ಕರ್ನಾಟಕ

karnataka

By

Published : Apr 9, 2020, 5:32 PM IST

ETV Bharat / state

ಎಲ್ಲ ತಿಳಿಯಾದ ಬಳಿಕವೇ SSLC ಪರೀಕ್ಷೆ, PU ಮೌಲ್ಯಮಾಪನ: ಸುರೇಶ್ ಕುಮಾರ್

ಎಸ್​ಎಸ್​​ಎಲ್​ಸಿ ಪರೀಕ್ಷೆ ಹಾಗೂ ಪಿಯುಸಿ ಮೌಲ್ಯಮಾಪನದ ಬಗ್ಗೆ ಸುಳ್ಳು ವದಂತಿಗೆ ಒಳಗಾಗಬೇಡಿ, ಆತಂಕಕ್ಕೆ‌ ಒಳಗಾಗಬೇಡಿ. ಕೊರೊನಾ ಸೋಂಕಿನ ಸಮಸ್ಯೆ ಪರಿಹಾರದ ನಂತರವೇ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಎಸ್​ಎಸ್​​ಎಲ್​ಸಿ ಪರೀಕ್ಷೆ ಹಾಗೂ ದ್ವಿತೀಯ ಪಿಯುಸಿ ಬಾಕಿ ಇರುವ ಒಂದು ಪತ್ರಿಕೆಯ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

Suresh kumar
ಸುರೇಶ್ ಕುಮಾರ್

ಬೆಂಗಳೂರು:ಕೊರೊನಾ ಸೋಂಕಿನ ಸಮಸ್ಯೆ ಪರಿಹಾರದ ನಂತರವೇ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಎಸ್​ಎಸ್​​ಎಲ್​ಸಿ ಪರೀಕ್ಷೆ ಹಾಗೂ ದ್ವಿತೀಯ ಪಿಯುಸಿಯ ಬಾಕಿ ಇರುವ ಒಂದು ಪತ್ರಿಕೆಯ ಪರೀಕ್ಷೆ ನಡೆಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿದರು. ಸಭೆ ನಂತರ ಸಾಮಾಜಿಕ ಜಾಲತಾಣದ ಮೂಲಕ ಸುದ್ದಿಗೋಷ್ಠಿ ನಡೆಸಿ ಸಭೆಯಲ್ಲಿನ ನಿರ್ಧಾರಗಳನ್ನು ಪ್ರಕಟಿಸಿದರು.

