ಕರ್ನಾಟಕ

karnataka

ಸೋಮಣ್ಣಗೆ ಒಳ್ಳೆಯ ಅವಕಾಶ ಸಿಗಲಿದೆ : ಹಂಗಾಮಿ ಸಿಎಂ ಬೊಮ್ಮಾಯಿ‌

By

Published : May 16, 2023, 3:28 PM IST

ಚುನಾವಣಾ ಫಲಿತಾಂಶದ ಕುರಿತು ವಿ.ಸೋಮಣ್ಣ ಜೊತೆ ಹಂಗಾಮಿ ಸಿಎಂ ಬೊಮ್ಮಾಯಿ‌ ಪರಾಮರ್ಶೆ ನಡೆಸಿದರು.

ಸೋಮಣ್ಣ ನಿವಾಸಕ್ಕೆ ಹಂಗಾಮಿ ಸಿಎಂ ಬೊಮ್ಮಾಯಿ‌ ಭೇಟಿ
ಸೋಮಣ್ಣ ನಿವಾಸಕ್ಕೆ ಹಂಗಾಮಿ ಸಿಎಂ ಬೊಮ್ಮಾಯಿ‌ ಭೇಟಿ

ಬೆಂಗಳೂರು : ಮಾಜಿ ಸಚಿವ ವಿ ಸೋಮಣ್ಣ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾಗಿರಬಹುದು. ಆದರೆ ಮುಂದೆ ಅವರಿಗೆ ಒಳ್ಳೆಯ ಅವಕಾಶ ಸಿಗಲಿದೆ ಎಂದು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ. ವಿಜಯನಗರದಲ್ಲಿರುವ ಸೋಮಣ್ಣ ನಿವಾಸಕ್ಕೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಈ ರೀತಿ ಹೇಳಿದರು. ಚುನಾವಣಾ ಫಲಿತಾಂಶದ ಕುರಿತು ಉಭಯ ನಾಯಕರು ಪರಾಮರ್ಶೆ ನಡೆಸಿದರು.

ಬೆಳಗ್ಗೆಯಷ್ಟೇ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ. ಕೆ. ಸುಧಾಕರ್ ನಿವಾಸಕ್ಕೆ ತೆರಳಿ ಧೈರ್ಯ ತುಂಬಿದ್ದ ಬೊಮ್ಮಾಯಿ‌ ಅವರು ನಂತರ ಸೋಮಣ್ಣಗೂ ಆತ್ಮಸ್ಥೈರ್ಯ ತುಂಬಿದರು. ಕಡೆ ಕ್ಷಣದವರೆಗೂ ಹೋರಾಟ ನಡೆಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಒಳ್ಳೆಯ ದಿನಗಳು ಬರಲಿವೆ. ನಾವೆಲ್ಲಾ ನಿಮ್ಮ ಜೊತೆ ಇದ್ದೇವೆ ಎಂದು ಅಭಯ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ಸೋಮಣ್ಣ ನಮ್ಮ ಹಿರಿಯ ನಾಯಕರು. ಪಕ್ಷದ ಇಚ್ಛೆಯಂತೆ ಚಾಮರಾಜನಗರ ಮತ್ತು ವರುಣಾದಲ್ಲಿ ಸ್ಫರ್ಧಿಸಿ ಪರಾಭವಗೊಂಡಿದ್ದಾರೆ. ಮುಂದೆ ಒಳ್ಳೆಯ ಅವಕಾಶ ಅವರಿಗೆ ಸಿಗುತ್ತದೆ. ವರಿಷ್ಠರು ಕೂಡಾ ಸೋಮಣ್ಣ ಅವರ ಜೊತೆ ಮಾತಾಡಿದ್ದಾರೆ ಎಂದು ತಿಳಿಸಿದರು.

ಶಾಸಕಾಂಗ ಪಕ್ಷದ ಸಭೆ ಕರೆಯಲು ರಾಜ್ಯಾಧ್ಯಕ್ಷರಿಗೆ ಹೇಳಿದ್ದೇನೆ. ಬಹುತೇಕ ನಾಳೆ ಅಥವಾ ನಾಡಿದ್ದು ಸಭೆ ಕರೆಯಬಹುದು. ಆದರೆ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಬೊಮ್ಮಾಯಿ ಹೇಳಿದರು.

