ಕರ್ನಾಟಕ

karnataka

By ETV Bharat Karnataka Team

Published : Oct 14, 2023, 2:35 PM IST

Updated : Oct 14, 2023, 3:28 PM IST

ETV Bharat / state

ಬಿಬಿಎಂಪಿ ಕಮಿಷನರ್, ಇಂಜಿನಿಯರ್ ಚೀಫ್ ಹಿಂಸೆ ಕೊಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಕೆಂಪಣ್ಣ ಹೇಳಿಕೆ

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ರಾಜ್ಯ ಗುತ್ತಿಗೆದಾರರ ಸಂಘದ ನಿಯೋಗ ಭೇಟಿ ಮಾಡಿ ಬಾಕಿ ಬಿಲ್ ಪಾವತಿ ಮಾಡುವಂತೆ ಮನವಿ ಮಾಡಿದೆ.

KEMPANNA
ಕೆಂಪಣ್ಣ

ಕೆಂಪಣ್ಣ

ಬೆಂಗಳೂರು: ಬಿಬಿಎಂಪಿ ಆಯುಕ್ತರು ಹಾಗೂ ಇಂಜಿನಿಯರ್ ಚೀಫ್ ಗುತ್ತಿಗೆದಾರರಿಗೆ ಭಾರಿ ಹಿಂಸೆ ಕೊಡುತ್ತಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ದೂರಿದರು. ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ರಾಜ್ಯ ಗುತ್ತಿಗೆದಾರರ ಸಂಘದ ನಿಯೋಗ ಭೇಟಿಯಾದ ಕೆಂಪಣ್ಣ ಈ ಹೇಳಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಅಧಿಕಾರಿಗಳು ಸಮಸ್ಯೆ ಕೊಡುತ್ತಿದ್ದಾರೆ. ಬಿಬಿಎಂಪಿ ಕಮಿಷನರ್ ಹಾಗೂ ಇಂಜಿನಿಯರ್ ಚೀಫ್ ಹಿಂಸೆ ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ದೂರು ಕೊಟ್ಟಿದ್ದೇವೆ. ಈ ವೇಳೆ ಆದಷ್ಟು ಬೇಗ ಬಿಬಿಎಂಪಿ ಕಮಿಷನರ್ ಅವರನ್ನು ಕರೆದು ಮಾತನಾಡುತ್ತೇನೆ ಎಂಬುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ನಮ್ಮ ಭೇಟಿ ವೇಳೆ ಸಿಎಂ ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿಲ್ಲ. ಆದರೂ, ಆದಷ್ಟು ಶೀಘ್ರದಲ್ಲಿ ಬಾಕಿ ಹಣ ಬಿಡುಗಡೆ ಮಾಡುತ್ತೇವೆ ಎಂದು ‌ಸಿಎಂ ತಿಳಿಸಿದ್ದಾರೆ. ಅಲ್ಲದೇ, ಒಂದು ತಿಂಗಳಿನಲ್ಲಿ ಎಲ್ಲ ಅಧಿಕಾರಿಗಳ ಜೊತೆ ಸಭೆ ನಡೆಸಿ, ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ. ಬಾಕಿ ಬಿಲ್ ಈ ವರ್ಷದಲ್ಲಿ ಪಾವತಿ ಮಾಡುತ್ತೇವೆ. ಹಂತ-ಹಂತವಾಗಿ ಬಾಕಿ ಬಿಲ್‌ ಪಾವತಿ ಮಾಡುತ್ತಿದ್ದೇವೆ. ಈಗಾಗಲೇ ‌ಸ್ಬಲ್ಪ ಹಣವನ್ನು ಪಾವತಿ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಬಾಕಿ ಬಿಲ್​ನಲ್ಲಿ ಎಷ್ಟು ಸಾಧ್ಯವೋ ಅಷ್ಟು ಬಿಡುಗಡೆ ಮಾಡುತ್ತೇನೆ ಎಂದು ಸಿಎಂ‌ ಭರವಸೆ ನೀಡಿದ್ದಾರೆ ಎಂದು ಕೆಂಪಣ್ಣ ಮಾಹಿತಿ ನೀಡಿದರು.

ತಪ್ಪು ಸಾಬೀತಾದರೆ ಸಂಘದಿಂದ ಅಂಬಿಕಾಪತಿ ವಜಾ:ಇದೇ ವೇಳೆ, ಗುತ್ತಿಗೆದಾರರು ನೀಡಿದ ಕಮಿಷನ್ ಹಣದ ಮೇಲೆ ಐಟಿ ರೇಡ್ ಮಾಡಿದೆ ಎಂದು ಬಿಜೆಪಿ, ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಕೆಂಪಣ್ಣ, ಅದಕ್ಕೂ ಹಾಗೂ ನಮಗೂ‌ ಸಂಬಂಧ ಇಲ್ಲ. ಅವರ ರಾಜಕೀಯಕ್ಕೆ ನಮಗೆ ಸಂಬಂಧ ಇಲ್ಲ. ಆ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ನಾವು ಕೇವಲ ಬಾಕಿ ಬಿಲ್ ಬಗ್ಗೆ ಚರ್ಚೆ ಮಾಡಿದ್ದೇವೆ‌ ಎಂದು ಹೇಳಿದರು.