ಪ್ರಮುಖವಾಗಿ ಎಸ್​ಎಸ್​​ಎಲ್​ಸಿ ಪರೀಕ್ಷೆ ಹಾಗೂ ಪಿಯುಸಿ ಮೌಲ್ಯಮಾಪನದ ಬಗ್ಗೆ ಸುಳ್ಳು ವದಂತಿಗೆ ಒಳಗಾಗಬೇಡಿ, ಆತಂಕಕ್ಕೆ‌ ಒಳಗಾಗಬೇಡಿ ಈ ಬಗ್ಗೆ ವಾಟ್ಸ್ ಆ್ಯಪ್​ನಲ್ಲಿ ವದಂತಿ ಹರಡುವ ವರ್ಗ ಇದೆ. ಅವರಿಗೆ ಏನು ಸಿಗುತ್ತೋ ಗೊತ್ತಿಲ್ಲ, ವದಂತಿ ಹರಡುವ ಫ್ಯಾಕ್ಟರಿಯನ್ನೇ ಇವರೆಲ್ಲ ಇಟ್ಟಿರಬೇಕು. ಕೊರೊನಾ ಪರಿಹಾರವಾದ ನಂತರವೇ ಅಧಿಕಾರಿಗಳ ಜೊತೆ ಚರ್ಚಿಸಿ ನಾನೇ ಖುದ್ದಾಗಿ ಸುದ್ದಿಗೋಷ್ಠಿ ನಡೆಸಿ ವೇಳಾಪಟ್ಟಿ ಪ್ರಕಟಿಸಲಿದ್ದೇನೆ. ಸದ್ಯ ಎಸ್​ಎಸ್​​ಎಲ್​ಸಿ ಪರೀಕ್ಷೆ ಬಗ್ಗೆ ನಾವು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮಕ್ಕಳ, ಪೋಷಕರ ಆತಂಕ‌ ನಮಗೂ ಗೊತ್ತಾಗುತ್ತದೆ, ಕೊರೊನಾ ಆತಂಕ ಕಡಿಮೆಯಾಗುವವರೆಗೂ ಪರೀಕ್ಷೆ ಮಾಡಲು ಸಾಧ್ಯವಿಲ್ಲ. ಪಿಎಂ ಜೊತೆ ಸಿಎಂ ವಿಡಿಯೋ ಸಂವಾದ ಇದ್ದು, ಲಾಕ್​ಡೌನ್ ಬಗ್ಗೆ ಚರ್ಚೆ ನಡೆಯಲಿದೆ. ಅದರ ನಂತರ ಹೊರಬೀಳುವ ತೀರ್ಮಾನದಂತೆ, ಈ ಎಲ್ಲಾ ನಿರ್ಧಾರದ ಬಗ್ಗೆ ಕ್ರಮ, ದಿನಾಂಕ ಪ್ರಕಟಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸೋಮವಾರ ಮಧ್ಯಾಹ್ನ ರಾಜ್ಯದ ಎಲ್ಲಾ ಡಿಡಿಪಿಐ, ಡಯಟ್ ಪ್ರಾಂಶುಪಾಲರ ಜೊತೆ ವಿಡಿಯೋ ಸಂವಾದ ನಡೆಸಲಿದ್ದೇನೆ. ಎಸ್​ಎಸ್​​ಎಲ್​ಸಿ ಮಕ್ಕಳಿಗೆ ಶಿಕ್ಷಕರು ಮೆಂಟರ್ ಆಗಿ ಕೆಲಸ ಮಾಡಲಿದ್ದಾರೆ. ವಿದ್ಯಾರ್ಥಿಗಳ ತಂಡ ರಚಿಸಿ ಮೆಂಟರ್​ ನೇಮಿಸಲಾಗಿದೆ, ಅವರು ವಿದ್ಯಾರ್ಥಿಗಳ ಸಂಪರ್ಕದಲ್ಲಿ ಇದ್ದಾರೆ. ಮಕ್ಕಳ ಗೊಂದಲಕ್ಕೆ ಈ‌ ಶಿಕ್ಷಕರು ಪರಿಹಾರ ಸೂಚಿಸಬೇಕು, ಧೈರ್ಯ ತುಂಬಬೇಕು ಎಂದು ಹೇಳಿದರು.

ರೇಡಿಯೋ, ದೂರದರ್ಶನಲ್ಲಿ ಕ್ಲಾಸ್:ಆಕಾಶವಾಣಿ, ದೂರದರ್ಶನ‌ ಎರಡೂ ಮಾಧ್ಯಮಗಳ ಮೂಲಕ‌ ಎಸ್​ಎಸ್​​ಎಲ್​ಸಿ ಮಕ್ಕಳಿಗೆ ಮತ್ತೊಮ್ಮೆ ಎಲ್ಲಾ ವಿಷಯಗಳ ಬಗ್ಗೆ ಪುನರ್ ಮನನ ತರಗತಿಗಳನ್ನು ಮಾಡಲು ತೀರ್ಮಾನ ಮಾಡಲಾಗಿದೆ. ಇಷ್ಟರಲ್ಲೇ ಆಕಾಶವಾಣಿ‌, ದೂರದರ್ಶನ ಪ್ರಮುಖರ ಜೊತೆ ಚರ್ಚಿಸುವ ಕಾರ್ಯ ಮಾಡಲಿದ್ದೇವೆ. ಇದರಿಂದ ಕುಗ್ರಾಮದಲ್ಲಿ ಇರುವವರಿಗೂ ಸಹಾಯವಾಗಬಹುದು ಎಂದರು.