ಸೋಮಣ್ಣ ಪ್ರತಿಕ್ರಿಯೆ : ಇನ್ನು ಇದೇ ವೇಳೆ ಮಾತನಾಡಿದ ಮಾಜಿ ಸಚಿವ ವಿ. ಸೋಮಣ್ಣ ಅವರು, ಬೊಮ್ಮಾಯಿ ಸವರು ಪರಿಸ್ಥಿತಿಯನ್ನು ಅವಲೋಕನ ಮಾಡಿ ಬಂದಿದ್ದಾರೆ. ನಮಗೆ ಅದು ದೊಡ್ಡದೇನಲ್ಲ, ಸ್ನೇಹಿತನಾಗಿ ಬಂದಿದ್ದಾರೆ. ನಾನು ಯಾವುದೇ ಅವಕಾಶಗಳನ್ನು ನಿರೀಕ್ಷೆ ಮಾಡಿದವನಲ್ಲ. ಪಕ್ಷ ಏನು ಹೇಳಿದೆಯೋ ಅದನ್ನು ಮಾಡಿದ್ದೇನೆ. ಯಾರೂ ತೆಗೆದುಕೊಳ್ಳದ ರಿಸ್ಕ್ ತೆಗೆದುಕೊಂಡಿದ್ದೇನೆ. ಒಂದೊಂದು ಸಲ ಒಳ ಏಟುಗಳು ಆದಾಗ ಇದೆಲ್ಲಾ ನಡೆಯುತ್ತದೆ. ಕಾಲವೇ ಪ್ರತಿಯೊಂದಕ್ಕೂ ಉತ್ತರ ಕೊಡುತ್ತದೆ ಎಂದರು.

ಮಾಜಿ ಸಿಎಂ ಯಡಿಯೂರಪ್ಪನವರು ಇದುವರೆಗೂ ಕರೆ ಮಾಡಿಲ್ಲ. ಚುನಾವಣೆ ಸಮಯದಲ್ಲಿ ಪ್ರತಿ ದಿನ ಕರೆ ಮಾಡುತ್ತಿದ್ದರು. ಚುನಾವಣೆ ಮುಗಿದ ಮೇಲೆ ಮಾಡಿಲ್ಲ. ನನಗೆ ಏನು ಧೈರ್ಯ ತುಂಬಬೇಕ್ರೀ? 45 ವರ್ಷಗಳಿಂದ ಇದೇ ಕೆಲಸ ಮಾಡಿದ್ದೇನೆ. ನನ್ನ ಚಿನ್ನದಂತಹ ಕ್ಷೇತ್ರ ಬಿಟ್ಟು ವರಿಷ್ಠರು ಹೇಳಿದರಲ್ಲ ಎಂದು ಹೋದೆ. ಅದನ್ನು ಅರಗಿಸಿಕೊಳ್ಳುವ ಶಕ್ತಿ ಕೂಡಾ ನನಗಿದೆ. ನಾವೆಲ್ಲರೂ ಮನುಷ್ಯರಲ್ವಾ, ನಾವೇನು ದೆವ್ವನಾ? ಪಕ್ಷ ನನಗಿಂತ ದೊಡ್ಡದು, ಪಕ್ಷ ಹೇಳಿದ್ದನ್ನು ನನ್ನಂತಹವರು ಮಾಡದೇ ಇನ್ಯಾರು ಮಾಡುವುದಕ್ಕೆ ಆಗುತ್ತದೆ ಎಂದು ಸೋಮಣ್ಣ ತಿಳಿಸಿದರು.

ಟಾಸ್ಕ್ ಕೊಟ್ಟ ಮೇಲೆ ನಾನು ಯಾವ ಕಡೆ ತಿರುಗಿಯೇ ನೋಡಲಿಲ್ಲ. ಕೊನೆಯ ಗಳಿಗೆಯಲ್ಲಿ ಸ್ವಲ್ಪ ಏನೆಲ್ಲಾ ಆಗಿದೆ. ನಾನು ಸುಮ್ಮನೆ ಕೂತ್ಕೋತೀನಾ? ನಾಲ್ಕು ಜನರಿಗೆ ಸಹಾಯ ಮಾಡಿಲ್ಲ ಅಂದರೆ ನಾನು ಮನುಷ್ಯನಾಗಿರಲ್ಲ. ಹಾಗಾಗಿ ಅದಕ್ಕೆ ಅಡ್ಜಸ್ಟ್ ಆಗಬೇಕಾಗುತ್ತದೆ. ಗೋವಿಂದರಾಜನಗರ ನನಗೆ ಕಣ್ಣು, ಕಿವಿ, ಹೃದಯ ಎಲ್ಲವೂ ಆಗಿತ್ತು. ಪಕ್ಷದ ತೀರ್ಮಾನವನ್ನು ತಲೆ ಮೇಲೆ ಹೊತ್ತು ಕೆಲಸ ಮಾಡಿದ್ದೇನೆ. ಬಾಕಿ ತೀರ್ಮಾನವನ್ನು ಪಕ್ಷದ ವರಿಷ್ಠರು ಮಾಡಬೇಕಾಗುತ್ತದೆ. ಆದರೇ ಮಾಡೋದು ಬಿಡೋದು ಅವರಿಗೆ ಸೇರಿದ್ದು. ಮಾಡಿದರೆ ಪಕ್ಷ ಕೂಡಾ ಸ್ಪಂದಿಸಿತು ಎಂಬ ಸಂದೇಶವನ್ನೂ ಕೊಡುತ್ತದೆ ಎಂದು ಸೋಮಣ್ಣ ಹೇಳಿದರು.

ಇದನ್ನೂ ಓದಿ :25 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಕೊಡಗಿನಲ್ಲಿ ಗೆಲುವಿನ ನಗೆಬೀರಿದ ಕಾಂಗ್ರೆಸ್

ABOUT THE AUTHOR

...view details