ಕರ್ನಾಟಕ

karnataka

By

Published : Mar 18, 2022, 5:25 PM IST

ETV Bharat / state

ಮೂರು ಜಿಲ್ಲೆಗಳ ಗಣಿಗಾರಿಕೆ ಪುನಶ್ಚೇತನಕ್ಕೆ ಅಗತ್ಯ ಕ್ರಮ : ಸಚಿವ ಜೆ.ಸಿ.ಮಾಧುಸ್ವಾಮಿ

ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ನಿಗಮದಡಿ ತುಮಕೂರು, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಸಮಗ್ರ ಅಭಿವೃದ್ಧಿಪಡಿಸಲು ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 20 ರಿಂದ 23 ಸಾವಿರ ಕೋಟಿ ರೂ. ಅನುದಾನ ಲಭ್ಯವಿದೆ. ಇದನ್ನು ಜಿಲ್ಲೆಗಳ ಅಭಿವೃದ್ದಿಗೆ ಬಳಸಿಕೊಳ್ಳಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮುಂದುವರೆಸಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು..

ಸಚಿವ ಜೆ.ಸಿ.ಮಾಧುಸ್ವಾಮಿ
ಸಚಿವ ಜೆ.ಸಿ.ಮಾಧುಸ್ವಾಮಿ

ಬೆಂಗಳೂರು :ಗಣಿ ಬಾಧಿತ ಜಿಲ್ಲೆಗಳಲ್ಲಿ ಗಣಿಗಾರಿಕೆಯ ಪ್ರಭಾವಕ್ಕೆ ಒಳಗಾದ ವಲಯದಲ್ಲಿ, ಸಮಗ್ರ ಪರಿಸರ ಯೋಜನೆಯಡಿ ಸುಪ್ರೀಂಕೋರ್ಟ್‌ನಲ್ಲಿರುವ ಅನುದಾನವನ್ನು ಬಳಸಿಕೊಳ್ಳಲು ಸರ್ಕಾರ ಹಿರಿಯ ವಕೀಲರನ್ನು ನೇಮಕ ಮಾಡಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು.

ಇಂದು ಪ್ರಶ್ನೋತ್ತರ ವೇಳೆ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದಡಿ ತುಮಕೂರು, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಸಮಗ್ರ ಅಭಿವೃದ್ಧಿಪಡಿಸಲು ಸುಪ್ರೀಂಕೋರ್ಟ್‌ನಲ್ಲಿ ಸುಮಾರು 20 ರಿಂದ 23 ಸಾವಿರ ಕೋಟಿ ರೂ. ಅನುದಾನ ಲಭ್ಯವಿದೆ.

ಇದನ್ನು ಜಿಲ್ಲೆಗಳ ಅಭಿವೃದ್ದಿಗೆ ಬಳಸಿಕೊಳ್ಳಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮುಂದುವರೆಸಿದೆ. ಈ ಅನುದಾನವನ್ನು ಬಳಸಿಕೊಳ್ಳಲು ನ್ಯಾಯಾಲಯದ ಅನುಮತಿ ಬೇಕು. ಅನೇಕ ಬಾರಿ ನಾವು ನಮ್ಮ ವಕೀಲರ ಮೂಲಕ ಮನವಿ ಮಾಡಿದರೂ ನ್ಯಾಯಾಲಯ ನಮ್ಮ ಅರ್ಜಿಯನ್ನೇ ಕೈಗೆತ್ತಿಕೊಂಡಿಲ್ಲ. ಈಗ ಹೊಸ ಹಿರಿಯ ವಕೀಲರನ್ನು ನೇಮಕ ಮಾಡಲಿದ್ದೇವೆ. ಏಪ್ರಿಲ್ ತಿಂಗಳಿನಲ್ಲಿ ವಿಚಾರಣೆ ಹಂತಕ್ಕೆ ಬರಬಹುದು ಎಂದು ಹೇಳಿದರು.

ಸದನದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಮಾತನಾಡಿರುವುದು..

ಕೆಲವರು 19 ಸಾವಿರ ಕೋಟಿ ಎನ್ನುತ್ತಾರೆ, ಇನ್ನು ಕೆಲವರು 23 ಸಾವಿರ ಕೋಟಿ ಅಂತಿದ್ದಾರೆ. ಈ ಅನುದಾನ ನಮಗೆ ಸಿಕ್ಕರೆ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗಲಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ತಜ್ಞರು ಮತ್ತಿತರರ ಜೊತೆ ಚರ್ಚೆ ನಡೆಸಿದ್ದೇವೆ. ಹೊಸ ವಕೀಲರನ್ನು ನೇಮಿಸಿ ವಿಚಾರಣೆ ನಡೆಸಲು ನ್ಯಾಯಾಲಯಕ್ಕೆ ಮನವಿ ಮಾಡುತ್ತೇವೆ ಎಂದರು.

