ಕರ್ನಾಟಕ

karnataka

ನೈಋತ್ಯ ರೈಲ್ವೆ ಸಿಬ್ಬಂದಿಯಿಂದ ಬೆಂಗಳೂರು ಮೈಸೂರು ಮಾರ್ಗದಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ..

By

Published : Mar 17, 2023, 9:30 PM IST

ನೈಋತ್ಯ ರೈಲ್ವೆ ಸಿಬ್ಬಂದಿ ಟಿಕೆಟ್​ ಇಲ್ಲದೇ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ದಂಡದ ಶಿಕ್ಷೆ ವಿಧಿಸಿದೆ.

ರೈಲು
ರೈಲು

ಬೆಂಗಳೂರು : ನೈಋತ್ಯ ರೈಲ್ವೆ ಸಿಬ್ಬಂದಿ ವಿಶೇಷ ತಪಾಸಣೆ ಕಾರ್ಯಾಚರಣೆಯನ್ನು ನಡೆಸುವ ಮೂಲಕ ಟಿಕೆಟ್ ಇಲ್ಲದೇ ಪ್ರಯಾಣಿಸುವವರಿಗೆ ದಂಡದ ಶಿಕ್ಷೆಯನ್ನು ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವಂತಹ ನೈರುತ್ಯ ರೈಲ್ವೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ನಿಯಮಿತ ತಪಾಸಣೆಯ ಹೊರತಾಗಿ ವಿಶೇಷ ಟಿಕೆಟ್ ತಪಾಸಣೆ ಕಾರ್ಯಾಚರಣೆಗಳನ್ನು ಆಯೋಜಿಸುತ್ತದೆ ಎಂದು ಹೇಳಿದೆ. ವಿಶೇಷ ಟಿಕೆಟ್ ತಪಾಸಣೆ ಕಾರ್ಯಾಚರಣೆಯ ಭಾಗವಾಗಿ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಮಾರ್ಗದರ್ಶನದಲ್ಲಿ ಬೆಂಗಳೂರು ಮೈಸೂರು ವಿಭಾಗದಲ್ಲಿ ಹೊಂಚುದಾಳಿ ತಪಾಸಣೆಯನ್ನು ಆಯೋಜಿಸಲಾಗಿತ್ತು ಎಂದಿದೆ.

ಬೆಂಗಳೂರು-ಮೈಸೂರು ಮಾರ್ಗದಲ್ಲಿ ತಪಾಸಣೆ : ರೈಲು ನಂ 12616 ಚಾಮುಂಡಿ ಎಕ್ಸ್​ಪ್ರೆಸ್, ರೈಲು ನಂ 06255 ಬೆಂಗಳೂರು-ಮೈಸೂರು ಮೇಮು ಮತ್ತು 16592 ಹಂಪಿ ಎಕ್ಸ್​ಪ್ರೆಸ್​ಗಳಲ್ಲಿ ತಪಾಸಣೆ ನಡೆಸಲಾಯಿತು ಎಂದು ಹೇಳಿದೆ.

40,360 ರೂ ದಂಡ : ಈ ದಾಳಿ ಸಂದರ್ಭದಲ್ಲಿ 28 ಸಿಬ್ಬಂದಿಯನ್ನು ತಪಾಸಣೆಗಾಗಿ ನಿಯೋಜಿಸಲಾಗಿತ್ತು. ಅಧಿಕೃತ ಟಿಕೆಟ್‌ಗಳಿಲ್ಲದೇ ಮತ್ತು ಕಾಯ್ದಿರಿಸದ ಸಾಮಗ್ರಿಗಳೊಂದಿಗೆ ಪ್ರಯಾಣಿಸಿದ 137 ಪ್ರಯಾಣಿಕರನ್ನು ಗುರುತಿಸಿ ಅವರಿಂದ ರೂ. 40,360/- (ನಲವತ್ತು ಸಾವಿರದ ಮುನ್ನೂರ ಅರವತ್ತು ರೂಪಾಯಿಗಳು) ದಂಡವನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಹುಬ್ಬಳ್ಳಿ- ಬನಾರಸ್ ನಡುವೆ ಬೇಸಿಗೆಯ ವಿಶೇಷ ರೈಲು: ಇನ್ನೊಂದೆಡೆ ಬೇಸಿಗೆ ರಜೆಯ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆಗೊಳಿಸಲು ಒಂದು ಟ್ರಿಪ್‌ ಬೇಡಿಕೆಯ ಮೇರೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಬನಾರಸ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು (07347 ಮತ್ತು 07348) ಓಡಿಸಲು ನೈಋತ್ಯ ರೈಲ್ವೆ ವಲಯವು ನಿರ್ಧರಿಸಿದೆ.

