ಕರ್ನಾಟಕ

karnataka

By

Published : Jul 10, 2023, 6:49 PM IST

ETV Bharat / state

ರಾಹುಲ್ ಗಾಂಧಿ ವಿರುದ್ಧ ಷಡ್ಯಂತ್ರ ನಡೀತಿದೆ.. ಜು. 12 ಕ್ಕೆ ಮೌನ ಪ್ರತಿಭಟನೆ ಮಾಡುತ್ತೇವೆ: ಡಿಸಿಎಂ ಡಿ ಕೆ ಶಿವಕುಮಾರ್​

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಜನಪ್ರಿಯತೆ ಸಹಿಸಲಾಗದೆ ಅವರ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಡಿ ಕೆ ಶಿವಕುಮಾರ್​ ದೂರಿದ್ದಾರೆ.

DCM D K Shivakumar
ಡಿಸಿಎಂ ಡಿ ಕೆ ಶಿವಕುಮಾರ್​

ಡಿಸಿಎಂ ಡಿ ಕೆ ಶಿವಕುಮಾರ್​

ಬೆಂಗಳೂರು: ರಾಹುಲ್ ಗಾಂಧಿ ಅವರ ರಾಜಕೀಯ ಜೀವನ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್​, ಜುಲೈ 12 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೂ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ಈ ಪ್ರತಿಭಟನೆಯಲ್ಲಿ ನಾನು, ಮುಖ್ಯಮಂತ್ರಿಗಳು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ಎಲ್ಲಾ ಮಂತ್ರಿಗಳು, ಸಂಸದರು, ಶಾಸಕರು, ಕಾರ್ಯಕರ್ತರು, ಬ್ಲಾಕ್ ಕಾಂಗ್ರೆಸ್, ಮುಂಚೂಣಿ ಘಟಕದ ಅಧ್ಯಕ್ಷರು, ಕೌನ್ಸಿಲರ್​ಗಳು ಭಾಗವಹಿಸುತ್ತೇವೆ. ರಾಹುಲ್ ಗಾಂಧಿ ಅವರು ಎಂದಿಗೂ ದೇಶದ ಸ್ವಾಭಿಮಾನಕ್ಕೆ ಧಕ್ಕೆ ತಂದಿಲ್ಲ. ರಾಜ್ಯದಲ್ಲಿ ಅವರು ಮಾಡಿದ ಭಾಷಣ ಮುಂದಿಟ್ಟುಕೊಂಡು ರಾಜಕೀಯವಾಗಿ ಅವರನ್ನು ಮುಗಿಸುವ ಷಡ್ಯಂತ್ರ ನಡೆಯುತ್ತಿದ್ದು, ನಾವು ಅದನ್ನು ಖಂಡಿಸುತ್ತೇವೆ. ದೇಶದ ಪರವಾಗಿ, ಸತ್ಯದ ಪರವಾಗಿ ಧ್ವನಿ ಎತ್ತುತ್ತಿರುವ ರಾಹುಲ್ ಗಾಂಧಿ ಅವರ ಪರವಾಗಿ ಇಡೀ ದೇಶ ಹಾಗೂ ವಿರೋಧ ಪಕ್ಷಗಳು ನಿಲ್ಲುವ ಸಂದೇಶ ರವಾನಿಸಬೇಕಾಗಿದೆ ಎಂದರು.

ಕೋರ್ಟ್​ ತೀರ್ಪಿನ ವಿಚಾರವಾಗಿ ನಾನು ಹೇಳಲ್ಲ. ಆದ್ರೆ ಭಾರತ ಜೋಡೋ ಯಾತ್ರೆಯಲ್ಲಿ ಅವರಿಗೆ ಜನರಿಂದ ಸಿಕ್ಕ ಪ್ರೀತಿ ವಿಶ್ವಾಸ, ಕರ್ನಾಟಕ ರಾಜ್ಯದಲ್ಲಿ ಅವರಿಗೆ ಸಿಕ್ಕ ಭವ್ಯ ಯಶಸ್ಸು ಸಹಿಸಲಾಗದೇ ರಾತ್ರೋರಾತ್ರಿ ಅವರ ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿದೆ. ರಾಜ್ಯದಲ್ಲಿ ಅವರು ಯಾತ್ರೆ ಮಾಡಿದ ಮಾರ್ಗದ ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಿದೆ. ಮುಂದೆ ಅವರಿಗೆ ದೇಶದ ಪೂರ್ವದಿಂದ ಪಶ್ಚಿಮದವರೆಗೆ ಯಾತ್ರೆ ಮಾಡುವ ಸಲಹೆ ಬಂದಿದ್ದು, ಅವರ ಈ ಯಶಸ್ಸು, ಜನಪ್ರಿಯತೆ ಸಹಿಸಲಾಗದೇ ಈ ಷಡ್ಯಂತ್ರ ಮಾಡಲಾಗಿದೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ದೇಶದ ಎಲ್ಲಾ ಪ್ರಮುಖ ಕೇಂದ್ರಗಳಲ್ಲಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಈ ಮೂಲಕ ಮನವಿ ಮಾಡುತ್ತೇನೆ ಎಂದು ಹೇಳಿದರು.