ಇದಕ್ಕೂ ಮುನ್ನ ಶಾಸಕರ ಪ್ರಶ್ನೆಗೆ ಉತ್ತರಿಸಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಅವರು, ಗಣಿ ಬಾಧಿತ ಜಿಲ್ಲೆಗಳನ್ನು ಸಮಗ್ರವಾಗಿ ಅಭಿವೃದ್ದಿಪಡಿಸಲು ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ಅಭಿವೃದ್ಧಿ ನಿಗಮ ವತಿಯಿಂದ ಎಲ್ಲ ಕ್ರಮಕೈಗೊಳ್ಳಬಹುದು.

21-03-2018ರ ಆದೇಶದಂತೆ ಬಳ್ಳಾರಿ, ತುಮಕೂರು, ಚಿತ್ರದುರ್ಗ ಈ ಮೂರು ಜಿಲ್ಲೆಗಳಲ್ಲಿ ಸಾಮಾಜಿಕ ಮತ್ತು ಅಭಿವೃದ್ದಿಗೆ ಪೂರಕವಾದ ಗಣಿಗಾರಿಕೆಯ ಪ್ರಭಾವಕ್ಕೆ ಒಳಗಾದ ವಲಯಗಳ ಸಮಗ್ರ ಪರಿಸರ ಯೋಜನೆಯನ್ನು ತಯಾರಿಸಿ ನ್ಯಾಯಾಲಯದ ಅನುಮೋದನೆಗೆ ಕಳುಹಿಸಲಾಗಿತ್ತು. ಇದರ ನಡುವೆ ಸಮಾಜ ಪರಿವರ್ತನಾ ಸಮುದಾಯದವರು ತಕರಾರು ಅರ್ಜಿ ಸಲ್ಲಿಸಿದ್ದಾರೆ ಎಂದರು.

ಇದನ್ನೂ ಓದಿ:ಬಜೆಟ್ ಬಗ್ಗೆ ಸ್ಪಷ್ಟೀಕರಣ ಕೇಳಿ ಉತ್ತರಕ್ಕೂ ಮುನ್ನ ಕಾಂಗ್ರೆಸ್ ಸಭಾತ್ಯಾಗ, ಸಿಎಂ ವಾಗ್ದಾಳಿ

ರಾಜ್ಯ ಸರ್ಕಾರ ಈ ಮೂರು ಜಿಲ್ಲೆಗಳ ಅಭಿವೃದ್ಧಿಗಾಗಿ ಅನುದಾನವನ್ನು ಪಡೆಯಲು ಸುಪ್ರೀಂಕೋರ್ಟ್ ಹಿರಿಯ ವಕೀಲರಾದ ಮುಖುಲ್ ರೋಹಟಗಿ, ಹರೀಶ್ ಸಾಳ್ವೆ ಅವರನ್ನು ಸಂಪರ್ಕ ಮಾಡಿದ್ದೇವೆ. ಈಗ ಹೊಸ ವಕೀಲರನ್ನು ನೇಮಕ ಮಾಡಿದ್ದೇವೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು.

ಕುಡಿಯುವ ನೀರಿನ ಕಾಮಗಾರಿ 2025ರ ಜೂನ್‌ನೊಳಗೆ ಪೂರ್ಣ : ಕಲಬುರಗಿ ನಗರದಲ್ಲಿ 24x7 ಕುಡಿಯುವ ನೀರಿನ ಕಾಮಗಾರಿಯನ್ನು 2025ರ ಜೂನ್‌ನೊಳಗೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ ಎ ಬಸವರಾಜ್ ತಿಳಿಸಿದರು.

ಶಾಸಕಿ ಖನೀಜ್ ಫಾತೀಮಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 30 ವರ್ಷದಷ್ಟು ಹಳೆಯದಾದ ನೀರು ಸರಬರಾಜು ಮಾಡುವ ಪೈಪ್‍ಗಳನ್ನು ನವೀಕರಣ ಮಾಡಲು ವಿಶ್ವಬ್ಯಾಂಕ್‍ನ ನೆರವಿನಡಿ 837 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದರು.

ಕಲಬುರಗಿ ನಗರಕ್ಕೆ 95.74 ಎಂಎಲ್‍ಡಿ ನೀರಿನ ಬೇಡಿಕೆಯಿದ್ದು, ಪ್ರಸ್ತುತ 78.40 ಎಂಎಲ್‍ಡಿ ನೀರು ಮಾತ್ರ ಲಭ್ಯವಾಗಿದೆ. 17.34 ಎಂಎಲ್‍ಡಿ ಕೊರತೆಯಾಗಿದೆ. ಕುಡಿಯುವ ನೀರಿನ ಅಭಾವವಿರುವ ವಾರ್ಡ್​ಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲು ಸೂಚಿಸಲಾಗಿದೆ.

ನೀರು ಸರಬರಾಜು ಮಾಡುವ ಪಂಪ್‍ಗಳನ್ನು ದುರಸ್ತಿ ಮಾಡಲು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಕಲಬುರಗಿ, ಬಳ್ಳಾರಿ, ವಿಜಯಪುರಕ್ಕೆ ಕುಡಿಯುವ ನೀರಿನ ಯೋಜನೆಗೆ ಆದ್ಯತೆ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

For All Latest Updates

TAGGED:

ABOUT THE AUTHOR

...view details