ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಸಾಹಿತಿಗಳಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಾಹಿತಿಗಳಿಗೆ ರಕ್ಷಣೆ ನೀಡಲು ರಾಜ್ಯ ಸರ್ಕಾರ ವಿಫಲ: ಸಿದ್ದರಾಮಯ್ಯ - ಸಿದ್ದರಾಮಯ್ಯ ಸುದ್ದಿ
ವಿಚಾರವಾದಿ ಭಗವಾನ್ಗೆ ಮಸಿ ಬಳಿದ ವಿಚಾರ ಪ್ರಸ್ತಾಪ ಮಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಈ ಸರ್ಕಾರದಲ್ಲಿ ಸಾಹಿತಿಗಳಿಗೆ ರಕ್ಷಣೆಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
![ಸಾಹಿತಿಗಳಿಗೆ ರಕ್ಷಣೆ ನೀಡಲು ರಾಜ್ಯ ಸರ್ಕಾರ ವಿಫಲ: ಸಿದ್ದರಾಮಯ್ಯ Siddaramaiah](https://etvbharatimages.akamaized.net/etvbharat/prod-images/768-512-10509519-69-10509519-1612516333537.jpg)
ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಚಾರವಾದಿ ಭಗವಾನ್ಗೆ ಮಸಿ ಬಳಿದ ವಿಚಾರ ಪ್ರಸ್ತಾಪ ಮಾಡಿ, ಈ ಸರ್ಕಾರದಲ್ಲಿ ಸಾಹಿತಿಗಳಿಗೆ ರಕ್ಷಣೆಯಿಲ್ಲ. ಹಂಪನಾ ಅವರನ್ನು ಠಾಣೆಗೆ ಕರೆದು ವಿಚಾರಿಸಿದ್ದಾರೆ. ಅವರೇನು ಕಾನೂನಿಗೆ ವಿರುದ್ಧ ಮಾತನಾಡಿರಲಿಲ್ಲ. ಈಗ ಭಗವಾನ್ ಅವರಿಗೆ ಮಸಿ ಬಳಿಯಲಾಗಿದೆ. ಮೀರಾ ರಾಘವೇಂದ್ರ ಎಂಬುವರು ಭಗವಾನ್ ಅವರ ಮೇಲೆ ಕೇಸ್ ಹಾಕಿದ್ದಾರೆ. ರಾಮನ ಬಗ್ಗೆ ಮಾತನಾಡಿದ್ದಾರೆಂದು ಕೇಸ್ ಹಾಕಿದ್ದಾರೆ. ಅದಕ್ಕೆ ಜಾಮೀನು ಕೂಡ ಸಿಕ್ಕಿದೆ. ಹೊರಗಡೆ ಬಂದ ಮೇಲೆ ಮಸಿ ಬಳಿದಿದ್ದಾರೆ. ಮಸಿ ಬಳಿದಿದ್ದು ತೀವ್ರ ಖಂಡನೀಯ ಎಂದಿದ್ದಾರೆ.
ಹಿರಿಯ ಸಾಹಿತಿಗೆ ಕೋರ್ಟ್ ಆವರಣದಲ್ಲೇ ಮಸಿ ಬಳಿಯುತ್ತಾರೆ. ಈ ಸರ್ಕಾರದಲ್ಲಿ ಸಾಹಿತಿಗಳಿಗೆ ರಕ್ಷಣೆಯಿಲ್ಲ. ಮೀರಾ ರಾಘವೇಂದ್ರ ಮೇಲೆ ಕೂಡಲೇ ಪೊಲೀಸರು ಕ್ರಮ ಜರುಗಿಸಬೇಕು. ಹೆಣ್ಣುಮಗಳೇ ಆಗಿದ್ದರೂ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.