್ಯ ಸರ್ಕಾರ ರದ್ದು ಮಾಡಬೇಕು.‌ ಕೇಂದ್ರ ಸರ್ಕಾರದ ಕೃಷಿ ಸಂಬಂಧಿತ 4 ಕಾಯ್ದೆಗಳನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿ ಮಾಡುವ ಕಾಯ್ದೆಗಳನ್ನು ಕೂಡಲೇ ಜಾರಿಗೆ ತರಬೇಕೆಂದು ಪ್ರತಿಭಟನೆ ವೇಳೆ ಆಗ್ರಹಿಸಲಾಯಿತು.‌

Support from state farmers to Delhi farmers' protest
ರಾಜ್ಯ ರೈತರಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭ

ಬೆಂಗಳೂರು:ದೆಹಲಿ ರೈತರಿಗೆ ಬೆಂಬಲವಾಗಿ, ಉಪವಾಸ ಕುಳಿತು ಪ್ರತಿಭಟಿಸುತ್ತಿರುವ ಅನ್ನದಾತರಿಗೆ ಶಕ್ತಿ ತುಂಬುವ ಸಲುವಾಗಿ ರಾಜ್ಯದಲ್ಲಿ ಮತ್ತೆ ರೈತ ಹೋರಾಟ ಆರಂಭವಾಗಿದೆ.

ರೈತ ಸಂಘಟನೆಗಳು ಒಟ್ಟಾಗಿ ನಗರದ ಮೌರ್ಯ ಸರ್ಕಲ್​ನಲ್ಲಿ ರೈತರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಕುರುಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ರೈತ-ದಲಿತ-ಕಾರ್ಮಿಕರ ಐಕ್ಯ ಹೋರಾಟ ಸಮಿತಿಯಿಂದ ಧರಣಿ ಆರಂಭವಾಗಿದೆ. ಕನ್ನಡಪರ ಸಂಘಟನೆಗಳಿಂದಲೂ ಬೆಂಬಲ ವ್ಯಕ್ತವಾಗಿದೆ.

ಪ್ರತಿ ದಿನ ಬೆಳಗ್ಗೆಯಿಂದ ಸಂಜೆಯವರೆಗೆ ಮೌರ್ಯ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಮುಂದಿನ ಹತ್ತು ದಿನಗಳ ಪ್ರತಿಭಟನೆಯ ರೂಪುರೇಷೆ ಈಗಾಗಲೇ ತಯಾರಾಗಿದ್ದು, ಪ್ರತಿ ದಿನ ಒಂದೊಂದು ಸಂಘಟನೆಗಳ ನೇತೃತ್ವದಲ್ಲಿ ಧರಣಿಗೆ ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ : ದೆಹಲಿಯಲ್ಲಿ ರೈತರ ದಂಗಲ್.. ಸಮಿತಿ ರಚನೆ ಮಾಡಿ ಸಮಸ್ಯೆ ಇತ್ಯರ್ಥಪಡಿಸಲು ಸುಪ್ರೀಂಕೋರ್ಟ್‌ ಸೂಚನೆ

ಕೃಷಿ ಸಂಬಂಧಿತ 3 ಕಾನೂನುಗಳು ಹಾಗೂ ವಿದ್ಯುತ್ ಮಸೂದೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಬೇಕು ಎಂದು ಪಟ್ಟು ಹಿಡಿದ್ದಾರೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಗೋ ಹತ್ಯೆ ನಿಷೇಧ ಮಸೂದೆಗಳನ್ನು ರಾಜ್ಯ ಸರ್ಕಾರ ರದ್ದು ಮಾಡಬೇಕು.‌ ಕೇಂದ್ರ ಸರ್ಕಾರದ ಕೃಷಿ ಸಂಬಂಧಿತ 4 ಕಾಯ್ದೆಗಳನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿ ಮಾಡುವ ಕಾಯ್ದೆಗಳನ್ನು ಕೂಡಲೇ ಜಾರಿಗೆ ತರಬೇಕೆಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.‌