ಇನ್ನು ಜುಲೈ 17- 18ರಂದು ದೇಶದ ವಿರೋಧ ಪಕ್ಷಗಳ ನಾಯಕರ ಸಭೆ ಬೆಂಗಳೂರಿನಲ್ಲಿ ನಡೆಯಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಈ ಸಭೆಯಲ್ಲಿ ಭಾಗವಹಿಸಬೇಕು ಎಂದು ಆಹ್ವಾನ ನೀಡಿದ್ದು, ಅವರು ಕೂಡ ಭಾಗವಹಿಸುವ ಬಗ್ಗೆ ಸಂದೇಶ ಬಂದಿದೆ. ಈ ಸಭೆಯಲ್ಲಿ ಭಾಗವಹಿಸುತ್ತಿರುವ ದೇಶದ ಎಲ್ಲಾ ವಿರೋಧ ಪಕ್ಷಗಳ ನಾಯಕರನ್ನು ನಾವು ಸ್ವಾಗತಿಸುತ್ತೇವೆ ಎಂದರು.

ಮುಸ್ಲಿಂ ಮೀಸಲಾತಿ ರದ್ದು ವಿಚಾರವಾಗಿ ಕೇಳಿದ ಪ್ರಶ್ನೆಗೆ, 'ಈ ವಿಚಾರವಾಗಿ ಇಂದು ಪ್ರಮುಖ ದಿನಪತ್ರಿಕೆಗಳು ಕೂಲಂಕಶವಾಗಿ ಅಧ್ಯಯನ ಮಾಡಿ ವರದಿ ಮಾಡಿದ್ದು, ನಾವು ಈ ವಿಚಾರದಲ್ಲಿ ಸುದೀರ್ಘವಾಗಿ ಚರ್ಚೆ ಮಾಡುತ್ತೇವೆ. ಸೂಕ್ತ ಮಾಹಿತಿ ಪಡೆದ ನಂತರ ಸರ್ಕಾರದ ಅಭಿಪ್ರಾಯ ತಿಳಿಸುತ್ತೇನೆ' ಎಂದು ತಿಳಿಸಿದರು.

ಭಾರತೀಯ ಆಹಾರ ನಿಗಮದ ಹರಾಜಿನಲ್ಲಿ ಹೆಚ್ಚಿನ ರಾಜ್ಯಗಳು ಅಕ್ಕಿ ಖರೀದಿಗೆ ಆಸಕ್ತಿ ವಹಿಸದ ವಿಚಾರವಾಗಿ ಕೇಳಿದ ಪ್ರಶ್ನೆಗೆ, "ನಾವು ಪುಕ್ಸಟ್ಟೆಯಾಗಿ ಅಕ್ಕಿ ಕೇಳುತ್ತಿಲ್ಲ. ನಮ್ಮ ಅಕ್ಕಿ ಎಲ್ಲೂ ಹೋಗುವುದಿಲ್ಲ. ವಿರೋಧ ಪಕ್ಷದವರ ಮಾರ್ಗದರ್ಶನದಂತೆ ಹಣ ಹಾಕುತ್ತಿದ್ದೇವೆ. ಅವರು ನಮಗೆ ಮಾರ್ಗದರ್ಶನ ಎಚ್ಚರಿಕೆ ನೀಡುತ್ತಿದ್ದು, ನಾವು ಅವರ ಸಲಹೆ ಅಭಿಪ್ರಾಯಕ್ಕೆ ಗೌರವ ನೀಡಬೇಕು" ಎಂದು ಡಿಕೆಶಿ ತಿಳಿಸಿದರು.

ಇಂದಿರಾ ಕ್ಯಾಂಟೀನ್ ಭೇಟಿ ವಿಚಾರವಾಗಿ ಕೇಳಿದಾಗ, "ನಾನು ಎಲ್ಲಾ ಶಾಸಕರಿಗೆ ಪತ್ರ ಬರೆದು, ವಾರಕ್ಕೊಮ್ಮೆ ಇಂದಿರಾ ಕ್ಯಾಟೀನ್​ಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ಸೂಚಿಸುತ್ತೇನೆ. ನಾನು ದಾಸರಹಳ್ಳಿಯಲ್ಲಿರುವ ತಂಗುದಾಣಕ್ಕೂ ಭೇಟಿ ನೀಡಬೇಕು ಎಂದು ಆಲೋಚಿಸಿದ್ದೆ. ಅದನ್ನು ಬಂದ್ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ" ಎಂದು ತಿಳಿಸಿದರು.

ಜೈನಮುನಿ ಹತ್ಯೆ ಪ್ರಕರಣ ಸಿಬಿಐಗೆ ನೀಡಬೇಕು ಎಂಬ ಮಾಜಿ ಗೃಹಮಂತ್ರಿಗಳ ಹೇಳಿಕೆ ಬಗ್ಗೆ ಕೇಳಿದಾಗ, 'ಈ ವಿಚಾರವಾಗಿ ಗೃಹಸಚಿವರು ಉತ್ತರ ನೀಡಲಿದ್ದಾರೆ' ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.

ಇದನ್ನೂ ಓದಿ:ಪಶುಸಂಗೋಪನಾ ಇಲಾಖೆಯಲ್ಲಿ ಖಾಲಿಯಿರುವ ವೈದ್ಯರು, ವಿವಿಧ ಹುದ್ದೆಗಳ ಭರ್ತಿಗೆ ಶೀಘ್ರವೇ ಕ್ರಮ: ಸಚಿವ ವೆಂಕಟೇಶ್

ABOUT THE AUTHOR

...view details