ಬಾಕಿರುವ ಬಿಲ್​ನಲ್ಲಿ ಶೇ.50ರಷ್ಟು ಬಿಡುಗಡೆಗೆ ಮನವಿ ಮಾಡಿದ್ದೇವೆ. ಇದಕ್ಕೆ ಹಬ್ಬದ ಒಳಗಡೆ ಬಿಡುಗಡೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಆದರೆ, ಯಾವಾಗ ಎಂದು ಹೇಳಲಿಲ್ಲ ಎಂದರು. ಕುಮಾರಸ್ವಾಮಿ ಅವರು ರಾಜಕೀಯವಾಗಿ‌ ಬಹಳ ಮಾತನಾಡುತ್ತಾರೆ. ಅವರ ರಾಜಕೀಯವನ್ನು ನಾವು ಒಪ್ಪಬಹುದು ಅಥವಾ ಒಪ್ಪದೇ ಇರಬಹುದು. ಐಟಿ ದಾಳಿ ಆದ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರಿಗೆ ಬೇರೆ ವಹಿವಾಟು ಇದೆ. ಕ್ವಾರಿ ಉದ್ಯಮ ಇದೆ‌. ಕಾನೂನು ಅದರದ್ದೇ ಆದ ಕ್ರಮ ಕೈಗೊಳ್ಳುತ್ತದೆ.‌ ತಪ್ಪು ಸಾಬೀತಾದರೆ ಸಂಘದಿಂದ ಅವರನ್ನು ವಜಾ ಮಾಡುತ್ತೇವೆ ಎಂದರು.

ಸಿಎಂ ಜೊತೆ ನಡೆದ ಚರ್ಚೆ ಏನು?:ಎಲ್ಲ ಇಲಾಖೆಗಳಿಂದ ಸುಮಾರು 20,000 ಕೋಟಿ ರೂ. ಗುತ್ತಿಗೆದಾರರ ಬಾಕಿ ಬಿಲ್ ಇದ್ದು, ಇದರಲ್ಲಿ ಶೇ.50ರಷ್ಟಾದರೂ ಪಾವತಿ ಮಾಡಬೇಕು. ಗುತ್ತಿಗೆದಾರರ ಸಮಸ್ಯೆ ಬಿಗಡಾಯಿಸಿದೆ. ಭಾರೀ ಸಂಕಷ್ಟದಲ್ಲಿದ್ದಾರೆ. ಸಾಲ ತೀರಿಸಲಾಗದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಆದಷ್ಟು ಬೇಗ ಬಾಕಿ ಬಿಲ್ ಪಾವತಿ ಮಾಡಿ ಎಂದು ಸಿಎಂ ಬಳಿ ಗುತ್ತಿಗೆದಾರ ಸಂಘದವರು ಕೋರಿದ್ದಾರೆ.

ಕಮಿಷನ್​ ವಿಚಾರದ ತನಿಖೆ ಮುಗಿಯುವ ತನಕ ಕಾಯಲು ಸಾಧ್ಯವಿಲ್ಲ. ನಾವು ಸಾಕಷ್ಟು ಸಂಕಷ್ಟದಲ್ಲಿದ್ದೇವೆ. ಆದಷ್ಟು ಬೇಗ ಹಣ ಬಿಡುಗಡೆ ಮಾಡಿ. ತಮಗೆ ಬೇಕಾದ ಗುತ್ತಿಗೆದಾರರಿಗೆ ಮಾತ್ರ ಬಾಕಿ ಬಿಲ್ ಪಾವತಿ ಮಾಡಲಾಗುತ್ತಿದೆ. ಜೇಷ್ಠತೆ ಆಧಾರದಲ್ಲಿ ಬಾಕಿ ಬಿಲ್ ಪಾವತಿ ಮಾಡಿ ಎಂದು ಗುತ್ತಿಗೆದಾರರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಗುತ್ತಿಗೆದಾರನ ಪುತ್ರನ ಫ್ಲ್ಯಾಟ್​​ನಲ್ಲಿ ₹42 ಕೋಟಿ ಪತ್ತೆ ಪ್ರಕರಣ; ಇ.ಡಿ ತನಿಖೆ ಸಾಧ್ಯತೆ

Last Updated : Oct 14, 2023, 3:28 PM IST

For All Latest Updates

ABOUT THE AUTHOR

...view details