ರಾಜ್ಯಮಟ್ಟದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಈಗಾಗಲೇ ದೆಹಲಿಯಲ್ಲಿ ಲಕ್ಷಾಂತರ ರೈತರು ಇಪ್ಪತ್ತು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ನಾಲ್ಕೈದು ಬಾರಿ ಸಭೆ ಮಾಡಿದ್ರೂ ಸಮಸ್ಯೆ ಬಗೆಹರಿಸಿಲ್ಲ. ಈಗಾಗಲೇ ರೈತರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇಡೀ ದೇಶದ ರೈತರಿಗೆ ಶಕ್ತಿ ನೀಡಲು ಕರ್ನಾಟಕದ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳು ಒಟ್ಟಾಗಿ ಒಂದೇ ವೇದಿಕೆಯಲ್ಲಿ ಶಕ್ತಿ ತುಂಬುವ ಹೋರಾಟ ಮಾಡಲಿವೆ. ಅನಿರ್ದಿಷ್ಟಾವಧಿ ಧರಣಿ ಆರಂಭವಾಗಿದ್ದು, ರಾಜ್ಯವ್ಯಾಪಿ ವಿಸ್ತರಣೆ ಮಾಡಲಿದ್ದೇವೆ. ಕೇಂದ್ರ ಸರ್ಕಾರ ತನ್ನ ಮೊಂಡುವಾದ ಬಿಟ್ಟು ರೈತರ ಸಮಸ್ಯೆ ಬಗೆಹರಿಸಬೇಕು. ಕಾಯ್ದೆಗಳನ್ನು ವಾಪಸ್​​ ಪಡೆಯಬೇಕೆಂಬುದು ನಮ್ಮ ನಿಲುವು ಎಂದರು. ಡಿಸೆಂಬರ್ 19 ಹಾಗೂ 24ರಂದು ರೈತರ ಎರಡು ತಂಡಗಳು ದೆಹಲಿಗೆ ತೆರಳಿ ಅಲ್ಲಿನ ರೈತರ ಜೊತೆ ನಿಲ್ಲಲಿದ್ದಾರೆ ಎಂದರು.‌

ಇದನ್ನೂ ಓದಿ : ಅಂಬಾನಿ ಮನೆಗೆ ಹೋಗಲು ಪ್ರಧಾನಿಗೆ ಸಮಯ ಇರುವಾಗ, ರೈತರ ಕಷ್ಟ ಕೇಳಲು ಆಗಲ್ವೆ?

ರಾಷ್ಟ್ರಮಟ್ಟದಲ್ಲಿ ಐನೂರಕ್ಕೂ ಹೆಚ್ಚು ಸಂಘಟನೆಗಳು ಒಟ್ಟಾಗಿ ಪ್ರತಿಭಟನೆ ನಡೆಸುತ್ತಿವೆ. ಹೀಗಾಗಿ ರಾಜ್ಯದಲ್ಲೂ ಎರಡು ಮೂರು ಸಂಘಟನೆಗಳು ಒಟ್ಟಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರು. ಆದರೆ ಕೇಂದ್ರ ಸರ್ಕಾರ ಮಾತುಕತೆ ನೆಪದಲ್ಲಿ ರೈತರಿಗೆ ಚಳ್ಳೆಹಣ್ಣು ತಿನ್ನಿಸುವ ಪ್ರಯತ್ನ ಬಿಡಬೇಕು ಎಂದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿ ರೈತರನ್ನು ಒಕ್ಕಲೆಬ್ಬಿಸುವ, ಆತ್ಮಹತ್ಯೆಗೆ ತಳ್ಳುವ ಕೆಲಸವನ್ನು ಸರ್ಕಾರ ಮಾಡ್ತಿದೆ. ಎಪಿಎಂಸಿ ಹಾಗೂ ವಿದ್ಯುತ್ ಇಲಾಖೆಗಳ ಖಾಸಗೀಕರಣ ಮಾಡಿ ಕಾರ್ಪೊರೇಟ್ ವಶಕ್ಕೆ ನೀಡಿ ರೈತರನ್ನು ಸಂಕಷ್ಟಕ್ಕೆ ದೂಡಲಿದ್ದಾರೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ದೇವರಾಜ್ ದೂರಿದರು.

ABOUT THE AUTHOR

...view details