ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಪ್ರಮಾಣ ಸ್ವೀಕಾರ ಹಿನ್ನೆಲೆಯಲ್ಲಿ ಕಂಠೀರವ ಕ್ರೀಡಾಂಗಣದ ಸುತ್ತಮುತ್ತಲ ಭಾಗಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರ ನಡೆಯಿತು. ಕಳೆದ ಏಳು ವರ್ಷಗಳ ಬಳಿಕ ಪೂರ್ಣ ಬಹುಮತದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ನಿನ್ನೆಯಿಂದಲೇ ದೂರದೂರುಗಳಿಂದ ಖಾಸಗಿ ವಾಹನಗಳು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಜನ ಬೆಂಗಳೂರಿನತ್ತ ಪ್ರಯಾಣಿಸಲು ಆರಂಭಿಸಿದರು. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳ ವಾಹನಗಳು ಹೆದ್ದಾರಿಗಳಲ್ಲಿ ಸಾಲುಗಟ್ಟಿ ಬಂದಿದ್ದವು.
ಕ್ರೀಡಾಂಗಣದಲ್ಲಿ 50 ಸಾವಿರಕ್ಕೂ ಹೆಚ್ಚು ಜನರಿಗೆ ಆಸನ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಹಡ್ಸನ್ ವೃತ್ತದಲ್ಲಿ ಬೃಹತ್ ಪರದೆಯೊಂದನ್ನು ಅವಡಿಸಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ, ಹಡ್ಸನ್ ವೃತ್ತದಿಂದ ವಿಠ್ಠಲ ಮಲ್ಯ ಮತ್ತು ಕಸ್ತೂರ ಬಾ ರಸ್ತೆಯನ್ನು ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ತುಂಬಿದ್ದ ಸಾವಿರಾರು ಜನ ಎಲ್ಇಡಿ ಪರದೆಯಲ್ಲಿ ಪ್ರಸಾರವಾಗುತ್ತಿದ್ದ ಪ್ರಮಾಣ ವಚನ ಕಾರ್ಯಕ್ರಮದ ದೃಶ್ಯಗಳನ್ನು ಕಣ್ತುಂಬಿಕೊಂಡರು.
ಕ್ರೀಡಾಂಗಣದ ದೂರದಲ್ಲೇ ವಾಹನಗಳ ನಿಲುಗಡೆ ಮಾಡಿ ಸುಮಾರು ದೂರ ನಡೆದು ಕಾರ್ಯಕ್ರಮ ನಡೆದ ಕಂಠೀರವ ಕ್ರೀಡಾಂಗಣಕ್ಕೆ ಅಭಿಮಾನಿಗಳು ತಲುಪಿದರು. ಕಾರ್ಯಕ್ರಮಕ್ಕಾಗಿ ಆಗಮಿಸಿದವರಿಗೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಅಭಿಮಾನಿಗಳು ಅಲ್ಲಲ್ಲಿ ಉಪಹಾರದ ವ್ಯವಸ್ಥೆ ಮಾಡಿದ್ದರು. ಕಂಠೀರವ ಕ್ರೀಡಾಂಗಣದ ಸುತ್ತ ಹಲವಾರು ಕೌಂಟರ್ಗಳನ್ನು ತೆರೆದು ಉಪಹಾರ ವಿತರಿಸಲಾಯಿತು. ಕಸ್ತೂರ ಬಾ ರಸ್ತೆ ಫ್ಲೆಕ್ಸ್, ಬ್ಯಾನರ್ ಳಿಂದ ತುಂಬಿ ಹೋಗಿತ್ತು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಹಲವಾರು ನಾಯಕರ ಫೋಟೋಗಳು ಕಂಗೊಳಿಸುತ್ತಿದ್ದವು. ಅಭಿಮಾನಿಗಳು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಭಾವಚಿತ್ರವಿರುವ ಬಾವುಟಗಳನ್ನು ಹಿಡಿದು ಜಯಘೋಷ ಮೊಳಗಿಸುತ್ತಿದ್ದರು.