ರೈಲು ಸಂಖ್ಯೆ 07347 ಮಾರ್ಚ್ 27 (ಸೋಮವಾರ), 2023 ರಂದು ಎಸ್‌.ಎಸ್‌.ಎಸ್ ಹುಬ್ಬಳ್ಳಿ ನಿಲ್ದಾಣದಿಂದ ರಾತ್ರಿ 8:30 ಗಂಟೆಗೆ ಹೊರಟು, ಬುಧವಾರ ಬೆಳಗ್ಗೆ 9:10 ಗಂಟೆಗೆ ಉತ್ತರ ಪ್ರದೇಶದ ಬನಾರಸ್ ನಿಲ್ದಾಣವನ್ನು ತಲುಪಲಿದೆ. ಪುನಃ ಇದೇ ರೈಲು (07348) ಮಾರ್ಚ್ 29 (ಬುಧವಾರ), 2023 ರಂದು ಬನಾರಸ್‌ನಿಂದ ರಾತ್ರಿ 8: 40 ಗಂಟೆಗೆ ಹೊರಡುವ ರೈಲು, ಶುಕ್ರವಾರ ಬೆಳಗ್ಗೆ 11: 45 ಗಂಟೆಗೆ ಎಸ್.ಎಸ್.ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

ಈ ವಿಶೇಷ ರೈಲು ಎರಡೂ ಮಾರ್ಗದಲ್ಲಿ ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ, ವಿಜಯಪುರ, ಇಂಡಿ ರೋಡ, ಸೋಲಾಪುರ, ದೌಂಡ್, ಅಹ್ಮದನಗರ, ಕೋಪರಗಾಂವ್, ಮನ್ಮಾಡ್, ಭೂಸಾವಲ್, ಖಂಡ್ವಾ, ಇಟಾರಸಿ, ಪಿಪಾರಿಯಾ, ಜಬ್ಬಲ್‌ಪುರ, ಕಟನಿ, ಮೈಹಾರ್, ಸತನಾ, ಮಾಣಿಕ್‌ಪುರ, ಪ್ರಯಾಗರಾಜ್ ಚೌಕಿ ಜಂಕ್ಷನ್ ಮತ್ತು ವಾರಣಾಸಿ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತದೆ. ಅವುಗಳು- ಎಸಿ ಟು-ಟೈರ್ (1), ಎಸಿ ತ್ರೀ-ಟೈರ್ (1), ಸ್ಲೀಪರ್ ಕ್ಲಾಸ್ (7), ಸಾಮಾನ್ಯ ಎರಡನೇ ದರ್ಜೆ ಬೋಗಿಗಳು (10), ಮತ್ತು ದಿವ್ಯಾಂಗ ಸ್ನೇಹಿ ಕಂಪಾರ್ಟ್​ಮೆಂಟ್​ಗಳಿಂದ ಕೂಡಿದ ಎರಡನೇ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್‌ಗಳು ಹೊಂದಿರುತ್ತದೆ.

ಪ್ರಯಾಣಿಕರು ಈ ವಿಶೇಷ ರೈಲಿನ ಸದುಪಯೋಗ ಪಡೆದುಕೊಳ್ಳುವಂತೆ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ :ಹುಬ್ಬಳ್ಳಿ ಬನಾರಸ್ ನಡುವೆ ಬೇಸಿಗೆಯ ವಿಶೇಷ ರೈಲು

ABOUT THE AUTHOR

...view details