ಮಕ್ಕಳಿಗೆ ಯೂಟ್ಯೂಬ್ ಮಾಹಿತಿ ಮನರಂಜನೆ:ಒಂಬತ್ತನೆ ತರಗತಿವರೆಗೆ ಬಂದ ಮಕ್ಕಳ ಗಮನಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆ ಯೂಟ್ಯೂಬ್ ಚಾ‌ನಲ್ ಹೊರತರಲು ಚಿಂತನೆ ನಡೆಸಿದ್ದೇವೆ. ಆಸಕ್ತರಿಂದ‌ ಕೊಡುಗೆ ಆಹ್ವಾನ ಮಾಡಿದ್ದೇವೆ, ಕ್ವಿಜ್ ಮಾದರಿಯಾಗಿ ಮಕ್ಕಳಿಗೆ ಆಸಕ್ತಿ ಉಂಟು ಮಾಡುವುದರ, ಕಥೆ ಹೇಳುವ, ಮ್ಯಾಜಿಕ್ ಮೂಲಕ ಮಕ್ಕಳನ್ನು ಸೆಳೆಯುವ ಹೊಸ ಹೊಸ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತದೆ ಏಪ್ರಿಲ್ 14ರ ನಂತರ ಈ ಯೂಟ್ಯೂಬ್ ಪ್ರಾರಂಭವಾಗುವ ಎಲ್ಲಾ ಸಾಧ್ಯತೆ ಇದೆ ಎಂದರು.

ಟಿಇಟಿ ಪರೀಕ್ಷೆ ಇರುವಾಗ ಬೇರೆ ಪರೀಕ್ಷೆ ಕ್ಲಾಶ್​ ಆಗದಂತೆ ವೇಳಾಪಟ್ಟಿ ಮಾಡಲು ಮನವಿ ಬಂದಿದೆ. ಪರೀಕ್ಷೆಗಳಿಗೆ ಬೇರೆ ಬೇರೆ ದಿನಾಂಕ ನಿಗದಿಪಡಿಸುವ ರೀತಿ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

6-8ರವರೆಗಿನ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಾತಿ ಆಗಿರುವವರು ಬೇಗ ದಾಖಲಾತಿ ನೀಡಬೇಕು. ಕಲ್ಯಾಣ ಕರ್ನಾಟಕದಿಂದ ನೇಮಕವಾದ ಬಹುತೇಕರು ದಾಖಲಾತಿ ಕೊಟ್ಟಿಲ್ಲ, ಇತರೆಡೆ ಕೂಡ ಕೆಲವರು ಕೊಡಬೇಕಿದೆ, ಎಲ್ಲರೂ ಬೇಗ ದಾಖಲಾತಿ ಕೊಡಿ ಎಂದರು.

ಶಿಕ್ಷಕರ ಹೋಂ ವರ್ಕ್​ಗೆ ಸಮಯ ವಿಸ್ತರಣೆ:ಬೇಸಿಗೆ ರಜೆ ಮುನ್ನ ಎಲ್ಲಾ ಶಿಕ್ಷಕರಿಗೆ‌ ಒಂದಷ್ಟು ಚಟುವಟಿಕೆಗಳನ್ನು ವರ್ಕ್ ಫ್ರಂ ಹೋಂ ಕೊಟ್ಟಿದ್ದೆವು. ನಮಗೆ ಸಮಯ ಸಾಲುತ್ತಿಲ್ಲ ಎಂದು ಕೆಲ‌ ಶಿಕ್ಷಕರು ಹೇಳಿದ್ದಾರೆ. ನಾವೆಲ್ಲ ಚರ್ಚಿಸಿ ಸಮಯ ವಿಸ್ತರಣೆ ಮಾಡುವ ನಿರ್ಧಾರ ಕೈಗೊಂಡಿದ್ದೇವೆ. ಸ್ಟೂಡೆಂಟ್ ಆಕ್ಟಿವಿಟಿ ಟ್ರಾಕಿಂಗ್ ಸಿಸ್ಟಂನಲ್ಲಿ ಏಪ್ರಿಲ್​ 14 ರ ಒಳಗೆ ಮಕ್ಕಳ ಫಲಿತಾಂಶ, ಆಂತರಿಕ ಪರೀಕ್ಷೆಯಲ್ಲಿ ಪಡೆದ ಅಂಕ, ಹಾಜರಾತಿ ಸೇರಿ ಎಲ್ಲಾ ಅಂಶ ಅಪ್​ಡೇಟ್ ಮಾಡಲು‌ ಸೂಚನೆ ನೀಡಲಾಗಿತ್ತು. ಆದರೆ ಶಾಲೆಗೆ ಹೋಗಿಲ್ಲ. ಸಮಯ ವಿಸ್ತರಿಸಿ ಎನ್ನುವ ಮನವಿ ಬಂದಿದೆ, ಅದಕ್ಕೆ ಲಾಕ್ ಡೌನ್ ಮುಗಿದ ನಂತರ ಒಂದು ವಾರ ಅವರಿಗೆ ಸಮಯ ಕೊಡಲಿದ್ದೇವೆ ಅಷ್ಟರಲ್ಲಿ ಅವರು ಎಲ್ಲಾ ಅಂಶ ಅಪ್​ಡೇಟ್ ಮಾಡಬೇಕು ಎಂದು ಹೇಳಿದರು.

