ಕರ್ನಾಟಕ

karnataka

By

Published : Jul 30, 2020, 9:28 PM IST

ETV Bharat / state

ನೂತನ ಶಿಕ್ಷಣ ನೀತಿಯನ್ನು ಸ್ವಾಗತಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯನ್ನು ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಾಗತಿಸಿದ್ದಾರೆ. ಈ ಶಿಕ್ಷಣ ಪದ್ದತಿಯಿಂದ ಪದವಿ ಹಂತದಲ್ಲಿ 1, 2 ನೇ ವರ್ಷದಲ್ಲಿ ಕಾರಣಾಂತರದಿಂದ ಶಿಕ್ಷಣ ಮೊಟಕುಗೊಳಿಸಿದರೂ, ಅವರಿಗೆ ಒಂದು ಹಂತದ ಶಿಕ್ಷಣ ಮುಕ್ತಾಯವಾಗಿ ಪ್ರಮಾಣಪತ್ರ ದೊರೆಯುವುದರಿಂದ ಅವರಲ್ಲಿ ಕೀಳರಿಮೆ ಹೋಗುತ್ತದೆ. ಉದ್ಯೋಗವಕಾಶ ಕೂಡ ಲಭ್ಯವಾಗುತ್ತದೆ ಎಂದಿದ್ದಾರೆ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ನೂತನ ಶಿಕ್ಷಣ ನೀತಿ-2020 ಅನ್ನು ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಾಗತಿಸಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ 'ನ ಭೂತೋ ನ ಭವಿಷ್ಯತಿ' ಎಂಬಂತೆ ಒಂದು ಕ್ರಾಂತಿಕಾರಿ ನಿರ್ಣಯವಾಗಿದೆ. ದೇಶವನ್ನು ಮುಂದಿನ ದಿನದಲ್ಲಿ ವಿಶ್ವಗುರು ಸ್ಥಾನವನ್ನು ಏರಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ. ಹೊಸ ಪೀಳಿಗೆಯ ಮಕ್ಕಳ ಬುದ್ಧಿ ಮತ್ತು ಕಲಿಕಾ ಸಾಮರ್ಥ್ಯ ಹಾಗೂ ಅವರ ಆಸಕ್ತಿ ಬೇಕು-ಬೇಡಗಳ ಗಮನದಲ್ಲಿಟ್ಟುಕೊಂಡು ಕಲಿಕೆ ಮತ್ತಷ್ಟು ಆನಂದದಾಯಕ ಮತ್ತು ಅರ್ಥಪೂರ್ಣವಾಗುವ ನಿಟ್ಟಿನಲ್ಲಿ ಪ್ರೌಢ ಹಂತದಿಂದ ನೆಚ್ಚಿನ ವಿಷಯಗಳ ಆಯ್ಕೆಗೆ ಅವಕಾಶ ನೀಡಿರುವುದು ಉತ್ತಮ ಅಂಶ. ಇದರಿಂದಾಗಿ ಶಾಲೆ ಬಿಡುವ ಪ್ರಮಾಣ ಕಡಿಮೆ ಆಗುವುದಲ್ಲದೇ, ಜೀವನ ಕೌಶಲ್ಯ ಕಲಿಸುತ್ತದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ

ಶಾಲಾ ಶಿಕ್ಷಣದಲ್ಲಿ ಏಕರೂಪತೆಗೆ ಅವಕಾಶ ನೀಡುತ್ತದೆ. ಯಾವುದೇ ವಿದ್ಯಾರ್ಥಿ ಒಂದು ಹಂತವನ್ನು ಮುಗಿಸಿದ್ದಲ್ಲಿ, ಶಿಕ್ಷಣದಲ್ಲಿ ತಡೆಯುಂಟಾದಾಗ ಯಾವುದಾದರೊಂದು ಕೌಶಲ್ಯದಲ್ಲಿ ನೈಪುಣ್ಯತೆ ಪಡೆಯಬಹುದಾಗಿದೆ. ಶಿಕ್ಷಕರ ಶಿಕ್ಷಣವನ್ನು ಶಾಲಾ ಶಿಕ್ಷಣದ ನಂತರ ನಾಲ್ಕು ವರ್ಷಗಳ ಪದವಿಯಾಗಿ ನಿರ್ಧರಿಸುವುದು ಉತ್ತಮ ಬೆಳವಣಿಗೆ. ಇದರಿಂದಾಗಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುತ್ತದೆ. ನಿಜವಾಗಿ ಶಿಕ್ಷಕರಾಗಬೇಕು ಎಂಬ ಆಸಕ್ತಿ ಇರುವವರು ಮಾತ್ರ ಇಂತಹ ಪದವಿಗೆ ಸೇರುತ್ತಾರೆ ಎಂದು ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ

ಪದವಿ ಹಂತದಲ್ಲಿ 1 ನೇ, 2 ನೇ ವರ್ಷದಲ್ಲಿ ಕಾರಣಾಂತರದಿಂದ ಶಿಕ್ಷಣ ಮೊಟಕುಗೊಳಿಸಿದರೂ ಅವರಿಗೆ ಒಂದು ಹಂತದ ಶಿಕ್ಷಣ ಮುಕ್ತಾಯವಾಗಿ ಪ್ರಮಾಣಪತ್ರ ದೊರೆಯುವುದರಿಂದ ಅವರಲ್ಲಿ ಕೀಳರಿಮೆ ಹೋಗುತ್ತದೆ. ಉದ್ಯೋಗವಕಾಶ ಕೂಡ ಲಭ್ಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣ ಅವರ ಮನದ ಭಾಷೆಯಾದ ಮಾತೃಭಾಷೆಯಲ್ಲಿ ನೀಡುವುದು ಶಿಕ್ಷಣದ ತಳಪಾಯವನ್ನು ಗಟ್ಟಿಗೊಳಿಸುತ್ತದೆ. ಪರೀಕ್ಷೆಗಳನ್ನು ಪ್ರತಿಹಂತದ ಕೊನೆಯಲ್ಲಿ ಮಾತ್ರ ಇರುವುದರಿಂದ ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಿ ಕಲಿಕೆಯ ಬದಲು ಸ್ಮರಣಶಕ್ತಿ ನೀಡಲಾದ ಈವರೆಗಿನ ಪದ್ಧತಿ ಹೋಗಿ ಮಕ್ಕಳು ನಿರ್ಭಯವಾಗಿ ಕಲಿಯಲು ಸಹಕಾರಿ. ಪರೀಕ್ಷಾ ಪದ್ಧತಿ ಸುಧಾರಣೆಗೆ ಒತ್ತು ನೀಡಲಾಗಿದೆ. ಶಿಕ್ಷಣದಲ್ಲಿ ಆಧುನಿಕ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡಿರುವುದು ಸಮಕಾಲೀನ ಜಾಗತಿಕ ಅಗತ್ಯಕ್ಕೆ ಪೂರಕವಾಗಿದೆ ಎಂದು ಹೇಳಿದ್ದಾರೆ.

ಒಟ್ಟಾರೆ ಪ್ರಧಾನಮಂತ್ರಿಗಳ ಮಹದಾಸೆ ಮತ್ತು ಭಾರತದ ಉಜ್ವಲ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಈ ಶಿಕ್ಷಣ ನೀತಿ ಏಕರೂಪದ, ಸಮಾನತೆಯ ಮತ್ತು ಗುಣಮಟ್ಟ ಶಿಕ್ಷಣವನ್ನು ತಂತ್ರಜ್ಞಾನದ ಜತೆಗೆ ನೀಡುವಲ್ಲಿ ಉತ್ತಮವಾಗಿದೆ ಎಂದು ಸ್ಪೀಕರ್ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details