ಕರ್ನಾಟಕ

karnataka

ETV Bharat / state

ಸೋಮವಾರದವರೆಗೂ ಅತೃಪ್ತ ಶಾಸಕರ‌ ಅಜ್ಞಾತ ವಾಸ ಮುಂದುವರಿಕೆ - undefined

ಸೋಮವಾರದವರೆಗೂ ಅತೃಪ್ತ ಶಾಸಕರು ಮೈತ್ರಿ ನಾಯಕರ ಕೈಗೆ ಸಿಗದಂತೆ ನೋಡಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.

ಅಜ್ಞಾತ ವಾಸ ಮುಂದುವರಿಕೆ

By

Published : Jul 17, 2019, 3:33 PM IST

ಬೆಂಗಳೂರು:ಮೈತ್ರಿ ಸರ್ಕಾರಕ್ಕೆ ನಾಳೆ ಅಗ್ನಿ ಪರೀಕ್ಷೆ ಎದುರಾಗುತ್ತಿದ್ದು, ಯಾವ ಕಾರಣಕ್ಕೂ ಅತೃಪ್ತ ಶಾಸಕರು ಸೋಮವಾರದವರೆಗೆ ಬೆಂಗಳೂರು ಕಡೆ ಸುಳಿಯದಂತೆ ಬಿಜೆಪಿ ಮುನ್ನೆಚ್ಚರಿಕೆ ವಹಿಸಿದೆ.

ಮುಖ್ಯಮಂತ್ರಿ ಸೇರಿದಂತೆ ಯಾವೊಬ್ಬ ನಾಯಕರ ಭೇಟಿಗೂ ಶಾಸಕರು ಸಿಗದಂತೆ ನೋಡಿಕೊಳ್ಳುವ ಮೂಲಕ ವಿಶ್ವಾಸ ಮತಕ್ಕೆ ಸೋಲಾಗುವಂತೆ ಮಾಡುವ ತಂತ್ರ ರೂಪಿಸಿದೆ.

ಸುಪ್ರೀಂಕೋರ್ಟ್ ತೀರ್ಪಿನಿಂದ ಅತೃಪ್ತ ಶಾಸಕರು ನಿರಾಳರಾಗಿದ್ದು, ಬಿಜೆಪಿಗೆ ಮತ್ತಷ್ಟು ಬಲ ತಂದಿದೆ. ವಿಧಾನಸಭೆಯ ನಾಳಿನ ಕಲಾಪದ ವೇಳೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಮಾಡಲಿದ್ದು, ವಿಶ್ವಾಸ ಮತದ ಮೇಲೆ‌ ಚರ್ಚೆ ನಡೆಯಲಿದೆ. ಚರ್ಚೆ ನಡೆಯುವಷ್ಟು ದಿನವೂ ಅತೃಪ್ತ ಶಾಸಕರು ವಿಧಾನಸೌಧ ಮಾತ್ರವಲ್ಲ ಬೆಂಗಳೂರು ಕಡೆಯೇ ಸುಳಿಯದಂತೆ ನೋಡಿಕೊಳ್ಳಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಉಳಿಯಬೇಕಾದರೆ ಅತೃಪ್ತ ಶಾಸಕರು ಸದನಕ್ಕೆ‌ ಬಂದು ಸರ್ಕಾರದ ಪರ ಮತ ಚಲಾಯಿಸಬೇಕು. ಇದನ್ನು ಬಿಟ್ಟು ಸರ್ಕಾರ ಉಳಿಸಿಕೊಳ್ಳಲು ಬೇರೆ ಮಾರ್ಗವಿಲ್ಲ. ಹಾಗಾಗಿ ಅತೃಪ್ತ ಶಾಸಕರ ಮನವೊಲಿಕೆ ಕಸರತ್ತು ಮುಂದುವರೆಸುವುದು ಮೈತ್ರಿ ನಾಯಕರ ಲೆಕ್ಕಾಚಾರ. ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರೇ ಮುಂಬೈಗೆ ಹೋಗಿ ಶಾಸಕರನ್ನ ಭೇಟಿ ಮಾಡಲು ಚಿಂತನೆ ನಡೆಸಿದ್ದಾರೆ. ಪ್ರೊಟೋಕಾಲ್ ವ್ಯವಸ್ಥೆ ಇರುವ ಕಾರಣ ಹೋಟೆಲ್ ಪ್ರವೇಶಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ, ಹಾಗಾಗಿ ಶಾಸಕರ ಭೇಟಿಗೆ ಕಡೆಯ ಪ್ರಯತ್ನ ನಡೆಸಲಿದ್ದಾರೆ ಎನ್ನಲಾಗಿದೆ.

ಜೊತೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಮುಂಬೈಗೆ ಕಳುಹಿಸಿ, ಶಾಸಕರ ಮನವೊಲಿಸುವ ಸಾಧ್ಯತೆ ಬಗ್ಗೆ ಕೈ ಪಾಳಯದಲ್ಲಿ ಮಾತು ಕೇಳಿಬರುತ್ತಿದೆ.

ಈ ಎಲ್ಲಾ ಸುಳಿವು ಅರಿತಿರುವ ಬಿಜೆಪಿ ನಾಯಕರು ಸೋಮವಾರ ಸಂಜೆವರೆಗೂ ಅತೃಪ್ತ ಶಾಸಕರು ಕಾಂಗ್ರೆಸ್ ಹಾಗು ಜೆಡಿಎಸ್ ಮುಖಂಡರಿಗೆ ಸಿಗದಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ.

ಮುಂಬೈ ರೆಸಾರ್ಟ್​ನ ಮೇಲ್ಮಹಡಿಯಲ್ಲಿಯೇ ಶಾಸಕರು ಮೂರು ದಿನ ಇರಲಿದ್ದು, ಅಲ್ಲಿಗೆ ಇತರರ ಪ್ರವೇಶ ನಿರ್ಬಂಧಿಸಲಾಗುತ್ತದೆ. ಯಾರೊಂದಿಗೂ ದೂರವಾಣಿ ಮೂಲಕ ಮಾತುಕತೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ತಿಳಿದುಬಂದಿದೆ.

ವಿಶ್ವಾಸಮತ ಯಾಚನೆ ಗುರುವಾರ ಮಂಡನೆಯಾದರೂ ಅದರ ಮೇಲೆ ಕನಿಷ್ಠ ಎರಡು ದಿನ ಚರ್ಚೆ ನಡೆಯಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿ ಗುರುವಾರ ಮತ್ತು ಶುಕ್ರವಾರ ಚರ್ಚೆ ನಡೆದರೂ ಸೋಮವಾರ ಮಂದುವರೆದ ಚರ್ಚೆ ಬಳಿಕ ಸಂಜೆ ಮತಕ್ಕೆ ಹಾಕಬಹುದು. ಆಗ ಸದನದಲ್ಲಿ ಹಾಜರಿರುವ ಸದಸ್ಯರ ಸಂಖ್ಯೆಯಲ್ಲಿ‌ ಬಹುಮತ ತೋರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸೋಮವಾರದವರೆಗೂ ಅತೃಪ್ತ ಶಾಸಕರು ಮೈತ್ರಿ ನಾಯಕರ ಕೈಗೆ ಸಿಗದಂತೆ ಕೇಸರಿಪಡೆ ಮುನ್ನೆಚ್ಚರಿಕೆ ವಹಿಸಲಿದೆ ಎನ್ನಲಾಗಿದೆ.

ಇನ್ನು ರಿವರ್ಸ್ ಆಪರೇಷನ್ ಭೀತಿ ಕೂಡ ಇದ್ದು, ಬಿಜೆಪಿಯ ಎಲ್ಲಾ ಶಾಸಕರನ್ನೂ ರಮಡಾ ರೆಸಾರ್ಟ್​ನಲ್ಲಿ ಇರಿಸಲಾಗಿದೆ. ಎರಡು ದಿನದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡ ಶಾಸಕರ‌ ಜೊತೆ ರೆಸಾರ್ಟ್​ನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ, ವಿಶ್ವಾಸ ಮತಯಾಚನೆ ವರೆಗೂ ಬಿಜೆಪಿ ಶಾಸಕರ ರೆಸಾರ್ಟ್ ವಾಸ್ತವ್ಯ ಮುಂದುವರೆಯಲಿದ್ದು, ಎಲ್ಲರಿಗೂ ವಿಪ್ ಜಾರಿಗೊಳಿಸಲಾಗಿದೆ. ಸದನಕ್ಕೆ ತಡವಾಗಿ ಬರುವುದು, ಗೈರಾಗುವುದನ್ನ ತಪ್ಪಿಸಲು ನಿತ್ಯ ಶಾಸಕರನ್ನು ಒಟ್ಟಿಗೆ ಬಸ್​ನಲ್ಲಿ ಕರೆತಂದು ಮತ್ತೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ.

For All Latest Updates

TAGGED:

ABOUT THE AUTHOR

...view details