ದ್ವಿತೀಯ ಪಿಯುಸಿಯ ಇನ್ನೂ ಒಂದು ವಿಷಯದ ಪರೀಕ್ಷೆ ಬಾಕಿ ಇದೆ. ಪರಿಸ್ಥಿತಿ ತಿಳಿಯಾದ ನಂತರ ದಿನಾಂಕ ನಿಗದಿಪಡಿಸಲಿದ್ದೇವೆ ಇದರ ನಡುವೆ ಮೌಲ್ಯಮಾಪನ ಬಹಿಷ್ಕಾರದ ಮಾತುಗಳು ಕೇಳಿ ಬಂದಿದ್ದವು. ನಂತರ ಅವರೇ ಈ ಸಮಯ ಸರಿಯಲ್ಲ ಎಂದು ನಿಲುವು ಬದಲಿಸಿದ್ದಾರೆ. ಹಾಗಾಗಿ ಅವರ ಬೇಡಿಕೆ ಪೂರೈಸುವ ದಿಕ್ಕಿನಲ್ಲಿನ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ ಎಂದರು.

ಕೊರೊನಾ ಹಿನ್ನೆಲೆಯಲ್ಲಿ ಮೌಲ್ಯಮಾಪನ ಇನ್ನಷ್ಟು ವಿಕೇಂದ್ರೀಕರಣ ಮಾಡಿ ಮತ್ತಷ್ಟು ಉಪ ಕೇಂದ್ರ ತೆರೆಯಲು ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಮನವಿ ಮಾಡಿದ್ದಾರೆ. ಇನ್ನಷ್ಟು ಉಪ ಕೇಂದ್ರ ಆರಂಭಕ್ಕೆ ಪರಿಶೀಲಿಸುವಂತೆ ಪಿಯು ನಿರ್ದೇಶಕರಿಗೆ ಹೇಳಿದ್ದು ಕೆಲ‌ದಿನದಲ್ಲಿ ಅವರು ವರದಿ ನೀಡಲಿದ್ದು, ನಂತರ ಕ್ರಮ ಕೈಗೊಳ್ಳಲಿದ್ದೇವೆ.

ಎಸ್ಎಸ್ಎಲ್​ಸಿ ವಾರ್ಷಿಕ ಪರೀಕ್ಷೆ ನಂತರ ಪೂರಕ ಪರೀಕ್ಷೆ ಮಾಡುವ ಕುರಿತು ಪೋಷಕರು ಪ್ರಶ್ನೆ ಕೇಳುತ್ತಿದ್ದಾರೆ. ಇದಕ್ಕೆ ಕಾರ್ಯಯೋಜನೆ ರೂಪಿಸಲು ಸ್ಎಸ್ಎಲ್​ಸಿ ಪರೀಕ್ಷಾ ಮಂಡಳಿ ನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ABOUT THE AUTHOR

...view details